Bengaluru: ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದ ಸಿಮೆಂಟ್ ಮಿಕ್ಸರ್ ಲಾರಿ, ತಾಯಿ ಮಗಳ ದುರ್ಮರಣ
ರಾಜ್ಯ ರಾಜಧಾನಿಯಲ್ಲಿ ಕಾರಿನ ಮೇಲೆ ಕಾಂಕ್ರಿಟ್ ಲಾರಿ ಮುಗುಚಿ ಬಿದ್ದಿದ್ದು ಸ್ಥಳದಲ್ಲೇ ತಾಯಿ ಮಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರು, ಫೆಬ್ರವರಿ. 02: ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಕಾರಿನ ಮೇಲೆ ಬಿದ್ದ ಪರಿಣಾಮ ತಾಯಿ ಮಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅಪಘಾತ ಪ್ರಕರಣಗಳು ವರದಿಯಾಗುತ್ತಲೆ ಇವೆ. ಪ್ರತಿದಿನ ನಾವು ಕೇಳುವ ಈ ಸುದ್ದಿಗಳಲ್ಲಿ ಕೆಲವೊಂದು ಘಟನೆಗಳು ಭಾರಿ ನೋವಿಗೆ ನೂಕುತ್ತವೆ. ಅಂತಹದ್ದೆ ಘಟನೆ ಇದು ಕೂಡ. ಕಾರಿನಲ್ಲಿ ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ನಜ್ಜುಗುಜ್ಜಾಗಿ ಮೃತಪಟ್ಟಿದ್ದಾರೆ.
ಯುವತಿಗೆ ಮೆಸೇಜ್ ಮಾಡಿದ ಯುವಕನ ಕೊಲೆ: ಚಾರ್ಮಾಡಿ ಘಾಟ್ನಲ್ಲಿ ಶವ ಪತ್ತೆ
ಕನಕಪುರ ರಸ್ತೆಯ ಕಗ್ಗಲಿಪುರದ ಕಾಂಕಾರ್ಡ್ ನಾಪಾ ವ್ಯಾಲಿ ನಿವಾಸಿಗಳಾದ , 47 ವರ್ಷದ ಗಾಯತ್ರಿ ಕುಮಾರ್ ಮತ್ತು ಅವರ 15 ವರ್ಷದ ಮಗಳು ಸಮತಾ ಕುಮಾರ್ ಮೃತರು. ಗಾಯತ್ರಿ 10ನೇ ತರಗತಿಯಲ್ಲಿ ಓದುತ್ತಿದ್ದ ತನ್ನ ಮಗಳು ಸಮತಾರನ್ನು ಬನ್ನೇರುಘಟ್ಟ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಬಳಿಯ ಬಸವನಪುರದ ಶೆರ್ವುಡ್ ಪ್ರೌಢಶಾಲೆಗೆ ಬಿಡಲು ತೆರಳುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ.
ಬನ್ನೆರುಗಟ್ಟ ಸಮೀಪದ ತಿರುವಿನಲ್ಲಿ ವೇಗವಾಗಿ ಬಂದ ಲಾರಿ ನಿಯಂತ್ರಣ ಕಳೆದುಕೊಂಡ ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಈ ವೇಳೆ ಕಾರಿನ ತುರ್ತು ವ್ಯವಸ್ಥೆಯ ಮೂಲಕ ಗಾಯತ್ರಿ ಅವರು ತಮ್ಮ ಪತಿ ಸುನಿಲ್ ಕುಮಾರ್ ಅವರಿಗೆ ಅಪಘಾತದ ಬಗ್ಗೆ ಸಂದೇಶ ಕಳುಹಿಸಿದ್ದಾರೆ. ಸುನೀಲ್ ಸ್ಥಳಕ್ಕೆ ಧಾವಿಸಿ ನೋಡುವಷ್ಟರಲ್ಲಿ ಪತ್ನಿ ಮತ್ತು ಮಗಳು ಇಬ್ಬರೂ ಲಾರಿಯಡಿ ನಜ್ಜುಗುಜ್ಜಾಗಿದ್ದರು.
ಘಟನೆ ನಡೆದ ತಕ್ಷಣ ಕಾಂಕ್ರಿಟ್ ಮಿಕ್ಸರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ನಾಲ್ಕು ಕ್ರೇನ್ ಮತ್ತು ಜೆಸಿಬಿ ಸಹಾಯದಿಂದ ಕಾರಿನೊಳಗೆ ಬಹಳ ಸಮಯ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಲಾರಿ ಮಾಲೀಕನನ್ನು ಭರತ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ನಿರ್ಮಾಣದ ಹಂತದ ಮೆಟ್ರೋ ಕಾಮಗಾರಿಯಲ್ಲಿ ಕಾಂಕ್ರೀಟ್ ಹಾಕಲು ನಿಲ್ಲಿಸಲಾಗಿದ್ದ ಕಬ್ಬಿಣದ ಸರಳುಗಳ ಪಿಲ್ಲರ್ ಕುಸಿದು ಅವಘಡ ಸಂಭವಿಸಿತ್ತು. ಘಟನೆಯಲ್ಲಿ ತೇಜಸ್ವಿನಿ ಎಂಬುವವರು ಹಾಗೂ ಅವರ ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದರು.