ಇದೀಗ ರಾಷ್ಟ್ರಪತಿ ಅಂಗಳಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣ!
ಬೆಂಗಳೂರು, ಫೆ. 03: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ರಾಷ್ಟ್ರಪತಿಗಳ ಬಳಿ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ. ಈ ಕುರಿತು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿರುವ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು, ರಮೇಶ್ ಜಾರಕಿಹೊಳಿ ಅವರು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಚಿವ ಸ್ಥಾನದಲ್ಲಿ ಮುಂದುವರಿದರೆ ಹಾನಿಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Recommended Video
ರಾಸಲೀಲೆ ಪ್ರಕರಣದ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಲು ಆ ಹೆಣ್ಣುಮಗಳು ಒಪ್ಪಿಗೆ ಕೊಟ್ಟಿರಬಹುದು. ಜೊತೆಗೆ ಆ ಹೆಣ್ಣು ಮಗಳು ತನಗೆ ವಂಚನೆ ಆಗಿದೆ ಎಂದಿದ್ದಾಳೆ. ಅವಳಿಗೆ ಸುಳ್ಳು ಆಶ್ವಾಸನೆ ಕೊಟ್ಟಿದ್ದು, ಅವರ ಮೇಲೆ ಲೈಂಕಿಕ ಕ್ರಿಯೆ ನಡೆಸಿದ್ದು, ಇದೆಲ್ಲವೂ ಅಪರಾಧ ಎಂದು ತಮ್ಮ ಹೇಳಿಕೆಯಲ್ಲಿ ಬ್ರಿಜೇಶ್ ಕಾಳಪ್ಪ ವಿವರಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯ
ಇಡೀ ಪ್ರಕರಣದ ತನಿಖೆ ಸುಸೂತ್ರವಾಗಿ ನಡೆಯಲು ರಮೇಶ್ ಅವರ ರಾಜೀನಾಮೆ ಪಡೆಯಬೇಕು ಎಂದು ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ. ಮಂತ್ರಿಯಾದಮೇಲೆ ಅದಕ್ಕಿರುವ ಮಾನದಂಡದಂತೆ ನಡೆಯಬೇಕು. ಆದರೆ ಹಾಗೆ ನಡೆದುಕೊಳ್ಳಲು ಬಿಜೆಪಿಯವರಿಗೆ ನೈತಿಕತೆ ಎಲ್ಲಿದೆ? ಸಚಿವ ಅರವಿಂದ ಲಿಂಬಾವಳಿ ಅವರ ಪ್ರಕರಣ ಏನು ಮಾಡಿದ್ರು? ಅವರ ಸಿಡಿ ಪ್ರಕರಣ ಏನಾಯ್ತು ಎಂಬುದು ಇವತ್ತಿಗೂ ಗೊತ್ತಾಗಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಮೇಲೆ ಭರವಸೆಯಿದೆ
ಹಿಂದೆ ಸದನದಲ್ಲಿ ಸಿನಿಮಾ ನೋಡಿದ್ದ ಲಕ್ಷ್ಮಣ ಸವದಿ ಅವರನ್ನು ಈಗ ಮತ್ತೆ ಉಪಮುಖ್ಯಮಂತ್ರಿ ಮಾಡಿದ್ದಾರೆ. ಅದೇ ಪ್ರಕರಣದಲ್ಲಿದ್ದ ಸಿ.ಸಿ. ಪಾಟೀಲ್ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಮಾನ-ಮರ್ಯಾದೆ ಎಲ್ಲಿದೆ? ಎಂದು ಬ್ರಿಜೇಶ್ ಕಾಳಪ್ಪ ಲೇವಡಿ ಮಾಡಿದ್ದಾರೆ.
ಆದರೆ ಪ್ರಧಾನಿ ಮೋದಿ ಅವರು ಇಂಥಹ ವಿಚಾರಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾರೆಂಬ ಭರವಸೆಯಿದೆ. ಯಾಕೆಂದರೆ ಈ ಹಿಂದೆ ಗುಜರಾತ್ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರು ಇಂತಹ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಆಗ ಪ್ರಧಾನಿ ಮೋದಿ ಅವರು ಕಠಿಣ ಕ್ರಮಕೈಗೊಂಡು ವಜಾ ಮಾಡಿದ್ದರು. ಇಂತಹ ವಿಚಾರದಲ್ಲಿ ಪ್ರಧಾನಿ ಸೀರಿಯಸ್ ಆಗಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರ ಪ್ರಕರಣದಲ್ಲಿಯೂ ಮೋದಿ ಅವರು ಹಾಗೆ ನಡೆದು ಕೊಳ್ಳುತ್ತಾರೆಂಬ ಭರವಸೆಯಿದೆ ಎಂದರು.
ರಾಷ್ಟ್ರಪತಿಗಳಿಗೆ ದೂರು ಕೊಡಲು ಕಾಂಗ್ರೆಸ್ ನಿರ್ಧಾರ
ರಮೇಶ್ ಜಾರಕಿಹೊಳಿ ಪ್ರಭಾವಿ ರಾಜಕಾರಣಿ. ಅವರಿಗೆ ಸರ್ಕಾವರನ್ನು ಬೀಳಿಸುವ ಶಕ್ತಿಯಿದೆ. ಹಾಗೆಯೇ ಸರ್ಕಾರವನ್ನು ರಚಿಸುವ ಶಕ್ತಿಯೂ ಇದೆ. ಪೊಲೀಸರನ್ನೂ ಅವರು ಯಾಮಾರಿಸಬಹುದು. ಅದರಿಂದಾಗಿ ಅವರನ್ನು ತಕ್ಷಣ ಅಧಿಕಾರದಿಂದ ಕೆಳಗಿಳಿಸಬೇಕು. ಕೂಡಲೇ ಸಿಎಂ ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಪಡೆದುಕೊಳ್ಳಬೇಕು
ರಮೇಶ್ ಜಾರಕಿಹೊಳಿ ಅವರು ಸಚಿವಸ್ಥಾನಕ್ಕೆ ರಾಜೀನಾಮೆ ಕೊಡದಿದ್ದರೆ, ನಾವು ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತೇವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೂರು ಕೊಡುತ್ತೇವೆ. ಜೊತೆಗೆ ಕರ್ನಾಟಕದ ರಾಜ್ಯಪಾಲರಿಗೂ ದೂರು ಕೊಡುತ್ತೇವೆ. ತಕ್ಷಣ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಬ್ರಿಜೇಶ್ ಕಾಳಪ್ಪ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ರಮೇಶ್ ಜಾರಕಿಹೊಳಿ ಮೇಲಿನ ಆರೋಪವೇನು?
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ನಿನ್ನೆ (ಮಾ. 02) ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ದೂರು ಸಲ್ಲಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಇನ್ನೂ ಎಫ್ಐಆರ್ ಆಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ಕೊಟ್ಟಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ದಿನೇಶ್ ಕಲ್ಲಹಳ್ಳಿ ಯಾರು ಅಂತಾ ನನಗೇ ಗೊತ್ತಿಲ್ಲ. ಜೊತೆಗೆ ಅದು ನಕಲಿ ವಿಡಿಯೋ. ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.