ಕೃಷ್ಣ ಬೈರೇಗೌಡ ಪರ ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಚಾರ
ಬೆಂಗಳೂರು, ಏಪ್ರಿಲ್ 08 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ಪ್ರಚಾರ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸೋಮವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕರುಬರಹಳ್ಳಿಯಲ್ಲಿ ನಡೆದ ಮೂರು ಬೃಹತ್ ಸಮಾವೇಶಗಳಲ್ಲಿ ಮತಯಾಚನೆ ಮಾಡಿದರು.
ಬಿಜೆಪಿ ರಾಮನೊಂದಿಗೆ ಪ್ರಚಾರಕ್ಕೆ ಹೊರಟಿದೆ : ಸಿದ್ದರಾಮಯ್ಯ
'ಮೈತ್ರಿ ನಾಯಕರು ಒಂದಾಗಿ ಕೆಲಸ ಮಾಡಿ ಕೃಷ್ಣ ಬೈರೇಗೌಡರ ಗೆಲುವಿಗೆ ಶ್ರಮಿಸಿ' ಎಂದು ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು. 'ಬೆಂಗಳೂರನ್ನ ಲೂಟಿ ಮಾಡಿದ್ದು ಬಿಜೆಪಿ ನಾಯಕರು. ವ್ಯಾಪಕ ಭ್ರಷ್ಟಾಚಾರ ನಡೆಸಿದ್ದರಿಂದಲೇ ಬಿಬಿಎಂಪಿ ಕಡತಗಳು ಸಿಗಬಾರದೆಂದು ಅವುಗಳನ್ನು ರಾತ್ರೋರಾತ್ರಿ ಬೆಂಕಿಹಾಕಿ ಸುಟ್ಟರು' ಎಂದು ಆರೋಪಿಸಿದರು.
'ನಮ್ಮ ಸರ್ಕಾರಕ್ಕೆ ಇನ್ನೂ ನಾಲ್ಕು ವರ್ಷ ಯಾವುದೇ ತೊಂದರೆಯಾಗಲ್ಲ. ಆದರೂ, ಸರಕಾರ ಕೆಡವಲು ಕುತಂತ್ರ ರಾಜಕಾರಣ ನಡೆಸಲಾಗುತ್ತಿದೆ. ಸರ್ಕಾರ ದೀಪಾವಳಿಗೆ ಬೀಳುತ್ತೆ, ಯುಗಾದಿಗೆ ಬೀಳುತ್ತೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ. ಇದೀಗ ಮೇ 23ಕ್ಕೆ ಗಡುವು ನೀಡಿದ್ದಾರೆ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಳಾಸದ ವಿಚಾರದಲ್ಲಿ ಸಿದ್ದರಾಮಯ್ಯ, ಡಿವಿಎಸ್ ನಡುವೆ ಕಿತ್ತಾಟ!
'ನಮ್ಮ ಶಾಸಕರಿಗೆ ಕೋಟ್ಯಾಂತರ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ. ನೆಮ್ಮದಿಯಾಗಿ ಸರಕಾರ ನಡೆಸಲು ಬಿಜೆಪಿ ನಾಯಕರು ಬಿಡುತ್ತಿಲ್ಲ. ಇವೆಲ್ಲದರ ನಡುವೆಯೂ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಮೋದಿ ಯಾವತ್ತೂ ಬಂದು ನಿಮ್ಮ ಕೆಲಸ ಮಾಡಲ್ಲ' ಎಂದರು.
ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಮಾತನಾಡಿ, 'ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ರಾಜ್ಯದ ದೃಷ್ಟಿಯಿಂದಲೂ ಬಹುಮುಖ್ಯವಾದ ಚುನಾವಣೆ. ಐದು ವರ್ಷದ ಹಿಂದೆ ದೇಶದ ಜನ ಮೋದಿ ನಂಬಿ ಬಹುಮತ ಕೊಟ್ಟರು. ಆದರೆ ಇವತ್ತು ಏನಾಗಿದೆ?' ಎಂದು ಪ್ರಶ್ನಿಸಿದರು.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ಸಿದ್ದರಾಮಯ್ಯ ಅವರು ಮಾತನಾಡಿ, 'ಸದಾನಂದಗೌಡರಿಗೂ, ಕೃಷ್ಣ ಬೈರೇಗೌಡರಿಗೂ ಅಜಾಗಜಾಂತರ ವ್ಯತ್ಯಾಸ ಇದೆ. ಕೃಷ್ಣ ಬೈರೇಗೌಡ ಕೆಲಸ ಮಾಡುವ ಮಂತ್ರಿ, ಸದಾನಂದಗೌಡ ನಿಷ್ಕ್ರಿಯ ಮಂತ್ರಿ. ಮೋದಿ ಅವರದು ಬರೀ ಬಡಾಯಿ. ಬೆಂಗಳೂರಿಗೆ ಮೋದಿ ಕೊಡುಗೆ ಶೂನ್ಯ' ಎಂದು ಆರೋಪಿಸಿದರು.
ಕೃಷ್ಣ ಬೈರೇಗೌಡರಿಗೆ ಅವರು ಮಾತನಾಡಿ, 'ನನಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇರಲಿಲ್ಲ. ಮೈತ್ರಿ ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೇನೆ. ಮೈತ್ರಿ ಸರಕಾರದ ಉಳಿವಿಗೆ ಸ್ಪರ್ಧಿಸಿರುವ ನನಗೆ ಮತ ನೀಡಿ' ಎಂದು ಮನವಿ ಮಾಡಿದರು.