ಕೊರೊನಾ ಆತಂಕದ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಕೆಲಸ!
ಬೆಂಗಳೂರು, ಜೂ. 24: ಕೊರೊನಾ ಆತಂಕದ ಮಧ್ಯೆ ಬೆಂಗಳೂರು ಅಭಿವೃದ್ಧಿಯತ್ತಲೂ ಗಮನ ಕೊಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀರ್ಮಾನಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ನೀಗಿಸಲಿರುವ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಮತ್ತು ರೈಲು ಮಾರ್ಗ ಡಬ್ಲಿಂಗ್ ಯೋಜನೆಗಳ ಕಾಮಗಾರಿ ಪ್ರಗತಿಯನ್ನು ಅವರು ಪರಿಶೀಲಿಸಿದ್ದಾರೆ. ಎರಡು ಯೋಜನೆಗಳಿಂದ ಬೆಂಗಳೂರಿನಲ್ಲಿ ಸಂಚಾರದ ದಟ್ಟಣೆ ಕಡಿಮೆಯಾಗಲಿದೆ ಎನ್ನಲಾಗಿದೆ. ಜೊತೆಗೆ ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಸಮಯ ಕೂಡ ಕಡಿಮೆಯಾಗಲಿದೆ.
Recommended Video
ಯೋಜನೆ ಕಾಮಗಾರಿಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು, ಬೆಂಗಳೂರು ಕಂಟೋನ್ಮೆಂಟ್ ನಿಂದ ಹೀಲಲಿಗೆ ನಡುವೆ ಸಂಚರಿಸಿ, ಈ ಎರಡೂ ಯೋಜನೆಗಳ ತಪಾಸಣೆಯನ್ನು ನಡೆಸಿದ್ದಾರೆ. ಸಬ್ಅರ್ಬನ್ ಯೋಜನೆಯಿಂದ ಬೆಂಗಳೂರು ನಗರದ ಹೊರವಲಯದ ಉಪನಗರಗಳು ಹಾಗೂ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಾರಿಗೆ ಸಂಪರ್ಕ ಸುಲಭವಾಗಲಿದ್ದು, ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ಸಬ್ಅರ್ಬನ್ ರೈಲು ಯೋಜನೆ
ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದಾರೆ. "ರೈಲ್ವೆ ಡಬಲಿಂಗ್ ಯೋಜನೆಗಳಿಂದ ಬೆಂಗಳೂರು ನಗರದಿಂದ ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆಯನ್ನು 15,767 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಈ ಯೋಜನೆಯ ವೆಚ್ಚವನ್ನು ಕರ್ನಾಟಕ ಸರ್ಕಾರ, ಭಾರತ ಸರ್ಕಾರದ ಅನುದಾನ ಮತ್ತು ಬಾಹ್ಯ ಸಂಪನ್ಮೂಲಗಳಿಂದ 20:20:60ರ ಅನುಪಾತದಲ್ಲಿ ಭರಿಸಿ ಅನುಷ್ಠಾನಗೊಳಿಸಲಾಗುತ್ತಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವರಿಸಿದ್ದಾರೆ.
"2020-21ರಲ್ಲಿ ರಾಜ್ಯ ಸರ್ಕಾರ 400 ಕೋಟಿ ರೂ. ಗಳನ್ನು ಈ ಯೋಜನೆಗಾಗಿ ಬಿಡುಗಡೆ ಮಾಡಿದೆ. ಕರ್ನಾಟಕಟಕ ಸರ್ಕಾರ ಮತ್ತು ಕೇಂದ್ರದ ರೈಲ್ವೆ ಸಚಿವಾಲಯದ ಜಂಟಿ ಮಾಲೀಕತ್ವದ ಕೆ-ರೈಡ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ" ಎಂದು ಯಡಿಯೂರಪ್ಪ ಅವರು ವಿವರಿಸಿದ್ದಾರೆ.
ಶೀಘ್ರ ಕಾಮಗಾರಿ ಆರಂಭ
ಒಟ್ಟು 148 ಕಿ.ಮೀ. ಉದ್ದದ ಈ ಯೋಜನೆಯಲ್ಲಿ 4 ಕಾರಿಡಾರ್ಗಳನ್ನು ಹೊಂದಿದೆ. 41.40 ಕಿ.ಮೀ.ಯ ಕೆಆರ್ಎಸ್ ಬೆಂಗಳೂರು ಸಿಟಿ-ದೇವನಹಳ್ಳಿ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದಂತೆ) ರೇಲ್ವೆ ಟ್ರ್ಯಾಕ್ ನಿರ್ಮಾಣವಾಗಲಿದೆ. ಅದರೊಂದಿಗೆ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ (25 ಕಿ.ಮೀ.), ಕೆಂಗೇರಿ- ವೈಟ್ಫೀಲ್ಡ್ (35.52 ಕಿ.ಮೀ.), ಹೀಲಲಿಗೆ (ಚಂದಾಪುರ)- ರಾಜಾನುಕುಂಟೆ (46.24 ಕಿ.ಮೀ.) ಇದರಲ್ಲಿ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮತ್ತು ಹೀಲಲಿಗೆ (ಚಂದಾಪುರ)- ರಾಜಾನುಕುಂಟೆ ಕಾರಿಡಾರ್ಗಳ ಕಾಮಗಾರಿಯನ್ನು ಮೊದಲಿಗೆ ಕೈಗೆತ್ತಿಕೊಳ್ಳಲಾಗುತ್ತಿದೆ.
ರೈಲ್ವೆ ಲೈನ್ ಡಬ್ಲಿಂಗ್
ಯಶವಂತಪುರ-ಚನ್ನಸಂದ್ರ ವಿಭಾಗ ಮತ್ತು ಬೈಯಪ್ಪನಹಳ್ಳಿ-ಹೊಸೂರು ಮಾರ್ಗಗಳು ಸಿಂಗಲ್ ಲೈನ್ಗಳಾಗಿದ್ದವು. ಈ ಕಾರಣದಿಂದ ಬೆಂಗಳೂರು ಮಹಾನಗರದಿಂದ ಹೆಚ್ಚುವರಿ ರೈಲುಗಳ ಕಾರ್ಯಾಚರಣೆ ನಡೆಸಲು ತೊಡಕು ಉಂಟಾಗಿತ್ತು. ಅದರ ನಿವಾರಣೆಗಾಗಿ 2018-19ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಶೇಕಡಾ 50: 50 ಅನುಪಾತದ ವೆಚ್ಚ ಹಂಚಿಕೆ ಆಧಾರದಲ್ಲಿ ಈ ಮಾರ್ಗಗಳ ಡಬ್ಲಿಂಗ್ ಯೋಜನೆಗೆ ಮಂಜೂರಾತಿ ಲಭಿಸಿತ್ತು" ಎಂದು ಸಿಎಂ ಯಡಿಯೂರಪ್ಪ ಪರಿಶೀಲನೆ ಬಳಿಕ ವಿವರಿಸಿದ್ದಾರೆ.
"ಈ ಯೋಜನೆಯನ್ನೂ ಸಹ ಕೆ-ರೈಡ್ ಮೂಲಕ ಜಾರಿಗೊಳಿಸಲಾಗುತ್ತಿದೆ. ಬೈಯಪ್ಪನಹಳ್ಳಿ-ಹೊಸೂರು ನಡುವಿನ 48 ಕಿ.ಮೀ. ರೈಲು ಮಾರ್ಗ ಡಬ್ಲಿಂಗ್ ಯೋಜನೆಯು 499 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರ 250 ಕೋಟಿ ರೂ. ವೆಚ್ಚ ಭರಿಸಲಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.
ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭ
ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ 2020-21ರಲ್ಲಿ 65 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಯೋಜನೆ 2020ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಿದ್ದು, 2023ರ ಡಿಸೆಂಬರ್ ತಿಂಗಳ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿಯ ಪೂರ್ವ ಸಿದ್ಧತೆ, ಸೇತುವೆಗಳ ವಿಸ್ತರಣೆ ಮೊದಲಾದ ಕೆಲಸಗಳು ಪ್ರಗತಿಯಲ್ಲಿವೆ.
ಯಶವಂತಪುರ-ಚನ್ನಸಂದ್ರ ನಡುವಣ 22 ಕಿ.ಮೀ. ಮಾರ್ಗದ ಡಬಲಿಂಗ್ ಯೋಜನೆಗೆ ಒಟ್ಟು 315 ಕೋಟಿ ರೂ. ವೆಚ್ಚವಾಗಲಿದೆ. ರಾಜ್ಯ ಸರ್ಕಾರ 157 ಕೋಟಿ ರೂ. ಭರಿಸಲಿದ್ದು, ಕಳೆದ ಆರ್ಥಿಕ ವರ್ಷಲ್ಲಿ 35 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಯೋಜನೆ ಪ್ರಗತಿ ಪರಿಶೀಲನೆ ಮಾಡಿದ ಸಿಎಂ ಯಡಿಯೂರಪ್ಪ ಅವರು, "ಕೇಂದ್ರ ಸರ್ಕಾರವೂ ಈ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ನಿಗದಿತ ಕಾಲಮಿತಿಯೊಳಗೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಪರಿಶೀಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.