ಕಳೆದೆರಡು ದಿನಗಳಿಂದ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ?
ಬೆಂಗಳೂರು, ಆ. 06: ಕೊರೊನಾವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲಿದ್ದಾರೆ. ಕಳೆದ ಆಗಸ್ಟ್ 2 ರಂದು ರಾತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಂದಲೇ ಸರ್ಕಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಮಳೆ ಹಾನಿಯ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂಬ ಮಾಹಿತಿಯಿದೆ.
ಜೊತೆಗೆ ಆಸ್ಪತ್ರೆಯಿಂದಲೇ ಸಿಎಂ ಯಡಿಯೂರಪ್ಪ ಅವರು ತಮ್ಮ ಇಲಾಖೆಗಳ ಕಡತ ವಿಲೇವಾರಿ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಯಾವುದೇ ಹಿನ್ನೆಡೆ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಆರೋಗ್ಯದ ದೃಷ್ಟಿಯಿಂದ ಮತ್ತೊಂದು ಕೆಲಸ ಮಾಡುತ್ತಿದ್ದಾರೆ. ಅದು ಓದು.
ನಿಮ್ಮ ಏರಿಯಾದಲ್ಲೇ ಕೊವಿಡ್ 19 ಪರೀಕ್ಷೆ ಮಾಡ್ಸಿಕೊಳ್ಳಿ!
ಆರೋಗ್ಯ ವೃದ್ಧಿಯ ಸಲುವಾಗಿ ಯಡಿಯೂರಪ್ಪ ಅವರು ಭಗವಾನ್ ಹನುಮಂತನ ಮೊರೆಹೋಗಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಹನುಮಂತನ ಆರಾಧನೆ ಮಾಡುತ್ತಿದ್ದಾರೆ. ಹೀಗಾಗಿ ಸುಂದರ ಕಾಂಡ ಭಾಗವನ್ನು ಸಿಎಂ ಯಡಿಯೂರಪ್ಪ ಓದುತ್ತಿದ್ದಾರೆ. ಸುಂದರ ಕಾಂಡ ಓದುವುದರಿಂದ ವಾನರ ಶ್ರೇಷ್ಠ ಆಂಜನೇಯನ ಕೃಪೆಗೆ ಪಾತ್ರರಾಗಬಹುದು ಎಂಬ ಪ್ರತೀತಿ ಇದೆ.
ಸುಂದರ ಕಾಂಡ ಓದುವದರಿಂದ ಹನುಮಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಅದರಿಂದ ದೇಹ ಹಾಗೂ ಮನಸ್ಸಿನ ಸ್ವಾಸ್ಥ್ಯ ಹೆಚ್ಚುತ್ತದೆ. ರೋಗ ರುಜಿನಗಳು ದೂರವಾಗುತ್ತದೆ ಎಂಬ ಪ್ರತೀತಿ ಹಿಂದೂ ಧರ್ಮದಲ್ಲಿದೆ. ಹೀಗಾಗಿ ಆಪ್ತರ ಸಲಹೆ ಮೇರೆಗೆ ಸುಂದರ ಕಾಂಡವನ್ನು ಯಡಿಯೂರಪ್ಪ ಅವರು ಓದುತ್ತಿದ್ದಾರೆ. ಇತ್ತೀಚೆಗೆ ಅವರು ಓದುವ ಹವ್ಯಾಸವನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಸುಂದರ ಕಾಂಡ ಹನುಮಂತನ ಸಾಹಸಗಳುಳ್ಳ ರಾಮಾಯಣದ ಭಾಗವಾಗಿದೆ.