ಪಕ್ಷೇತರ ಶಾಸಕರಿಗಾಗಿ ಬಡಿದಾಟ: ಕೈ-ಕೈ ಮಿಲಾಯಿಸಿದ ಕಾರ್ಯಕರ್ತರು
ಬೆಂಗಳೂರು, ಜುಲೈ 23: ಪಕ್ಷೇತರ ಶಾಸಕರು ತಂಗಿರುವ ರೇಸ್ ಕೋರ್ಸ್ ರಸ್ತೆಯ ನಿತೇಶ್ ಅಪಾರ್ಟ್ಮೆಂಟ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ಪ್ರಾರಂಭಿಸಿದ್ದು, ನಂತರ ಬಿಜೆಪಿ ಕಾರ್ಯಕರ್ತರು ಬಂದು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ.
ಪಕ್ಷೇತರ ಶಾಸಕರು ತಂಗಿರುವ ನಿತೇಶ್ ಅಪಾರ್ಟ್ಮೆಂಟ್ ಒಳಕ್ಕೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಬಿಜೆಪಿ ಕಾರ್ಯಕರ್ತರು ಸಹ ಆಗಮಿಸಿದರು. ನಂತರ ಇಬ್ಬರ ನಡುವೆ ಗಲಾಟೆ ಆರಂಭವಾಯಿತು.
ಇಬ್ಬರು ಪಕ್ಷೇತರರಲ್ಲಿ ಒಬ್ಬರು ಮಾತ್ರ ಸದನಕ್ಕೆ ಹಾಜರು ಸಾಧ್ಯತೆ
ಪೊಲೀಸರ ಸಮ್ಮುಖದಲ್ಲಿಯೇ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿದರು. ಪರಿಸ್ಥಿತಿಯು ಹದ್ದು ಮೀರಿದ್ದು, ಪೊಲೀಸರು ಬಹಳ ಕಷ್ಟಪಟ್ಟು ಕಾರ್ಯಕರ್ತರನ್ನು ತಹಬಂದಿಗೆ ತರುವ ಯತ್ನದಲ್ಲಿ ನಿರತರಾಗಿದ್ದಾರೆ.
ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಅವರು ನಿತೇಶ್ ಅಪಾರ್ಟ್ಮೆಂಟ್ನಲ್ಲಿಯೇ ಇದ್ದಾರೆ ಎನ್ನಲಾಗಿದ್ದು, ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಿ ಮತಕ್ಕೆ ಹಾಕುವ ಕೆಲವೇ ನಿಮಿಷದ ಮುಂಚೆ ಸದನಕ್ಕೆ ಬರಲಿದ್ದಾರೆ.
Live Updates ಪಕ್ಷೇತರ ಶಾಸಕರಿರುವ ಅಪಾರ್ಟ್ಮೆಂಟ್ ಮುಂದೆ ಭಾರಿ ಗಲಾಟೆ
ಈ ಮಾಹಿತಿ ದೊರೆತ ಕೂಡಲೇ ಕಾಂಗ್ರೆಸ್ನ ಇವಾನ್ ಡಿಸೋಜಾ ನೇತೃತ್ವದಲ್ಲಿ ಕಾರ್ಯಕರ್ತರು ಅಪಾರ್ಟ್ಮೆಂಟ್ ಮುಂದೆ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಅಪಾರ್ಟ್ಮೆಂಟ್ ಒಳಗೆ ನುಗ್ಗಲು ಸಹ ಯತ್ನಿಸಿದರು. ಅದೇ ಸಮಯದಲ್ಲಿ ಅಲ್ಲಿಗೆ ಬಿಜೆಪಿ ಕಾರ್ಯಕರ್ತರು ಸಹ ಆಗಮಿಸಿದರು. ಹಾಗಾಗಿ ಎರಡೂ ಗುಂಪುಗಳ ನಡುವೆ ಗಲಾಟೆ ಸಂಭವಿಸಿತು.