ಶುಕ್ರವಾರ ಸಿಎಂ ವಾಪಸ್: ಕಾಯುತ್ತಿದೆ ಸಚಿವಾಕಾಂಕ್ಷಿಗಳ ದಂಡು
ಬೆಂಗಳೂರು, ಜನವರಿ 23: ಶುಕ್ರವಾರ ಸಿಎಂ ಯಡಿಯೂರಪ್ಪ ಅವರು ದಾವೊಸ್ನಿಂದ ಬೆಂಗಳೂರಿಗೆ ಮರಳಲಿದ್ದಾರೆ. ಅವರಿಗಾಗಿ ಸಚಿವಾಕಾಂಕ್ಷಿಗಳ ದೊಡ್ಡ ದಂಡೇ ಕಾಯುತ್ತಿದೆ.
ಶುಕ್ರವಾರ ಬೆಳಿಗ್ಗೆ ದಾವೋಸ್ನಿಂದ ರಸ್ತೆಮೂಲಕ ಜೂರಿಚ್ಗೆ ಆಗಮಿಸಿ ಅಲ್ಲಿಂದ ವಿಮಾನದಲ್ಲಿ ದುಬೈಗೆ ಬಂದು ಅಲ್ಲಿಂದ ಮಧ್ಯಾಹ್ನ 3.30ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಬಂದಿಳಿಯಲಿದ್ದಾರೆ.
'ಇನ್ವೆಸ್ಟ್ ಕರ್ನಾಟಕ'ಕ್ಕೆ ದಾವೊಸ್ನಲ್ಲಿ ಚಾಲನೆ ನೀಡಿದ ಯಡಿಯೂರಪ್ಪ
ವರ್ಲ್ಡ್ ಎಕಾನಾಮಿಕ್ ಫೋರಂ ನಲ್ಲಿ ಭಾಗವಹಿಸಲು ಯಡಿಯೂರಪ್ಪ ಮತ್ತು ನಿಯೋಗವು ಸಿಂಗಪುರದ ದಾವೊಸ್ಗೆ ಜನವರಿ 19 ರಂದು ತೆರಳಿದ್ದರು. ಐದು ದಿನಗಳ ನಂತರ ನಾಳೆ ಯಡಿಯೂರಪ್ಪ ವಾಪಸ್ಸಾಗಲಿದ್ದಾರೆ. ಅಲ್ಲಿದ್ದ ಐದೂ ದಿನ ಸೂಟು-ಬೂಟಿನಲ್ಲಿ ಮಿಂಚಿದ್ದ ಯಡಿಯೂರಪ್ಪ ನಾಳೆ ಮತ್ತೆ ಬಿಳಿ-ಷರ್ಟ್ ಪ್ಯಾಂಟ್ ಧರಿಸಿ 'ರಾಜ್ಯ ರಾಜಕಾರಣಿ' ಆಗಲಿದ್ದಾರೆ.
ಐದು ದಿನಗಳಿಂದ ಅಭಿವೃದ್ಧಿ, ಹೂಡಿಕೆ, ಚರ್ಚೆಗಳಲ್ಲಿ ನಿರತರಾಗಿದ್ದ ಯಡಿಯೂರಪ್ಪ ನಾಳೆಯಿಂದ ಸಂಪುಟ ವಿಸ್ತರಣೆ ಕಡೆಗೆ ತುರ್ತಾಗಿ ಗಮನ ಹರಿಸಬೇಕಿದೆ. ಸಿಎಂ ವಿದೇಶ ಪ್ರವಾಸ ಮುಗಿಸಿ ಬರಲೆಂದೇ ಸಚಿವಾಕಾಂಕ್ಷಿಗಳ ದೊಡ್ಡ ಗುಂಪು ಇಲ್ಲಿ ಕಾಯುತ್ತಿದೆ.
'ವಿದೇಶ ಪ್ರವಾಸಕ್ಕೆ ತೆರಳುವ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ' ಎಂದು ಮೊದಲಿಗೆ ಹೇಳಿದ್ದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಮಾಡದೆ ವಿದೇಶಕ್ಕೆ ತೆರಳಿದರು. ಹಾಗಾಗಿ ಈಗ ವಿದೇಶದಿಂದ ಬಂದ ಕೂಡಲೇ ತುರ್ತಾಗಿ ಸಂಪುಟ ವಿಸ್ತರಣೆ ಆಗಲೇಬೇಕಿದೆ.
'World Economic Forum'ನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ...
ಮಾಜಿ ಅನರ್ಹರು ಮತ್ತು ಬಿಜೆಪಿ ಹಿರಿಯ ಶಾಸಕರುಗಳ ನಡುವೆ ಸಂಪುಟ ಸ್ಥಾನಕ್ಕಾಗಿ ತೀವ್ರ ಹಗ್ಗ-ಜಗ್ಗಾಟ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಬಂದಿದ್ದ ಅಮಿತ್ ಶಾ ಸಹ ಯಡಿಯೂರಪ್ಪ ಗೆ ಸಂಪುಟ ವಿಸ್ತರಣೆ ಕುರಿತು ಸೂಚನೆ ನೀಡಿ ಹೋಗಿದ್ದಾರೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, 'ಕಷ್ಟಪಟ್ಟು' ಕಟ್ಟಿದ ಸರ್ಕಾರ ಬೀಳದಂತೆ ಸಂಪುಟ ವಿಸ್ತರಣೆ ಮಾಡುವ ಜವಾಬ್ದಾರಿ ಯಡಿಯೂರಪ್ಪ ಮೇಲಿದೆ.