ಇನ್ಮುಂದೆ ವಿಧಾನಸೌಧ ಪ್ರವೇಶಕ್ಕೆ ಪಾಸ್ ಬೇಡ; ಆಧಾರ್ ಕಾರ್ಡ್ ಸಾಕು
ಬೆಂಗಳೂರು, ಡಿ. 14: ಇನ್ಮುಂದೆ ಯಾವುದೇ ಪಾಸ್ ಇಲ್ಲದೆಯೂ ಜನಸಾಮಾನ್ಯರು ವಿಧಾನಸೌಧದ ಒಳಗೆ ಪ್ರವೇಶ ಮಾಡಬಹುದು. ಈ ಹಿಂದೆ ಶಾಸಕರು, ಸಚಿವರು ಅಥವಾ ವಿಧಾನ ಪರಿಷತ್ ಸದಸ್ಯರ ಶಿಫಾರಸು ಪತ್ರ ಇದ್ದವರಿಗೆ ಮಾತ್ರ ವಿಧಾನಸೌಧಕ್ಕೆ ಪ್ರವೇಶ ಸಿಗುತ್ತಿತ್ತು. ಅದರಿಂದ ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶ ಕಷ್ಟಸಾಧ್ಯವಾಗಿತ್ತು. ಆದರಿಂದ ಜನರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ರಾಜ್ಯ ಸರ್ಕಾರ ವಿಧಾನಸೌಧಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಿದೆ. ಸಾರ್ವಜನಿಕ ರಜಾ ದಿನಗಳನ್ನು ಬಿಟ್ಟು ಪ್ರತಿದಿನ ಮಧ್ಯಾಹ್ನ 3.30 ರಿಂದ ಸಂಜೆ 5.30ರ ವರೆಗೆ ವಿಧಾನಸೌಧದಲ್ಲಿ ಜನ ಸಮಾನ್ಯರು ಅಧಿಕಾರಿಗಳನ್ನ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜನಪ್ರತಿನಿಧಿಗಳು ಪರಿಚಯ ಇದ್ದವರಿಗೆ ಮಾತ್ರ ವಿಧಾನಸೌಧಕ್ಕೆ ಪ್ರವೇಶ ಎಂಬುದನ್ನು ಸರ್ಕಾರ ಈಗ ತೆಗೆದು ಹಾಕಿದೆ. ಅಷ್ಟೇ ಅಲ್ಲ ಇದೀಗ ಕೇವಲ ಆಧಾರ್ ಕಾರ್ಡ್ ತೋರಿಸಿ, ವಿಧಾನಸೌಧದ ಗೇಟ್ನಲ್ಲಿಯೆ ಪಾಸ್ ಪಡೆದುಕೊಂಡು ಒಳಗೆ ಹೋಗಬಹುದು.
ಸರ್ಕಾರಿ ಕಚೇರಿಗಳಲ್ಲಿ 'ಸಾಹೇಬ್ರು ಇಲ್ಲ ನಾಳೆ ಬನ್ನಿ' ಎಂದು ಹೇಳುವಂತಿಲ್ಲ
ವಿಧಾನಸೌಧಕ್ಕೆ 2 ಕಡೆಗಳಿಂದ ಮಾತ್ರ ಸಾಮಾನ್ಯರಿಗೆ ಪ್ರವೇಶ
ಒಟ್ಟು 2 ಕಡೆಗಳಿಂದ ಸಾರ್ವಜನಿಕರು ವಿಧಾನಸೌಧ ಪ್ರವೇಶ ಮಾಡಬಹುದಾಗಿದೆ. ವಿಧಾನಸೌಧದ ಪೂರ್ವ ಭಾಗದ ಹೈಕೋರ್ಟ್ ಎದುರಿನ ಗೇಟ್ ಹಾಗೂ ಪಶ್ಚಿಮ ಭಾಗದ ಶಾಸಕರ ಭವನದ ಎದುರಿನ ಗೇಟ್ ನಿಂದ ವಿಧಾನಸೌಧಕ್ಕೆ ಪ್ರವೇಶ ಕೊಡಲಾಗುತ್ತದೆ. ಅದಕ್ಕೂ ಮೊದಲು ಯಾರನ್ನು? ಭೇಟಿ ಮಾಡಬೇಕು ಮತ್ತು ಯಾವ? ಉದ್ದೇಶಕ್ಕಾಗಿ ಭೇಟಿ ಮಾಡಬೇಕು ಎಂಬುದನ್ನ ಭದ್ರತಾ ಸಿಬ್ಬಂದಿಗೆ ಮನವರಿಕೆ ಮಾಡಿಕೊಡಬೇಕು. ಮೊದಲ ಹಂತದ ಗೇಟ್ನಲ್ಲಿ ತಪಾಸಣೆಯ ಬಳಿಕ ಪ್ರವೇಶಕ್ಕೆ ಅನುಮತಿ ಕೊಡಲಾಗುತ್ತದೆ. ಆದರೆ ಎಲೆ, ಅಡಿಕೆ, ಸುಣ್ಣ, ತಂಬಾಕು, ಬೀಡಿ, ಸಿಗರೇಟು, ಬೆಂಕಿ ಪೊಟ್ಟಣ ಸೇರಿದಂತೆ ನಿರ್ಬಂಧಕ ವಸ್ತುಗಳನ್ನ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಅಧಿಕಾರಿಗಳಿಗೆ ತೋರಿಸಲು ಭೇಕಾದ ಹಾಗೂ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಮಾತ್ರ ಅನುಮತಿಯಿದೆ.
ವಿಧಾನಸೌಧದಲ್ಲಿ ಯಾರನ್ನು ಭೇಟಿ ಮಾಡಬಹುದು?
ಮಧ್ಯಾಹ್ನದ ಬಳಿಕ ವಿಧಾನಸೌಧದಲ್ಲಿ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸಾರ್ವಜನಿಕರು ಭೇಟಿ ಮಾಡಬಹುದು. ಮಧ್ಯಾಹ್ನ ಮೂರುವರೆ ಗಂಟೆಯಿಂದ ಸಂಜೆ ಐದೂವರೆ ಗಂಟೆಯವರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರತು ಪಡಿಸಿ ಎಲ್ಲ ಅಧಿಕಾರಿಗಳನ್ನು ಸಾಮಾನ್ಯರು ಭೇಟಿ ಮಾಡಬಹುದು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಬಹುದು. ಜೊತೆಗೆ ಸಚಿವರುಗಳು, ಅವರ ಆಪ್ತ ಕಾಯದರ್ಶಿಗಳನ್ನೂ ಕೂಡ ಸಾರ್ವಜನಿಕರು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿ ಕೊಳ್ಳಬಹುದು. ಮಧ್ಯಾಹ್ನದ ಬಳಿಕ ಖಡ್ಡಾಯವಾಗಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿದ್ದು ಸಾರ್ವಜನಿಕರನ್ನ ಭೇಟಿ, ಸಮಸ್ಯೆ ಆಲಿಸಬೇಕು ಅಂತಾ ಸರ್ಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯ ಸಚಿವ ಸಂಪುಟ ಸಭೆ ಎಂದರೇನು? ಎಲ್ಲಿ? ಯಾಕೆ ನಡೆಯುತ್ತದೆ?
ವಿಧಾನ ಮಂಡಲ ಅಧಿವೇಶನ, ಸಂಪುಟ ಸಭೆ ನಡೆಯುತ್ತಿದ್ದಾಗ ಪ್ರವೇಶವಿಲ್ಲ
ವಿಧಾನ ಮಂಡಲ ಅಧಿವೇಶನ ಅಥವಾ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವ ಸಂದರ್ಭಗಳಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ತಮ್ಮ ಕ್ಷೇತ್ರದ ಶಾಸಕರು, ಸಂಸದರು ಅಥವಾ ವಿಧಾನ ಪರಿಷತ್ ಸದಸ್ಯರಿಂದ ಕಲಾಪದ ಪಾಸ್ ಪಡೆದುಕೊಂಡು ವಿಧಾನಸೌಧಕ್ಕೆ ಪ್ರವೇಶ ಪಡೆಯಲು ಅವಕಾಶವಿದೆ. ಉಳಿದ ದಿನಗಳಲ್ಲಿ ಸಮಸ್ಯೆ ಹೇಳಿಕೊಂಡು ಬರವ ಜನರಿಗೆ ಮಧ್ಯಾಹ್ನದ ಬಳಿಕ ಅಧಿಕಾರಿಗಳು ತಮ್ಮ ಕಚೇರಿಯಲ್ಲಿಯೆ ಇದ್ದು ಸಂದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಸಚಿವಾಲಯ ಕೈಪಿಡಿಯ ಪ್ಯಾರಾ 272 (3)ರನ್ವಯ ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳು ಜನಸಮಾನ್ಯರ ಭೇಟಿಗೆ ಸಮಯಾವಕಾಶ ಕೊಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ.