'ಉತ್ತರ ಪ್ರದೇಶದ ಯೋಗಿ ಸರ್ಕಾರ ಇವತ್ತು ಭೋಗಿ ಸರ್ಕಾರವಾಗಿದೆ'
ಬೆಂಗಳೂರು, ಸೆ. 01: ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬಂಧನ ಖಂಡಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಸಂತ್ರಸ್ತೆಯ ಪೋಷಕರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿ ಉತ್ತರ ಪ್ರದೇಶ ಪೋಲಿಸರು ವಶಕ್ಕೆ ಪಡೆದಿರುವುದು ಖಂಡನೀಯ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ ಒಗ್ಗಟ್ಟಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇನಾ ಬಿಜೆಪಿ ಮನಸ್ಥಿತಿ?
'ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ದಲಿತ ಹೆಣ್ಣುಮಗಳ ತಂದೆ ತಾಯಿಗೆ ಸಾಂತ್ವಾನ ಹೇಳಲು ಹೋದ ನಮ್ಮ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ನಾಯಕರನ್ನೇ ಈ ರೀತಿ ನಡೆಸಿಕೊಳ್ಳುವ ಬಿಜೆಪಿ, ಜನಸಾಮಾನ್ಯರನ್ನು ಹೇಗೆ ನಡೆಸಿಕೊಳ್ಳಲಿದೆ? ಆ ಪಕ್ಷದ ಮನಸ್ಥಿತಿ ಎಂತಹದು ಎಂಬುದು ದೇಶದ ಜನರ ಮುಂದೆ ಇಂದು ಬಯಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಹತ್ರಾಸ್ಗೆ ಹೊರಟಿದ್ದ ರಾಹುಲ್, ಪ್ರಿಯಾಂಕಾ ಬಂಧನ
ಬೇಟಿ ಬಚಾವೋ ಬೇಟಿ ಪಡಾವೋ?
ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಬೇಟಿ ಬಚಾವ್, ಬೇಟಿ ಪಡಾವ್ ಎಂಬ ಘೋಷಣೆ ಕೊಟ್ಟರು. ಇವತ್ತು ಉತ್ತರ ಪ್ರದೇಶದಲ್ಲಿ ಯೋಗಿ ಅವರ ಸರ್ಕಾರ ರೋಗಿ ಸರ್ಕಾರ ಆಗಿದೆ.
ಈ ಅತ್ಯಾಚಾರ ಕೇವಲ ದೇಶದ ಪ್ರತಿ ಹೆಣ್ಣಿನ ಸ್ವಾಭಿಮಾನ ವಿಚಾರ ಅಲ್ಲ. ಇಡೀ ಮನುಕುಲಕ್ಕೆ ಆಗಿರುವ ಅಪಮಾನ. ಆಕೆಯ ಶವವನ್ನು ಪೋಷಕರಿಗೆ ತೋರಿಸದೆ ಬಿಜೆಪಿ ಸರ್ಕಾರ ಅತ್ಯಂತ ಕ್ರೂರತೆ ಪ್ರದರ್ಶಿಸಿದೆ.
ಮಾನವೀಯ ದೃಷ್ಟಿಯಿಂದ ಬೇಟಿ
ಇದನ್ನು ಮಾನವೀಯ ದೃಷ್ಟಿಯಿಂದ ನಮ್ಮ ಪಕ್ಷದ ಇಬ್ಬರು ರಾಷ್ಟ್ರ ನಾಯಕರು ಸಂತ್ರಸ್ತೆಯ ತಂದೆ ತಾಯಿಗೆ ಶಕ್ತಿ, ಆತ್ಮಸ್ಥೈರ್ಯ ತುಂಬಲು ಹೋದರೆ ಅವರ ಮೇಲೆ ಪೊಲೀಸರು ಹಲ್ಲೆ ಮಾಡಿ ಬಂಧಿಸಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಯಾರಾದರೂ ಆಸ್ಪತ್ರೆ ಸೇರಿದರೆ, ಮೃತಪಟ್ಟರೆ, ತೊಂದರೆಗೆ ಒಳಗಾದ ಸಂದರ್ಭದಲ್ಲಿ ಅವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಮಾಧಾನದ ಮಾತುಗಳನ್ನು ಹೇಳುವುದು ಸಾಮಾನ್ಯ. ಅದೇ ದೃಷ್ಟಿಯಿಂದ ನಮ್ಮ ನಾಯಕರು ಅವರಿಗೆ ಸಾಂತ್ವಾನ ಹೇಳಲು ಹೋಗುತ್ತಿದ್ದರೆ ಹೊರತು ಕಾನೂನು ಸುವ್ಯವಸ್ಥೆಗೆ ಭಂಗ ತರಲು ಅಲ್ಲ.
ಜನಸಾಮಾನ್ಯರ ಗತಿ ಏನು?
ಆದರೆ ಸರ್ಕಾರ ತನ್ನ ಅಧಿಕಾರ ಹಾಗೂ ಪೊಲೀಸ್ ಪಡೆಯನ್ನು ದುರ್ಬಳಕೆ ಮಾಡಿಕೊಂಡು ನಮ್ಮ ನಾಯಕರನ್ನು ತಡೆದು, ಅವರನ್ನು ನಡೆಸಿಕೊಂಡ ರೀತಿ ಸರಿ ಅಲ್ಲ. ರಾಷ್ಟ್ರ ನಾಯಕರನ್ನೇ ಈ ರೀತಿ ನಡೆಸಿಕೊಂಡರೆ, ಜನರನ್ನು ನೀವು ಯಾವ ರೀತಿ ನೋಡುತ್ತೀರಾ ಎಂಬುದನ್ನು ತೋರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಈ ದೇಶದ ಜನ ನಿಮ್ಮ ಎಲ್ಲ ಕ್ರಮಗಳನ್ನು ಜನ ನೋಡುತ್ತಿದ್ದಾರೆ. ನಿಮ್ಮ ಈ ನಡೆಯನ್ನು ಖಂಡಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ, ದೇಶದ ಜನ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.