ಹೊಸಗುಡ್ಡದಹಳ್ಳಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಮಾಲೀಕರ ವಿರುದ್ಧ ಕೇಸ್
ಬೆಂಗಳೂರು, ನವೆಂಬರ್ 11: ಬೆಂಗಳೂರಿನ ಹೊಸಗುಡ್ಡದ ಹಳ್ಳಿಯಲ್ಲಿರುವ ರಾಸಾಯನಿಕ ಕಾರ್ಖಾನೆಯ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಸ್ಫೋಟಕ ಕಾಯ್ದೆಯಡಿ ಕಾರ್ಖಾನೆ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಕಾರ್ಖಾನೆಯ ಗೋದಾಮಿನಲ್ಲಿ ಮಂಗಳವಾರ ಬೆಳಿಗ್ಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂತರ ಬೃಹತ್ ಪ್ರಮಾಣದಲ್ಲಿ ಹರಡಿಕೊಂಡಿತ್ತು. ಕ್ಷಣ ಮಾತ್ರದಲ್ಲಿ ಇಡೀ ಕಾರ್ಖಾನೆಯೊಂದಿಗೆ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು. ಸುಮಾರು ಹತ್ತು ಅಗ್ನಿಶಾಮಕ ದಳ ವಾಹನಗಳು ಬೆಂಕಿ ನಂದಿಸಲು ದೌಡಾಯಿಸಿದ್ದವು.
ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ
ಗೋದಾಮಿನ ಸುತ್ತಲಿನ ಮನೆಗಳಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿತ್ತು. ಕಾಖಾನೆಯಲ್ಲಿದ್ದ ನಾಲ್ವರು ಹೊರಗೆ ಓಡಿಬಂದಿದ್ದು, ಒಬ್ಬನಿಗೆ ಗಾಯವಾಗಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಫ್ಯಾಕ್ಟರಿ ಸಮೀಪ ನಿಲ್ಲಿಸಿದ್ದ ಏಳು ವಾಹನಗಳು, 2 ವಿದ್ಯುತ್ ಕಂಬಗಳು ಸಂಪೂರ್ಣ ನಾಶವಾಗಿವೆ.
ಕಾರ್ಖಾನೆಯ ಗೋದಾಮಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಸ್ಯಾನಿಟೈಸರ್, ಟಿನ್ನರ್ ನಂಥ ರಾಸಾಯನಿಕವನ್ನು ಸಂಗ್ರಹಿಸಿಟ್ಟಿದ್ದು, ಆ ಡಬ್ಬಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ 2 ರಿಂದ 3 ಕೋಟಿ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ತಡರಾತ್ರಿವರೆಗೂ ಬೆಂಕಿ ನಿಯಂತ್ರಣಕ್ಕೆ ಬರದೇ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದು, ಅಗ್ನಿಶಾಮಕ ಸಿಬ್ಬಂದಿ ರೇವಣ ಸಿದ್ದಪ್ಪ, ಸಂಪತ್ ರಾಜ್, ಸಿದ್ದೇಗೌಡ ಎಂಬುವರು ಅಸ್ವಸ್ಥರಾಗಿದ್ದರು.
ಕಾರ್ಖಾನೆ ನಡೆಸುತ್ತಿದ್ದ ಕಮಲಾ ಮತ್ತು ಪತಿ ಸಜ್ಜನ್ ರಾಜ್ ವಿರುದ್ಧ ಸ್ಫೋಟಕ ಕಾಯ್ದೆ ಅಡಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಬೊಮ್ಮಸಂದ್ರದಲ್ಲಿ ಇವರ ಕಾರ್ಖಾನೆಯಿದ್ದು, ಹೊಸಗುಡ್ಡದಹಳ್ಳಿಯ ಗೋದಾಮನ್ನು ರಾಸಾಯನಿಕ ಸಂಗ್ರಹಕ್ಕೆ ಬಳಸುತ್ತಿದ್ದರು. ಆದರೆ ಇದಕ್ಕೆ ಯಾವುದೇ ಪರವಾನಗಿ ಪಡೆದಿರಲಿಲ್ಲ ಎಂದು ತಿಳಿದುಬಂದಿದೆ.
Recommended Video
ಕಾರ್ಖಾನೆಯಿಂದ ಬೆಂಕಿ ತಗುಲಿ ಸಮೀಪದ ಪ್ಲಾಸ್ಟಿಕ್ ಕಾರ್ಖಾನೆಯೂ ಹೊತ್ತಿ ಉರಿದಿದ್ದು, ಈ ಕಾರ್ಖಾನೆ ಮಾಲೀಕ ಅಯಾಜ್ ಪಾಷ ಎಂಬುವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.