ಪೌರಕಾರ್ಮಿಕರೊಂದಿಗೆ ಕಾಮನ್ ಮ್ಯಾನ್ ಉಪಾ'ಹಾರ'
ಬೆಂಗಳೂರು, ಸೆಪ್ಟೆಂಬರ್ 23: ಪೌರಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸುವ ಆದೇಶವನ್ನು ಹೊರಹಾಕಿದ ಮೇಲೆ ಪೌರ ಕಾರ್ಮಿಕರ ನಿರಂತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಪೌರಕಾರ್ಮಿಕರನ್ನು ಖಾಯಂಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪೌರಕಾರ್ಮಿಕರ ದಿನ ಕೃತಜ್ಞತೆಯನ್ನು ಸಲ್ಲಿಸುವ ಅವಕಾಶ ಜೊತೆಗೆ ಊಟ ಸವಿಯುವ ಅವಕಾಶ ಸಿಕ್ಕಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಸಡಗರದ ವಾತಾವರಣ ನಿರ್ಮಾಣವಾಗಿತ್ತು. ಎರಡು ದಿನದ ಹಿಂದೆಯಷ್ಟೇ ತಮ್ಮ ಸೇವೆ ಕಾಯಂಗೊಂಡ ಸಿಹಿ ಸುದ್ದಿ ಪಡೆದಿದ್ದ ಪೌರಕಾರ್ಮಿಕ ಮಹಿಳೆಯರು ಮುಖ್ಯಮಂತ್ರಿಯವರೊಂದಿಗೆ ಬೆಳಗ್ಗಿನ ಉಪಾಹಾರ ಸವಿಯುವ ಅವಕಾಶ ಸಿಕ್ಕಿತ್ತು. ಇದು ಪೌರಕಾರ್ಮಿಕರಲ್ಲಿ ಹೆಚ್ಚಿನ ಉತ್ಸಾಹ ಮೂಡುವಂತೆ ಮಾಡಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ನೋಡುತ್ತಿದ್ದಂತೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ ಪೌರಕಾರ್ಮಿಕರು ಮುಖ್ಯಮಂತ್ರಿಯನ್ನು ಸುತ್ತುವರಿದು, ಶಾಲು, ಹಾರ, ಫಲ ತಾಂಬೂಲ ಅರ್ಪಿಸಿ ತಮ್ಮ ನೌಕರಿಯನ್ನು ಖಾಯಂಗೊಳಿಸಿದ್ದಕ್ಕಾಗಿ ಧನ್ಯವಾದವನ್ನು ಅರ್ಪಿಸಿದರು. ಈ ವೇಳೆ ಪೌರ ಕಾರ್ಮಿಕರ ಕಣ್ಣಾಲಿಗಳು ಒದ್ದೆಯಾಗಿ ಅವರ ನೋಟದಲ್ಲಿ ಕೃತಜ್ಞತೆಯ ಭಾವನೆ ಮನೆ ಮಾಡಿತ್ತು. ಕಾಮನ್ ಮ್ಯಾನ್ ಸಿಎಂ ಎಂದು ಕರೆದುಕೊಳ್ಳಲು ಬಯಸುವ ಸಿಎಂ ಬೊಮ್ಮಾಯಿ ಪೌರಕಾರ್ಮಿರ ಜೊತೆ ಆತ್ಮೀಯವಾಗಿ ಬೆರೆತು ಮಾತನಾಡಿದರು.
ಮಕ್ಕಳ ಬಗ್ಗೆ ನಿಗಾವಹಿಸಲು ಕಿವಿಮಾತು
ಪೌರಕಾರ್ಮಿಕರ ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು ನಿಮ್ಮ ಆರೋಗ್ಯ, ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಲಿದೆ ಎಂದು ಭರವಸೆ ತುಂಬಿದರು. ಜೊತೆಗೆ ನಿಮ್ಮ ಮನೆ ಗಂಡು ಮಕ್ಕಳ ಬಗ್ಗೆ ನಿಗಾ ವಹಿಸಿ ಎಂದು ಕಿವಿಮಾತು ಹೇಳಲು ಮರೆಯಲಿಲ್ಲ.
ವೇತನ ಮತ್ತು ಸೌಲಭ್ಯದ ಬಗ್ಗೆ ಮಾಹಿತಿ
ಪೌರಕಾರ್ಮಿಕರಿಗೆ ಸ್ವತಃ ಮುಖ್ಯಮಂತ್ರಿಗಳು ಉಪಹಾರವವನ್ನು ಬಡಿಸಿರು. ಆ ಬಳಿಕ ಮುಖ್ಯಂತ್ರಿಗಳು ಪೌರ ಕಾರ್ಮಿಕರ ಜೊತೆಯಲ್ಲಿಯೇ ಉಪಹಾರಕ್ಕೆ ಕುಳಿತುಕೊಂಡರು. ಈ ವೇಳೆ ತಮ್ಮ ಪಕ್ಕ ಕುಳಿತ ಭಾರತಿ ಅವರೊಂದಿಗೆ ಮಾತನಾಡಿಸಿ ಅವರ ವೇತನ ಸರಿಯಾಗಿ ಆಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಸೂಕ್ತ ಸೌಲಭ್ಯಗಳು ದೊರೆಯುತ್ತಿವೆಯೇ, ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು.ಬೊಮ್ಮಾಯಿ, ಪೌರ ಕಾರ್ಮಿಕರಿಗೆ ಆತ್ಮವಿಶ್ವಾಸ ಹಾಗೂ ಆತ್ಮ ಗೌರವ ಮೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಮೊದಲು 11,137 ಪೌರಕಾರ್ಮಿಕರ ಹುದ್ದೆ ಖಾಯಂ
"ಪೌರಕಾರ್ಮಿಕರಿಗೆ ಸೇವಾ ಭದ್ರತೆ ಇರದಿದ್ದ ಕಾರಣ ಸಮಿತಿ ರಚಿಸಲಾಗಿತ್ತು. ಸಮಿತಿಯ ಶಿಫಾರಸ್ಸಿನಂತೆ ಹಂತ ಹಂತವಾಗಿ ಸುಮಾರು 43 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಆದೇಶಿಸಲಾಗಿತ್ತು. ಅದರ ಮೊದಲ ಹಂತವಾಗಿ 11,137 ಪೌರಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸಲಾಗಿದೆ. 2 ನೇ ಹಾಗೂ 3 ನೇ ಹಂತದಲ್ಲಿ ಉಳಿದ ಪೌರಕಾರ್ಮಿಕರ ನೇಮಕಾತಿಯನ್ನು ಖಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಠಿಣ ಪರಿಶ್ರಮಕ್ಕೆ ನ್ಯಾಯ ಸಿಕ್ಕಿರುವ ಭಾವನೆ
ಸರ್ಕಾರದ ತೆಗೆದುಕೊಂಡಿರುವ ಕ್ರಮದಿಂದಾಗಿ ಈ ವರ್ಗದ ಜನರಲ್ಲಿ ಆತ್ಮವಿಶ್ವಾಸ ತುಂಬಿದೆ. ಇಷ್ಟು ವರ್ಷದ ನಮ್ಮ ಕಠಿಣ ಪರಿಶ್ರಮಕ್ಕೆ ನ್ಯಾಯ ಸಿಕ್ಕಿರುವ ಭಾವನೆ ಇದೆ. ಮಾನವೀಯತೆಯಿಂದ ಅವರ ಭಾವನೆಗಳಿಗೆ ಗೌರವ ನೀಡಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಿಎಂ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.