ಜೂನ್ 3 ಅಥವಾ 4ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಗರ ಪ್ರದಕ್ಷಿಣೆ?
ಬೆಂಗಳೂರು, ಮೇ 30: ಕೊರೊನಾ ವೈರಸ್ ವಿರುದ್ಧ ಹೋರಾಡಬೇಕಾದ ಸಂದರ್ಭದ ಜೊತೆ ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಬೆಂಗಳೂರು ಪ್ರದಕ್ಷಿಣೆ ಹಾಕಲು ತೀರ್ಮಾನಿಸಿದ್ದಾರೆ.
ಜೂನ್ 3 ಅಥವಾ ಜೂನ್ 4 ರಂದು ಬೆಂಗಳೂರು ನಗರ ಸುತ್ತಮುತ್ತ ಸಿಎಂ ರೌಂಡ್ ಹಾಕಲಿದ್ದು, ಮಳೆಗಾಲದಲ್ಲಿ ಕೊರೊನಾ ವೈರಸ್ ನಿಯಂತ್ರಣ ಮಾಡುವುದರ ಕುರಿತು ಗಮನಹರಿಸಲಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವನೆ, ಉಗುಳುವುದು ನಿಷೇಧ
ಸದ್ಯಕ್ಕೆ ಜೂನ್ 3 ಅಥವಾ 4 ಎಂಬುದು ಪಕ್ಕಾ ಆಗಿಲ್ಲ. ಆದರೆ, ಸಿಎಂ ನಗರ ಪ್ರದಕ್ಷಿಣೆ ನಿರ್ಧಾರವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ವಿಧಾನಸೌಧದಲ್ಲಿ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಯಾವ ಯಾವ ಪ್ರದೇಶಕ್ಕೆ ಸಿಎಂ ಭೇಟಿ ನೀಡಲಿದ್ದಾರೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಈ ಕಡೆ ಕೊರೊನಾ ವೈರಸ್ ಪ್ರಕರಣಗಳು ಸಹ ರಾಜ್ಯದಲ್ಲಿ ಏರಿಕೆಯಾಗುತ್ತಿದೆ. ಮುಂದಿನ ದಿನದಲ್ಲಿ ಕೊರೊನಾ ಮತ್ತು ಮಳೆ ವಿರುದ್ಧ ಹೋರಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸರ್ಕಾರಕ್ಕಿದೆ.
ಮೇ 31ರಂದು ನಾಲ್ಕನೇ ಹಂತದ ಲಾಕ್ಡೌನ್ ಮುಗಿಯಲಿದೆ. ಜೂನ್ 1ರ ಬಳಿಕ ದೇಶಾದ್ಯಂತ ಲಾಕ್ಡೌನ್ 5.0 ಆರಂಭವಾಗುವ ಸಾಧ್ಯತೆ ಇದೆ. ಕೇಂದ್ರದ ಮಾರ್ಗಸೂಚಿಗಾಗಿ ರಾಜ್ಯ ಸರ್ಕಾರಗಳು ಕಾಯುತ್ತಿದೆ. ಕೇಂದ್ರದ ನಿಬಂಧನೆಗಳ ಬಂದ ಬಳಿಕ ಸಿಎಂ ನಗರ ಪ್ರದಕ್ಷಿಣೆ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.