ಬಿಬಿಎಂಪಿ ಬಜೆಟ್ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ!
ಬೆಂಗಳೂರು, ಆಗಸ್ಟ್ 05 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರು ನಗರದ ಆಡಳಿತದ ಬಗ್ಗೆ ಗಮನ ಹರಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಂಡನೆ ಮಾಡಿದ್ದ 12,957 ಕೋಟಿ ರೂ. ವೆಚ್ಚದ ಬಜೆಟ್ಗೆ ತಡೆ ನೀಡಿದ್ದಾರೆ.
ನಗರಾಭಿವೃದ್ಧಿ ಇಲಾಖೆಗೆ ಯಡಿಯೂರಪ್ಪ ಈ ಕುರಿತು ಪತ್ರ ಬರೆದಿದ್ದಾರೆ. ಬಿಬಿಎಂಪಿಯ ಆಯವ್ಯಯಕ್ಕೆ ಸಚಿವ ಸಂಪುಟ ಅನುಮೋದನೆಯನ್ನು ಪಡೆದು ಸರ್ಕಾರಿ ಆದೇಶವನ್ನು ಶೀಘ್ರದಲ್ಲಿಯೇ ಹೊರಡಿಸಲಾಗುತ್ತದೆ. ಅಲ್ಲಿಯ ತನಕ ಬಜೆಟ್ ಅನಷ್ಠಾನಕ್ಕಾಗಿ ಜಾಬ್ ಕೋಡ್ ನೀಡುವುದು, ಟೆಂಡರ್ ಕರೆಯುವುದನ್ನು ತಕ್ಷಣದಿಂದ ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಬಿಬಿಎಂಪಿಗೆ ಮತ್ತೆ ಇಲಿಗಳ ಕಾಟವಂತೆ, ಒಂದು ಇಲಿ ಹಿಡಿದರೆ 10 ಸಾವಿರ
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ಯಡಿಯೂರಪ್ಪ, "ಬಿಬಿಎಂಪಿಯಲ್ಲಿ ಅನಗತ್ಯವಾಗಿ ಫುಟ್ಪಾತ್ಗಳನ್ನು ಕಿತ್ತು ರಿಪೇರಿ ಕೆಲಸ ಮಾಡುತ್ತಿದ್ದಾರೆ. ವೈಟ್ ಟ್ಯಾಪಿಂಗ್ನಲ್ಲೂ ಅನಗತ್ಯ ವೆಚ್ಚವಾಗಿದೆ. ಪಾಲಿಕೆಯಲ್ಲಿ ಲೂಟಿ ನಡೆಯುತ್ತಿದೆ" ಎಂದು ಹೇಳಿದರು.
ಬಿಬಿಎಂಪಿ ಬಜೆಟ್ 2019 : ಏನಿದೆ, ಏನಿಲ್ಲ?
2019ರ ಫೆಬ್ರವರಿ 18ರಂದು ಬಿಬಿಎಂಪಿ 10,668.63 ಕೋಟಿ ವೆಚ್ಚದ ಬಜೆಟ್ ಮಂಡನೆ ಮಾಡಿತ್ತು. ಬಳಿಕ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಜೆಟ್ ಗಾತ್ರವನ್ನು 12,957.79 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಆಗ ಪಾಲಿಕೆಯ ಪ್ರತಿಪಕ್ಷ ಬಿಜೆಪಿ ಬಜೆಟ್ ಗಾತ್ರ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು...
ಬಿಬಿಎಂಪಿ ಬಜೆಟ್ 2019: ಮಹಿಳೆಯರಿಗೆ ಸಿಕ್ಕಿದ್ದೇನು?
ಬಜೆಟ್ ಗಾತ್ರ ತಗ್ಗಿಸಿ
12,957.79 ಕೋಟಿ ರೂ. ವೆಚ್ಚದ ಬಜೆಟ್ ಗಾತ್ರವನ್ನು 9000 ಕೋಟಿ ರೂ.ಗಳಿಗೆ ಇಳಿಕೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಬಿಬಿಎಂಪಿ ಬೇಕಾಬಿಟ್ಟಿಯಾಗಿ ಆದಾಯದ ಸಂಗ್ರಹದ ಸ್ಪಷ್ಟ ಗುರಿ ಇಲ್ಲದೇ ಬಜೆಟ್ ಮಂಡನೆ ಮಾಡಿದೆ ಎಂದು ಆರೋಪಿಸಲಾಗಿತ್ತು. ಈಗ ಸರ್ಕಾರ ಬಜೆಟ್ ಗಾತ್ರವನ್ನು ಕಡಿಮೆ ಮಾಡಲಿ ಸೂಚನೆ ನೀಡಲಿದೆಯೇ? ಕಾದು ನೋಡಬೇಕು.
ಮೈತ್ರಿ ಆಡಳಿತಕ್ಕೆ ಸರ್ಕಾರ ಬಿಸಿ
ಪಾಲಿಕೆ ಬಜೆಟ್ಅನ್ನು ಸರ್ಕಾರದ ಒಪ್ಪಿಗೆಗಾಗಿ ಕಳಿಸಲಾಗಿತ್ತು. ಆದರೆ, ರಾಜಕೀಯ ಅಸ್ಥಿರತೆ ಕಾರಣ ಬಜೆಟ್ಗೆ ಸಚಿವ ಸಂಪುಟ ಸಭೆಯ ಒಪ್ಪಿಗೆ ಸಿಕ್ಕಿಲ್ಲ. ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಬಜೆಟ್ಗೆ ತಡೆ ನೀಡಲಾಗಿದೆ. ಅಂದಹಾಗೆ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತವಿದೆ.
ಯಡಿಯೂರಪ್ಪ ಸ್ಪಷ್ಟನೆ
"ಬೆಂಗಳೂರು ನಗರದ ಅಭಿವೃದ್ಧಿ ಕಾರ್ಯ ನಿಲ್ಲಿಸಬೇಕು ಎಂದು ಬಜೆಟ್ಗೆ ತಡೆ ಕೊಟ್ಟಿಲ್ಲ.ಪರಿಶೀಲನೆ ಮಾಡಿ ಎಸ್ಟಿಮೇಟ್ ಮಾಡಿ ಖರ್ಚು ಮಾಡಬೇಕು. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು" ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ಬೆಂಗಳೂರು ನಗರ ಪ್ರದಕ್ಷಿಣೆ
ಮುಂದಿನ ವಾರ ಮುಖ್ಯಮಂತ್ರಿಗಳು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಲಿದ್ದಾರೆ. "ನಗರದಲ್ಲಿ ಕಸ ತೆರವು ಮಾಡಬೇಕು. ಮೂರು ದಿನಗಳ ಬಳಿಕ ದೆಹಲಿಯಲಿಂದ ವಾಪಸ್ ಬರುತ್ತೇನೆ. ಅಷ್ಟರಲ್ಲಿ ತ್ಯಾಜ್ಯ ಸಮಸ್ಯೆ ಇರಬಾರದೆಂದು ಅಧಿಕಾರಿಕಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.