ಕಣ್ಣೆದುರೇ ಸ್ನೇಹಿತೆಯ ಪ್ರಾಣ ಹೋಗ್ತಿತ್ತು- ಕಾಪಾಡಿ ಎಂದು ಗೋಗರೆದ ಯುವಕ..!
ಬೆಂಗಳೂರು, ಮೇ21:ಬೆಂಗಳೂರಿನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಮಾಲ್ನಲ್ಲಿ ಶಾಪಿಂಗ್ಗೆ ಹೋಗಿದ್ದರು. ಈ ವೇಳೆಯಲ್ಲಿ ಮೆಟ್ಟಿಲು ಹತ್ತುವಾಗ ಆಯಾ ತಪ್ಪಿ ಕಾಲು ಜಾರಿ ಕಿಟಕಿಯಿಂದ ಆಚೆಗೆ ಕಾಲು ಜಾರಿ ಬಿದ್ದ ಪರಿಣಾಮವಾಗಿ ಯುವತಿ ಸಾವನ್ನಪ್ಪಿದ್ದಾಳೆ. ಯುವತಿಯ ಸ್ನೇಹಿತನ ಕಾಲಿಗೆ ತೀವ್ರ ಪೆಟ್ಟು ಬಿದ್ದಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಬ್ರಿಗೇಡ್ ರಸ್ತೆಯ ಶಾಂಪಿಂಗ್ ಕಾಂಪ್ಲೆಕ್ಸ್ನಲ್ಲಿ ಘಟನೆ
ಬೆಂಗಳೂರಿನ ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದ ಲಿಯಾ ಹಾಗೂ ಆಕೆಯ ಗೆಳೆಯ ಆಂಧ್ರ ಪ್ರದೇಶ ಮೂಲದ ಕ್ರಿಸ್ ಪೀಟರ್ ಜೊತೆ 5ನೇ ಅವಿನ್ಯೂ ಮಾಲ್ ಗೆ ಬಂದಿದ್ದಾರೆ. ಹಾಗೆ ಬಂದವರು ಇಲ್ಲಿನ ಜ್ಯೂಸ್ ಸೆಂಟರ್ನಲ್ಲಿ ಜ್ಯೂಸ್ ತೆಗೆದುಕೊಂಡು ಮಾಲ್ನಲ್ಲಿ ಸುತ್ತಾಡ್ತ ಮೂರನೇ ಮಹಡಿಯ ಸ್ಟೇರ್ ಕೇಸ್ ಬಳಿ ತೆರಳಿ ಜ್ಯೂಸ್ ಕುಡಿಯುತ್ತಿರಬೇಕಾದರೆ ಆಯತಪ್ಪಿ ಲಿಯಾ ಕಿಟಕಿ ಗಾಜಿನ ಮೇಲೆ ಬಿದ್ದಿದ್ದಾಳೆ. ಆ ವೇಳೆ ಕಿಟಕಿ ಗ್ಲಾಸ್ ಕಳಚಿಕೊಂಡಿದ್ದು ಏಕಾಏಕಿ ಯುವತಿ ಲಿಯಾ ಕೆಳ ಬಿದ್ದಿದ್ದಾಳೆ. ಆ ವೇಳೆಯೇ ಯುವತಿಯ ರಕ್ಷಣೆಗೆ ಹಾರಿದ ಕ್ರಿಸ್ ಪೀಟರ್ ಸಹ ಮೇಲಿಂದ ಹಾರಿದ್ದು ಕೆಳಬಿದ್ದ ಲಿಯಾ ತಲೆಗೆ ಗಂಭೀರವಾದ ಗಾಯವಾಗಿ ಉಂಟಾದ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.
ಹೊಯ್ಸಳ ವಾಹನದಲ್ಲೇ ಆಸ್ಪತ್ರೆಗೆ ರವಾನೆ
ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತಮ್ಮ ಹೊಯ್ಸಳ ವಾಹನದಲ್ಲೆ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಲಿಯಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೆಲ ಅನುಮಾನಗಳು ಸಹ ಪೊಲೀಸರ ತಲೆಯಲ್ಲಿವೆ. ಯುವಕ ಯುವತಿ ಕೆಳಗೆ ಬಿದ್ದ ಸ್ಥಳ ಸಣ್ಣದಾಗಿದ್ದು, ಅಲ್ಲಿ ಕಾಲು ಜಾರಿ ಬೀಳುವಂತಹ ರೀತಿಯೂ ಇಲ್ಲ. ಅಲ್ಲಿನ ಕಿಟಕಿಗೆ ಒರಗಿನಿಂತು ಜ್ಯೂಸ್ ಕುಡಿಯುವ ಸ್ಥಳವೂ ಅಲ್ಲ. ಆಗಾಗಿ ಯುವಕ ಯುವತಿ ಆಕಸ್ಮಿಕವಾಗಿ ಬಿದ್ದಿದ್ದಾರೋ?, ಇಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ?, ಅನ್ನೋ ಅನುಮಾನಗಳು ಎದುರಾಗಿವೆ
ಯುವತಿಯ ಪಕ್ಕದಲ್ಲೆ ಕಣ್ಣೀರಿಡ್ತಿರೋ ಆಕೆಯ ಗೆಳೆಯ
ಮಹಡಿ ಮೇಲಿಂದ ಬಿದ್ದು ತೀವ್ರ ರಕ್ತಸ್ರಾವದಿಂದ ಯುವತಿ ಪ್ರಜ್ಞೆ ತಪ್ಪಿರುತ್ತಾಳೆ. ಯುವತಿಯ ಪಕ್ಕದಲ್ಲೆ ಕಣ್ಣೀರಿಡ್ತಿರೋ ಆಕೆಯ ಗೆಳೆಯ ಕಾಪಾಡುವಂತೆ ಗೋಗರೆಯುತ್ತಾನೆ. ಆದರೆ ಯುವತಿ ಅಷ್ಟರಲ್ಲಾಗಲೇ ಪ್ರಾಣಬಿಟ್ಟಿದ್ದಳು ಎನ್ನಲಾಗ್ತಿದೆ.
ಬೆಂಗಳೂರು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಹೇಳಿಕೆ
"ಸ್ಟೇರ್ ಕೇಸ್ ನಿಂದ ಆಯತಪ್ಪಿ ಬಿದ್ದಿದ್ದಾರೆಂದು ಪ್ರಾಥಮಿಕವಾಗಿ ಕಾಣ್ತಿದೆ. ಯುವಕ-ಯುವತಿ ಸೇರಿದಂತೆ ಸ್ನೇಹಿತರು ಶಾಪಿಂಗ್ ಗೆ ಬಂದಿದ್ದಾಗ ಘಟನೆ ನಡೆದಿದೆ. ಯುವಕ ಕರ್ನಾಟಕ ರಾಜ್ಯದ ಎಚ್ಎಎಲ್ ನಿವಾಸಿ, ಯುವತಿ ಆಂಧ್ರ ಮೂಲದರಾಗಿದ್ದು ಕಾಕ್ಸ್ ಟೌನ್ನಲ್ಲಿ ವಾಸವಾಗಿದ್ದರು. ಗಾಯಾಳು ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ, ಯುವತಿ ತಲೆಗೆ ಗಂಭೀರಗಾಯವಾಗಿ ರಕ್ತಸ್ರಾವದಿಂದ ಯುವತಿ ಚಿಕಿತ್ಸೆ ಫಲಕಾರಿಗದೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇಬ್ಬರು ಬಿಕಾಂ ಪದವಿ ವ್ಯಾಸಂಗ ಮಾಡ್ತಿದ್ದರು,ಯುವಕ ಅಪಾಯದಿಂದ ಪಾರಾಗಿದ್ದ ಶಾಕ್ನಲ್ಲಿದ್ದಾನೆ. ಘಟನೆಗೆ ನಿಖರ ಕಾರಣ ಏನು ಅನ್ನೋದರ ಕುರಿತು ತನಿಖೆ ನಡೆಸ್ತಿದ್ದೇವೆ,'' ಎಂದು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಹೇಳಿದ್ದಾರೆ.
ಲಿಯಾ ಗೆಳೆಯ ಕ್ರಿಸ್ ಪೊಲೀಸರ ಮುಂದೆ ಹೇಳಿದ್ದೇನು..?
ಮತ್ತೊಂದೆಡೆ ಘಟನೆಯಲ್ಲಿ ಗಾಯಗೊಂಡಿರೋ ಯುವಕ ಕ್ರಿಸ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. "ನಾನು, ಲಿಯಾ ಲವರ್ಸ್. ಸಂಜೆ ಸ್ನೇಹಿತನೊರ್ವನ ಬರ್ತಡೇ ಪಾರ್ಟಿ ಇತ್ತು. ಹೀಗಾಗಿ ಮನೆಯಲ್ಲಿ ಕುಳಿತು ಬೇಜಾರ್ ಆಗಿದ್ದರಿಂದ ಗೆಳತಿ ಜೊತೆ ಶಾಪಿಂಗ್ ಮುಗಿಸಿ ಎಂಜಿ ರೋಡ್ನ ಪಬ್ ನಲ್ಲಿ ಅರೆಂಜ್ ಆಗಿದ್ದ ಪಾರ್ಟಿಗೆ ಹೋಗೋ ಪ್ಲಾನ್ ಇತ್ತು. ಅಷ್ಟರಲ್ಲಿ ಈ ದುರಂತ ನಡೆದೋಗಿದೆ," ಎಂದು ಹೇಳಿದ್ದಾನಂತೆ. ಆದರೆ ಸತ್ಯ ಏನೆಂಬುದು ಪೊಲೀಸರ ತನಿಖೆಯಿಂದ ಮಾತ್ರ ಬೆಳಕಿಗೆ ಬರುಬೇಕಿದೆ. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು, ಮಾಲ್ ನ ಸಿಸಿಟಿವಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.