ಸಿಬಿಎಸ್ಇ ಶಾಲೆ ಎಂದು ಮೋಸ: ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ದೂರು ದಾಖಲಿಸಿದ ಶಿಕ್ಷಣ ಇಲಾಖೆ
ಸಿಬಿಎಸ್ಇ ಶಾಲೆ ಎಂದು ನಂಬಿ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ಗೆ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ಮಕ್ಕಳನ್ನು ಸೇರಿಸಿದ್ದ ಪೋಷಕರು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ
ಬೆಂಗಳೂರು, ಜನವರಿ. 25: ಸಿಬಿಎಸ್ಇ ಶಾಲೆ ಎಂದು ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡಿ ನಮ್ಮ ಮಕ್ಕಳಿಗೆ ರಾಜ್ಯ ಸಿಲಬಸ್ ಬೋಧಿಸಲಾಗುತ್ತಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ ನಂತರ ಬೆಂಗಳೂರಿನ ಆರ್ಕಿಡ್ ಇಂಟರ್ನ್ಯಾಶನಲ್ ಸ್ಕೂಲ್ನ ನಾಗರಭಾವಿ ಶಾಖೆಯ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ನ ನಾಗರಭಾವಿ ಶಾಖೆ ವಿರುದ್ಧ ಬುಧವಾರ ಪೊಲೀಸ್ ದೂರು ದಾಖಲಿಸಿದೆ.
ದೆಹಲಿ ಶಿಕ್ಷಣ ಇಲಾಖೆಯ ಮೇಲೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸುಳ್ಳು ಆರೋಪ: ಮನೀಶ್ ಸಿಸೋಡಿಯಾ
ರಾಜ್ಯ ಮಂಡಳಿಯ ಪ್ರಕಾರ ಸಂಸ್ಥೆಯನ್ನು ನಡೆಸಲು ಅನುಮತಿ ಇದ್ದರೂ, ಶಾಲೆಯು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮಂಡಳಿಯೊಂದಿಗೆ ಸಂಯೋಜಿತವಾಗಿದೆ ಎಂದು ಶಾಲೆಯ ಆಡಳಿತವು ಸುಳ್ಳು ಹೇಳಿಕೆ ನೀಡಿ, ನಮ್ಮಿಂದ ಶುಲ್ಕ ವಸೂಲಿ ಮಾಡಿದ್ದಾರೆ ಎಂದು ಪೋಷಕರು ಅಧಿಕಾರಿಗಳಿಗೆ ದೂರು ನೀಡಿದ್ದರು.
ಇದರ ಬೆನ್ನಲ್ಲೇ ಆರ್ಕಿಡ್ ಇಂಟರ್ನ್ಯಾಶನಲ್ ಸ್ಕೂಲ್ನ ನಾಗರಭಾವಿ ಶಾಖೆಯಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಬೆಂಗಳೂರು ದಕ್ಷಿಣ 1 ರ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಸೂಚನೆ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಇದೇ ರೀತಿಯ ಆರೋಪದ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಗೆ ನೀಡಿದ ನಾಲ್ಕನೇ ನೋಟಿಸ್ ಇದಾಗಿದೆ.
'ಸಿಬಿಎಸ್ಇ ಬೋರ್ಡ್ ಆಧಾರಿತ ಸಿಲಬಸ್ ಬೋಧನೆ' ಎಂಬ ಆರೋಪದ ಬಗ್ಗೆ ವಿವರಣೆ ನೀಡುವಂತೆ ಬೆಂಗಳೂರು ದಕ್ಷಿಣದ ಬ್ಲಾಕ್ ಶಿಕ್ಷಣ ಕಚೇರಿ ಶಾಲೆಗೆ ನೋಟಿಸ್ ಜಾರಿ ಮಾಡಿದೆ. ಶಾಲಾ ಆಡಳಿತ ಮಂಡಳಿ ವಂಚಿಸುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಮಂಗಳವಾರ ಶಾಳಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.
ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ಶಿಶುವಿಹಾರದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ ಫೀಜ್ ವಸೂಲಿ ಮಾಡುತ್ತದೆ. ಅದು ಒಂಬತ್ತನೇ ಮತ್ತು ಹತ್ತನೇ ತರಗತಿಗಳಿಗೆ 1.6 ಲಕ್ಷ ರೂಪಾಯಿಗಳವರೆಗೂ ತಲುಪುತ್ತದೆ. ಜನವರಿ 24 ರಂದು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಪೋಷಕರು, ತಮ್ಮ ಶುಲ್ಕವನ್ನು ಹಿಂದಿರುಗಿಸುವಂತೆ ಶಾಲೆಯ ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಶಾಲಾ ಆಡಳಿತ ಮಂಡಳಿಯು 5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಗಳ ಘೋಷಣೆ ಮಾಡಿ ವಿದ್ಯಾರ್ಥಿಗಳಿಗೆ ರಾಜ್ಯ ಮಂಡಳಿಯ ಪ್ರಕಾರ ಪಠ್ಯಕ್ರಮವನ್ನು ಕಲಿಯಲು ನಿರ್ದೇಶಿಸಿ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, 9 ಮತ್ತು 10 ನೇ ತರಗತಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ದಾಖಲೆಗಳ ಪ್ರಕಾರ ಶಾಲೆಗೆ ಅನುಮತಿ ಇಲ್ಲ. ಆದರೆ ವಿದ್ಯಾರ್ಥಿಗಳನ್ನು ನೋಂದಾಯಿಸಿ ಕೆಂಗೇರಿಯ ಮತ್ತೊಂದು ಶಾಖೆಗೆ ಕಳುಹಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಒಟ್ಟಾರೆ ಸಿಬಿಎಸ್ಇ ಶಾಲೆ ಎಂದು ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಸೇರಿಸಿದ ಪೋಷಕರು, ಈಗ ತಲೆಯ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತಾಗಿದೆ.