ಒಕ್ಕಲಿಗರ ಸಭೆಯಲ್ಲಿ ಭಾವುಕರಾದ ಆರ್ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ!
ಬೆಂಗಳೂರು, ಅ. 23: ಒಕ್ಕಲಿಗರ ಸಂಘದ ಸಭೆಯಲ್ಲಿ ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ ಅವರ ತಂದೆ ಹನುಮಂತರಾಯಪ್ಪ ಮಗಳ ವಿಚಾರದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ. ನನ್ನ ಮಗಳನ್ನು ನಮ್ಮ ಸಮುದಾಯ ಗೆಲ್ಲಿಸಿಕೊಂಡು ಬರಲೇಬೇಕು. ಸಣ್ಣ ವಯಸ್ಸಿನಲ್ಲಿಯೇ ನನ್ನ ಮಗಳಿಗೆ ನಡೆಯಬಾರದ್ದು ನಡೆದು ಹೋಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಿಂದ ಅವಮಾನ, ನಿಂದನೆಯನ್ನು ನನ್ನ ಮಗಳು ಎದುರಿಸಿದ್ದಾಳೆ.
ಹೀಗಾಗಿಯೇ ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿದಳು. ಜೀವನದಲ್ಲಿ ಅವಮಾನ-ನಿಂದನೆಯನ್ನು ಅವಡುಗಚ್ಚಿ ಸಹಿಸಿಕೊಂಡಳು. ಇದೀಗ ಒಕ್ಕಲಿಗ ಸಮುದಾಯದ ಪ್ರತಿನಿಧಿಯಾಗಿ ನಿಮ್ಮದುರು ಬಂದು ನಿಂತಿದ್ದಾಳೆ. ಈಗ ನನ್ನ ಮಗಳು ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಳೆ. ಮುಂದೆ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕಾದರೆ ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈಗ ಗೆಲ್ಲಬೇಕು. ಈ ಸಲವಾದರೂ ನಮ್ಮ ಸಮುದಾಯದ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ ಅವರ ತಂದೆ ಹನುಮಂತರಾಯಪ್ಪ ಅವರು ಮನವಿ ಮಾಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಮಗಳ ಮದುವೆ
ಚಿಕ್ಕವಯಸ್ಸಿನಲ್ಲಿಯೇ ಮಗಳ ಮದುವೆ ಮಾಡಿಕೊಟ್ಟಿದ್ದೆ. 21 ವರ್ಷಕ್ಕೆ ಮಗಳ ಮದುವೆ ಮಾಡಿದ್ದೆ. ಆದರೆ ಬಹಳ ಬೇಗ ದುರಂತ ನಡೆದು ಹೋಯ್ತು. ಚಿಕ್ಕವಯಸ್ಸಿನಲ್ಲೇ ಮಗಳ ಬದುಕು ದುರಂತಮಯವಾಯ್ತು. ಕುಸುಮಾಗೆ ರಾಜಕೀಯಕ್ಕೆ ಬರುವ ಇಚ್ಚೆಯಿರಲಿಲ್ಲ.
ಆದರೆ ಶಿವಕುಮಾರ್ ಅವರೇ ಮನವೊಲಿಸಿ ಒಪ್ಪಿಸಿದ್ದಾರೆ. ಅದಕ್ಕೆ ಅವಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಳೆ. ಅವಳಿಗೆ ತುಂಬ ಧೈರ್ಯವನ್ನ ತುಂಬಿದ್ದೇನೆ ಎಂದು ಮಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರ ಬಗ್ಗೆ ಹನುಮಂತರಾಯಪ್ಪ ಹೇಳಿದರು.
ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ
ಮುನಿರತ್ನ ಯಾವೊಬ್ಬ ಒಕ್ಕಲಿಗ ನಾಯಕನನ್ನು ಬೆಳೆಸಲಿಲ್ಲ ಎಂದು ಇದೇ ಸಂರ್ದದಲ್ಲಿ ಹನುಮಂತರಾಯಪ್ಪ ಹೇಳಿದರು. ಒಕ್ಕಲಿಗರನ್ನು ಕಂಡರೆ ಅವರಿಗೆ ಆಗುವುದಿಲ್ಲ. ಹೀಗಾಗಿ ನಮ್ಮ ಒಕ್ಕಲಿಗ ನಮ್ಮ ಸಮುದಾಯದ ಮತಗಳು ಹಂಚಿ ಹೋಗಬಾರದು. ಆರ್ ಆರ್ ನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಮುನಿರಾಜುಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ ಈ ಸಭೆ ನಡೆಯುತ್ತಿರಲಿಲ್ಲ.
ಯಾರಾದರೂ ಗೆಲ್ಲಲಿ ಎನ್ನುತ್ತಿದ್ದೇವು
ನಮ್ಮ ಸಮುದಾಯದವರೇ ಮೂರೂ ಜನರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೆ ಯಾರು ಬೇಕಾದರೂ ಗೆಲ್ಲಲಿ ಎಂದು ಸುಮ್ಮನಾಗುತ್ತಿದ್ದೇವು. ಆದರೆ ಬಿಜೆಪಿಯವರು ಮುನಿರತ್ನ ನಾಯ್ಡು ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ನಾವು ಒಗ್ಗಟ್ಟಾಗಬೇಕಿದೆ ಎಂದು ಹನುಮಂತರಾಯಪ್ಪ ಒಕ್ಕಲಿಗ ನಾಯಕರಲ್ಲಿ ಮನವಿ ಮಾಡಿದರು.
ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ಸಭೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಆರ್ ಆರ್ ನಗರದ ಐಡಿಯಲ್ ಹೋಮ್ ಕಮ್ಯೂನಿಟಿ ಹಾಲ್ನಲ್ಲಿ ನಡೆದ ಸಭೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ಹನುಮಂತರಾಯಪ್ಪ ಪುತ್ರಿ ಕುಸುಮಾ ಅವರ ಕುರಿತು ಮಾತನಾಡಿದರು.