ವಿದೇಶಿ ತಬ್ಲಿಘಿಗಳಿಗೆ ಆಶ್ರಯ: ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ದೂರು ದಾಖಲು
ಬೆಂಗಳೂರು, ಏ. 23: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದವರಿಂದ ಸೋಂಕು ಹೆಚ್ಚಾಗಿ ಹರಡಿತು ಎಂಬ ಆರೋಪ ಪ್ರತ್ಯಾರೋಪಗಳು ಸೇರಿದಂತೆ ಕೊರೊನಾ ವೈರಸ್ ನಾಡಿಗೆ ತಂದಿರುವ ಸಮಸ್ಯೆಗಳು ಒಂದಲ್ಲ ಎರಡಲ್ಲ. ಮನುಷ್ಯರ ಜೀವದ ಮೇಲೆ ದಾಳಿ ಮಾಡುವುದರೊಂದಿಗೆ ನಮ್ಮ ಸಾಮಾಜಿಕ ಜೀವನದ ಮೇಲೂ ಕೊರೊನಾ ವೈರಸ್ ದಾಳಿ ಮಾಡಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ ಕ್ವಾರಂಟೈನ್ಗೆ ಕರೆದೊಯ್ಯುವಾಗ ವೈದ್ಯರು ಹಾಗೂ ಪೊಲೀಸರ ಮೇಲೆಯೆ ಹಲ್ಲೆಯಾಗಿತ್ತು.
Recommended Video
ಇದೀಗ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆಗೆ ಮೊದಲು ದೆಹಲಿಯ ಜಮಾತ್ನಲ್ಲಿ ಭಾಗವಹಿಸಿದ್ದ 19 ತಬ್ಲಿಘಿಗಳು ಪಾದರಾಯನಪುರದ ಸುಬಾನಿಯಾ ಮಸೀದಿಯಲ್ಲಿ ಅಕ್ರಮವಾಗಿ ತಲೆಮರೆಸಿಕೊಂಡಿದ್ದರು. ಮಾಜಿ ಸಚಿವ ಜಮೀರ್ ಅಹ್ಮದ್ ಅವರು ವಿದೇಶಿ ತಬ್ಲಿಘಿಗಳಿಗೆ ಕಾನೂನು ಬಾಹೀರವಾಗಿ ಆಶ್ರಯ ಕೊಟ್ಟಿದ್ದರು ಎಂದು ಆರೋಪಿಸಿ ದೂರು ದಾಖಲಾಗಿದೆ.
ರಾಮನಗರ ಜೈಲಿನಲ್ಲಿ ಆತಂಕ, ಕೈದಿಗಳಿಂದ ಪ್ರತಿಭಟನೆ, ರೋಗಿಗಳು ವಿಕ್ಟೋರಿಯಾಗೆ ಶಿಫ್ಟ್
ಮೊದಲೇ ಸಂಕಷ್ಟದಲ್ಲಿದ್ದ ಜಮೀರ್ ಅಹ್ಮದ್
ಬೆಂಗಳೂರಿನ ಪಾದರಾಯನಪುರ ಹಾಗೂ ಸಾಧಿಕ್ಪಾಳ್ಯಗಳಲ್ಲಿ ಆಶಾ ಕಾರ್ಯರ್ತರು, ವೈದ್ಯರು ಹಾಗೂ ಪೊಲೀಸರ ಮೇಲೆ ನಡೆದ ಹಲ್ಲೆಯಲ್ಲಿ ಅಲ್ಲಿನ ಜನರ ತಪ್ಪು ಇರಲಿಲ್ಲ, ಅವರೆಲ್ಲರೂ ಅನಕ್ಷರಸ್ಥರು ಎಂದು ಶಾಸಕ ಜಮೀರ್ ಅಹ್ಮದ್ ಸಮರ್ಥಿಸಿಕೊಂಡಿದ್ದರು. ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಂಡಾಮಂಡಲವಾಗಿದ್ದರು. ಜಮೀರ್ ಅಹ್ಮದ್ ಅವರನ್ನ ಕೇಳಿ ಸರ್ಕಾರ ನಡೆಸಲು ಆಗುತ್ತದೆಯಾ ಎಂದು ಪ್ರಶ್ನಿಸಿದ್ದರು. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೂಡ ಈ ಬಗ್ಗೆ ವಿವರ ಪಡೆಯುವುದಾಗಿ ಹೇಳಿದ್ದರು.
ಸುಬಾನಿಯಾ ಮಸೀದಿಯಲ್ಲಿ ವಿದೇಶಿ ತಬ್ಲಿಘಿಗಳು
ಕೊರೊನಾ ಹಾಟ್ಸ್ಪಾಟ್ ಆಗಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಯಾಗಲು ವಿದೇಶಿ ತಬ್ಲಿಘಿಗಳೇ ಕಾರಣ ಎಂದು ಇದೀಗ ಆರೋಪಿಸಲಾಗಿದೆ. ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಭಾಗವಹಿಸಿದ್ದ 19 ಜನ ಇಂಡೊನೇಶಿಯಾ ಹಾಗೂ ಕಿರ್ಗಿಸ್ತಾನ್ ದೇಶಗಳ ತಬ್ಲಿಘಿಗಳು ಅಕ್ರಮವಾಗಿ ಪಾದರಾಯನಪುರದ ಸುಬಾನಿಯಾ ಮಸೀದಿಯಲ್ಲಿ ವಾಸವಾಗಿದ್ದರು. ಈ ಕುರಿತು 17 ಜನರ ಮೇಲೆ ಜಗಜೀವನರಾಮ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಸುಬಾನಿಯಾ ಮಸೀದಿಯಲ್ಲಿದ್ದ 19 ತಬ್ಲಿಘಿಗಳಲ್ಲಿ ಕೇವಲ 4 ಜನರು ಮಾತ್ರ ಸೆರೆ ಸಿಕ್ಕಿದ್ದು ಉಳಿದ 15 ಜನರು ಅಲ್ಲಿಂದಲೂ ತಲೆಮರೆಸಿಕೊಂಡಿದ್ದಾರೆ. ಇದಕ್ಕೆ ಜಮೀರ್ ಅಹ್ಮದ್ ಕಾರಣ ಎಂದು ದೂರಲಾಗಿದೆ.
ಜಮೀರ್ ಮೇಲೆ ತಬ್ಲಿಘಿಗಳಿಗೆ ಆಶ್ರಯ ಕೊಟ್ಟ ಆರೋಪ
ವೀಸಾ ಅವಧಿ ಮುಗಿದಿರುವ 19 ವಿದೇಶೀ ತಬ್ಲಿಘಿಗಳಗೆ ಕಾನೂನುಬಾಹಿರವಾಗಿ ಪಾದರಾಯನಪುರದ ಸುಬಾನಿಯಾ ಮಸೀದಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವ ಮೂಲಕ ಶಾಸಕ ಜಮೀರ್ ಅಹ್ಮದ್, ಕಾರ್ಪೊರೇಟರ್ ಇಮ್ರಾನ್ ಪಾಷಾ ಮತ್ತು ಮಸೀದಿಯ ಮುಖ್ಯಸ್ಥ ಷನಾವುಲ್ಲಾ ದೇಶದ್ರೋಹದ ಕೆಲಸ ಮಾಡಿದ್ದಾರೆ. ಅವರೆಲ್ಲರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಜೆಜೆ ನಗರ ಪೊಲೀಸರು ದಾಖಲಿಸಿರುವ ಎಫ್ಐಆರ್ ಉಲ್ಲೇಖಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕ ಅಧ್ಯಕ್ಷ ಎನ್. ಆರ್. ರಮೇಶ್ ಅವರು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ಸಲ್ಲಿಸಿದ್ದಾರೆ. ಹೀಗಾಗಿ ಶಾಸಕ ಜಮೀರ್ ಅಹ್ಮದ್ ಅವರಿಗೆ ಸಂಕಷ್ಟ ಎದುರಾಗಿದೆ.
ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲೇನಿದೆ?
ಇಂಡೋನೇಶಿಯಾದ 10 ಹಾಗೂ ಕಿರ್ಗಿಸ್ತಾನದ 9 ತಬ್ಲಿಘಿಗಳಿಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪಾದರಾಯನಪುರದ ಸುಬಾನಿಯಾ ಮಸೀದಿಯಲ್ಲಿ ಆಶ್ರಯಕೊಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ. ಈಗಾಗಲೇ ಜಗಜೀವನರಾಂ ನಗರ ಪೊಲೀಸ್ ಠಾಣೆಯಲ್ಲಿ ಎಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸುಬಾನಿಯಾ ಮಸೀದಿಯ ಮುಖ್ಯಸ್ಥ ಷನಾವುಲ್ಲಾ ಹಾಗೂ ಮೌಲ್ವಿಗಳು ಶಾಸಕ ಜಮೀರ್ ಅಹ್ಮದ್ ಹಾಗೂ ಕಾರ್ಪೊರೇಟರ್ ಇಮ್ರಾನ್ ಪಾಶಾ ಅವರ ಆಪ್ತರಾಗಿದ್ದಾರೆ.
ಈ 19 ಮಂದಿ ತಬ್ಲಿಘಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇದ್ದರೂ ಪೊಲೀಸ್ ಇಲಾಖೆಗೆ ಮಾಹಿತಿ ಕೊಡದ ಶಾಸಕ ಜಮೀರ್ ಅಹ್ಮದ್, ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಮಸೀದಿ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ದಾಖಲಿಸಲಾಗಿದೆ.