ಜೆಪಿ ನಗರದಲ್ಲಿ 30 ಅಡಿ ಪರಿಸರ ಸ್ನೇಹಿ ʼತೆಂಗಿನಕಾಯಿ ಗಣೇಶʼ ದರ್ಶನ
ಬೆಂಗಳೂರು, ಆಗಸ್ಟ್ 28: ಪ್ರತಿಬಾರಿಯೂ ಭಕ್ತರಿಗೆ ಹೊಸದನ್ನು ನೀಡಬೇಕು ಎನ್ನುವ ಉದ್ದೇಶ ಹೊಂದಿರುವ ಜೆಪಿ ನಗರದ ಪುಟ್ಟೇನ ಹಳ್ಳಿಯ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್, ಈ ಬಾರಿ 30 ಅಡಿ ಎತ್ತರದ ಪರಿಸರ ಸ್ನೇಹಿ ತೆಂಗಿನ ಕಾಯಿಯಿಂದ ನಿರ್ಮಿಸಲಾಗುವ "ತೆಂಗಿನ ಕಾಯಿ ಗಣೇಶ" ಮೂರ್ತಿ ನಿರ್ಮಾಣಕ್ಕೆ ಮುಂದಾಗಿದೆ.
ಕಳೆದ ಬಾರಿ 30 ಅಡಿ ಎತ್ತರದ ಕಬ್ಬಿನ ಗಣಪತಿಯನ್ನು ನಿರ್ಮಿಸಿ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದ ಈ ದೇವಸ್ಥಾನ ಈ ಬಾರಿಯೂ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. 9 ಸಾವಿರ ತೆಂಗಿನ ಕಾಯಿ ಹಾಗೂ 3 ಸಾವಿರ ಏಳನೀರು ಬಳಸಿ 30 ಎತ್ತರದ ಗಣಪತಿಯನ್ನು ನಿರ್ಮಿಸುವ ಕಾರ್ಯವನ್ನು ಪ್ರಾರಂಭಿಸಿದೆ.
ಗಣೇಶ ಮೂರ್ತಿ ನಿರ್ಮಾಣಕ್ಕೆ 50 ಮಂದಿ ಕಳೆದ 21 ದಿನಗಳಿಂದ ಕೆಲಸ ಮಾಡುತ್ತಿದ್ದು ಮುಂಬರುವ ಸೋಮುವಾರದಂದು ತೆಂಗಿನ ಕಾಯಿ ಗಣಪನ ದರ್ಶನ ಪಡೆಯಬಹುದಾಗಿದೆ. ತೆಂಗಿನ ಕಾಯಿ ಬಹಳ ದಿನಗಳ ಕಾಲ ಕೆಡದೆ ಇರುತ್ತದೆ. ಹೀಗಾಗಿ ತೆಂಗಿನ ಕಾಯಿಯನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ. ಕಳೆದ ವರ್ಷ ಕಬ್ಬನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗಿತ್ತು ಹಾಗೂ ಅದಕ್ಕೂ ಹಿಂದಿನ ವರ್ಷ 400 ಕೆಜಿ ಹತ್ತಿ ಬಳಸಿ ಬೃಹತ್ ಗಣಪನ ಮೂರ್ತಿಯನ್ನು ನಿರ್ಮಿಸಿದ್ದೇವು ಎಂದು ಟ್ರಸ್ಟಿನ ವ್ಯವಸ್ಥಾಪಕರಾದ ರಾಮ್ ಮೋಹನ ರಾಜು ಅವರು ತಿಳಿಸಿದರು.
ಕಬ್ಬಿನ ಗಣೇಶನಿಗೆ 4 ಸಾವಿರ ಕೆಜಿ ಬೃಹತ್ ಲಾಡು ಅರ್ಪಣೆ
21 ಬಗೆಯ ತರಕಾರಿಗಳನ್ನು ಬಳಸಿ ಪರಿಸರ ಸ್ನೇಹಿ ಅಲಂಕಾರ: ಗಣಪತಿ ದೇವಸ್ಥಾನವನ್ನು ಈ ಬಾರಿ ಪರಿಸರ ಸ್ನೇಹಿಯಾಗಿಸಲು ತಿರ್ಮಾನಿಸಲಾಗಿದೆ. ಈ ಬಾರಿ ತರಕಾರಿಗಳನ್ನು ಬಳಸಿ ವಿಶೇಷವಾಗಿ ಆಲಂಕಾರ ಮಾಡಲಾಗುವುದು.
10 ಸಾವಿರ ಕೆಜಿ ಕೇಸರಿಬಾತ್ ಪ್ರಸಾದ: ಮತ್ತೊಂದು ವಿಶೇಷವೆಂದರೆ ಗಣೇಶನಿಗೆ 10 ಸಾವಿರ ಕೆ ಜಿ ಕೇಸರಿಬಾತ್ ನ್ನು ಪ್ರಸಾದವನ್ನಾಗಿ ನೀಡಲು ತೀರ್ಮಾನಿಸಲಾಗಿದೆ. ಈ ಕೇಸರಿ ಬಾತ್ ತಯಾರಿಕೆಗೆ 2 ಸಾವಿರ ಕೆಜಿ ರವೆ, 2 ಸಾವಿರ ಕೆಜಿ ಸಕ್ಕರೆ, 1 ಸಾವಿರ ಲೀಟರ್ ತುಪ್ಪ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಬಳಸಲಾಗುತ್ತಿದೆ. ಈ ಪ್ರಸಾದವನ್ನು ಹಬ್ಬದ ದಿನ ಭಕ್ತರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟಿ ರಾಮ್ ಮೋಹನ ರಾಜು ತಿಳಿಸಿದರು.