ರಾಷ್ಟ್ರಪತಿ ಆಡಳಿತ ಮುನ್ಸೂಚನೆ ನೀಡಿದರೇ ವಿಪಕ್ಷ ನಾಯಕ?
ಬೆಂಗಳೂರು, ಜುಲೈ 20: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಅದಕ್ಕೆ ಮೈತ್ರಿ ಪಕ್ಷಗಳೇ ಕಾರಣ ಎನ್ನುತ್ತಾ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತದ ಮುನ್ಸೂಚನೆಯನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೀಡಿದ್ದಾರೆ.
ಯಡಿಯೂರಪ್ಪ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ರಾಷ್ಟ್ರಪತಿ ಆಡಳಿತ ಸುಳಿವು ನೀಡಿದಂತಿದೆ.
ರಾಜ್ಯಪಾಲರ ವಾರ್ನಿಂಗ್ ಗೆ ಬೆಲೆಯಿಲ್ಲ: ಮತ್ತೆ ವಾರ್ನಿಂಗ್ ನೀಡಿದ ಗವರ್ನರ್
ರಾಜ್ಯಪಾಲರ ನಿರ್ದೇಶನಕ್ಕೂ ಡೋಂಟ್ ಕೇರ್ ಎಂದಿರುವ ಮೈತ್ರಿ ಸರ್ಕಾರ ಯಾವ ನಿರ್ದೇಶನಕ್ಕೂ ಬಗ್ಗುತ್ತಿಲ್ಲ. ಒಂದೊಮ್ಮೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಅದಕ್ಕೆ ಮೈತ್ರಿ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರು ಕೇಂದ್ರಕ್ಕೆ ವರದಿ ಕೊಟ್ಟಿದ್ದಾರೆ. ಮೈತ್ರಿ ಪಕ್ಷಗಳು ಸುಪ್ರೀಂಕೋರ್ಟ್ ಗೆ ಹೋದರೂ ಪ್ರಯೋಜನ ಇಲ್ಲ ಎಂದು ಹೇಳಿದರು.
ಈ ಹಿಂದೆ ರಾಜ್ಯಪಾಲರು ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಮಾಡಲು ಸಮಯ ಕೊಟ್ಟಿದ್ದರು. ಅಂದು ಬಿಎಸ್ವೈ ರಾಜ್ಯಪಾಲರು ನಿಗದಿ ಮಾಡಿದ್ದ ಸಮಯದಲ್ಲೇ ನಿಯಮವನ್ನು ಪಾಲಿಸಿದ್ದರು. ಆದರೆ ಈ ಸರ್ಕಾರ ರಾಜ್ಯಪಾಲರ ಸಂದೇಶಗಳನ್ನು ಗೌರವಿಸಿಲ್ಲ. ಈ ಸರ್ಕಾರಕ್ಕೆ ಬಹುಮತ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.
ಮತ್ತೊಮ್ಮೆ ಚುನಾವಣೆಗೆ ಹೋಗಲು ಯಾರಿಗೂ ಇಷ್ಟ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟು ನೋಡಿ ರಾಷ್ಟ್ರಪತಿಯವರೇ ಮಧ್ಯ ಪ್ರವೇಶ ಮಾಡಬಹುದು. ರಾಷ್ಟ್ರಪತಿ ಆಡಳಿತ ಬಂದರೆ ಅದು ಈ ಸರ್ಕಾರದ ಮೊಂಡುತನದಿಂದಲೇ ಬರಬಹುದು ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಈ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಮತ್ತೊಮ್ಮೆ ಚುನಾವಣೆಗೆ ಹೋಗಲು ಯಾರಿಗೂ ಇಷ್ಟ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟು ನೋಡಿ ರಾಷ್ಟ್ರಪತಿಯವರೇ ಮಧ್ಯ ಪ್ರವೇಶ ಮಾಡಬಹುದು. ರಾಷ್ಟ್ರಪತಿ ಆಡಳಿತ ಬಂದರೆ ಅದು ಈ ಸರ್ಕಾರದ ಮೊಂಡುತನದಿಂದಲೇ ಬರಬಹುದು ಎಂದು ಹೇಳಿದರು.
ರಾಜ್ಯಪಾಲರು ಈಗಾಗಲೇ ವರದಿಯನ್ನು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ವಿಶ್ವಾಸಮತ ಮಂಡನೆಗೆ ಶುಕ್ರವಾರ ಮಧ್ಯಾಹ್ನ 1.30ರವರೆಗೆ ಗಡುವು ನೀಡಲಾಗಿತ್ತು. ಆದರೆ ಸರ್ಕಾರವು ಅದನ್ನು ಪಾಲಿಸಿರಲಿಲ್ಲ. ಬಳಿಕ ರಾಜ್ಯಪಾಲರು ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ.