ಅವರು ಯಾರ್ರೀ?, ಜಮೀರ್ ಅಹ್ಮದ್ ವಿರುದ್ಧ ಗುಡುಗಿದ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 20: ''ಅವರು ಯಾರ್ರೀ..?, ಅವರಿಗೇನು ಸಂಬಂಧ..?'' ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದ್ದಾರೆ. ಪಾದರಾಯನಪುರ ಗಲಾಟೆ ಬಗ್ಗೆ ಜಮೀರ್ ಅಹ್ಮದ್ ನೀಡಿರುವ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಿನ್ನೆ ನಡೆದ ಗಲಭೆ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಜಮೀರ್ ಅಹ್ಮದ್ ''ಗಲಾಟೆ ಆಗಬಾರದಿತ್ತು ಆದರೆ ಆಗಿದೆ. ಅದನ್ನು ನಾನು ಖಂಡಿಸುತ್ತೇನೆ. ಅಲ್ಲಿ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ. ಆರೋಗ್ಯ ಅಧಿಕಾರಿಗಳು ರಾತ್ರಿ ಅಲ್ಲಿಗೆ ಹೋಗಬಾರದಿತ್ತು. ಬೆಳಗ್ಗೆ ಹೋಗಬೇಕಿತ್ತು.'' ಎಂದಿದ್ದಾರೆ.
ನನ್ನ ಹೆಸರು ಕೆಡಿಸಲು ಯತ್ನ: ಶಾಸಕ ಜಮೀರ್ ಅಹ್ಮದ್ ಟ್ವೀಟ್
ಜಮೀರ್ ಅಹ್ಮದ್ ಆರೋಗ್ಯ ಅಧಿಕಾರಿಗಳು ರಾತ್ರಿ ಅಲ್ಲಿಗೆ ಹೋಗಿದ್ದು, ತಪ್ಪು ಎನ್ನುವಂತೆ ಹೇಳಿಕೆ ನೀಡಿದ್ದರು. ಆ ಹೇಳಿಕೆಯ ಬಗ್ಗೆ ಮಾಧ್ಯಮಗಳು ಯಡಿಯೂರಪ್ಪರಿಗೆ ಪ್ರಶ್ನೆ ಮಾಡಿದಾಗ, ಜಮೀರ್ ಅಹ್ಮದ್ ವಿರುದ್ಧ ಮುಖ್ಯಮಂತ್ರಿ ಗುಡುಗಿದ್ದಾರೆ.
ಅವರು ಯಾರ್ರೀ?
''ಅವರು ಯಾರ್ರೀ? ಕೇಳುವುದಕ್ಕೆ, ಅವರಿಗೇನು ಸಂಬಂಧ?, ನಾವು ಎಲ್ಲಿಗೆ ಹೋಗಬೇಕು, ಏನು ಕ್ರಮ ತೆಗೆದುಕೊಳ್ಳಬೇಕು, ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರ ಅಪ್ಪಣೆ ಪಡೆಯಬೇಕೆ? ಈ ತರ ಹೇಳಿಕೆ ನೀಡಲು ಅವರಿಗೇನು ಸಂಬಂಧ. ಹಾಗಾದರೆ, ಒಂದು ರೀತಿ ಅವರೇ ಇದಕ್ಕೆಲ್ಲ ಪ್ರಚೋದನೆ ನೀಡುತ್ತಿದ್ದಾರೆ ಎಂದು ಭಾವಿಸಬೇಕಾ?.'' ಎಂದು ಜಮೀರ್ ಅಹ್ಮದ್ ವಿರುದ್ಧ ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ.
ಬೇಜವಾಬ್ದಾರಿ ತನದ ಪರಮಾವದಿ
''ಅವರ (ಜಮೀರ್ ಅಹ್ಮದ್) ಮಾತಿನ ಅರ್ಥ ಏನು?. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಬೇಕಾದ ವ್ಯಕ್ತಿ, ಈ ರೀತಿ ಹೇಳಿಕೆ ನೀಡಿದ್ದಾರೆ. ಇದು ಬೇಜವಾಬ್ದಾರಿ ತನದ ಪರಮಾವದಿ.'' ಎಂದು ಯಡಿಯೂರಪ್ಪ ಹೇಳಿದ್ದಾರೆ. ಪಾದರಾಯನಪುರ ಗಲಭೆ ಬಗ್ಗೆ ಜಮೀರ್ ನೀಡಿದ್ದ ಹೇಳಿಕೆ ಬಗ್ಗೆ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾದರಾಯನಪುರ ದಾಂಧಲೆ: ಪೊಲೀಸರಿಗೆ ಫ್ರೀ ಹ್ಯಾಂಡ್ ಘೋಷಿಸಿದ ಸಿಎಂ
ಜಮೀರ್ ನೀಡಿದ್ದ ಹೇಳಿಕೆ ಏನು?
''ಗಲಾಟೆ ಆಗಬಾರದಿತ್ತು ಆದರೆ ಆಗಿದೆ. ಅದನ್ನು ನಾನು ಖಂಡಿಸುತ್ತೇನೆ. ಅಲ್ಲಿ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ. ನಾನು ಬಿಬಿಎಂಪಿ ಕಮಿಷನರ್ಗೆ ರಾತ್ರಿ ವೇಳೆ ಹೋಗುವುದು ಬೇಡ ಎಂದು ಹೇಳಿದ್ದೆ. ಆದರೆ, ಆರೋಗ್ಯ ಅಧಿಕಾರಿಗಳು ರೂಮ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ರಾತ್ರಿ ಹೋಗಿದ್ದಾರೆ. ಪಾಸಿಟಿವ್ ಅಲ್ಲದೆ, ಕೊರೊನಾ ಶಂಕೆ ಇದ್ದವರು ಇರುವ ಕಾರಣ, ಅರಿವು ಮೂಡಿಸಿ ಬೆಳಗ್ಗೆ ವೇಳೆ ಹೋಗಬೇಕಿತ್ತು.'' ಎಂದು ಜಮೀರ್ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆಯ ವಿವರ
ಪಾದರಾಯನಪುರದಲ್ಲಿ ಕ್ವಾರೆಂಟೈನ್ ಗೆ ಒಳಪಡಿಸಲು ಬಿಬಿಎಂಪಿ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ತೆರಳಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೆರಳಿದ ಕೆಲವರು ಸೀಲ್ ಡೌನ್ ಮಾಡಿರುವ ಏರಿಯಾದಲ್ಲಿ ಅಳವಡಿಸಿದ ಬ್ಯಾರಿಕೇಡ್ ಹಾಗೂ ತಗಡುಗಳನ್ನು ಕಿತ್ತೆಸೆದು ಗಲಾಟೆ ಮಾಡಿದ್ದಾರೆ. ಕೊರೊನಾ ವೈರಸ್ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58ಕ್ಕೂ ಹೆಚ್ಚು ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿತ್ತು. 58 ಜನರ ಪೈಕಿ 20 ಜನರನ್ನು ಬೇರೆಡೆ ಶಿಫ್ಟ್ ಮಾಡಲಾಗಿದ್ದು, ಉಳಿದ 38 ಜನರನ್ನು ಸ್ಥಳಾಂತರಿಸಲು ಬಿಬಿಎಂಪಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಕಿಡಿಗೇಡಿಗಳು ದಾಂದಲೆ ಮಾಡಿದ್ದು, ಇಂದು ಇವರನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ.