ಸಂಸದ ತೇಜಸ್ವಿ ಸೂರ್ಯಗೆ ಮುಖ್ಯಮಂತ್ರಿ ಯಡಿಯೂರಪ್ಪ 'ಕ್ಲಾಸ್'
ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಸಂಗತಿಯನ್ನು ಮೂಲಗಳು ತಿಳಿಸಿವೆ. "ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕು ಅಂತೇನೂ ಇಲ್ಲ" ಎಂದು ಈಚೆಗೆ ತೇಜಸ್ವಿ ಸೂರ್ಯ ಹೇಳಿದ್ದರು.
ಈ ಹೇಳಿಕೆ ಒಳಗೊಂಡಂತೆ ಇತ್ತೀಚೆಗೆ ತೇಜಸ್ವಿ ಸೂರ್ಯ ಮಾತನಾಡಿದ ಕೆಲ ಸಂಗತಿಗಳನ್ನು ಪ್ರಸ್ತಾಪಿಸಿ, ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಕನ್ನಡ ಭಾಷೆ, ನೆಲ- ಜಲ ಇಂಥ ಭಾವನಾತ್ಮಕ ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ಹೇಳಿದ್ದಾರೆ.
ನೆರೆಗೆ ಕೇಂದ್ರದ ನೆರವಿನ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ
ಅದೇ ವೇಳೆ, ತೇಜಸ್ವಿ ಸೂರ್ಯ ಸಮಜಾಯಿಷಿ ನೀಡಲು ಪ್ರಯತ್ನಿಸಿದ್ದಾರೆ. ಆಗ ಯಡಿಯೂರಪ್ಪ, ಈ ರೀತಿ ಹೇಳಿಕೆ ನೀಡುವುದಕ್ಕೆ ನಿಮಗೆ ಯಾರು ಅನುಮತಿ ನೀಡಿದರು ಎಂದು ಗದರಿಸಿದ್ದಾಗಿ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದಿಂದ ನೆರೆ ಪರಿಹಾರಕ್ಕೆ ಹಣ ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನೆ ಕೇಳಿದಾಗ ನೀಡುವ ಉತ್ತರ ಸಿಟ್ಟಿಗೇಳಿಸುವಂತೆ ಇರಬಾರದು. ಹೀಗೆ ಪ್ರಶ್ನೆ ಮಾಡುವುದು ರಾಜ್ಯದ ಜನರ ಹಕ್ಕು ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರಿದು, ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳಿ. ಹಿರಿಯರ ನಡವಳಿಕೆಯಿಂದ ಕಲಿಯಿರಿ ಎಂದು ಯಡಿಯೂರಪ್ಪ ಹೇಳಿದ್ದಾಗಿ ತಿಳಿದುಬಂದಿದೆ.