'ಬದಲಾಗು ನೀನು, ಬದಲಾಯಿಸು ನೀನು' ಹಾಡು ಲೋಕಾರ್ಪಣೆ ಮಾಡಿದ ಸಿಎಂ
ಬೆಂಗಳೂರು, ಜೂನ್ 5: ಕೊರೊನಾ ವೈರಸ್ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪವನ್ ಒಡೆಯರ್ ನಿರ್ದೇಶನ ಮಾಡಿರುವ 'ಬದಲಾಗು ನೀನು, ಬದಲಾಯಿಸು ನೀನು' ಹಾಡನ್ನು ಮುಖ್ಯಮಂತ್ರಿ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರು ಹಾಗೂ ಕ್ರೀಡಾರಂಗದ ಖ್ಯಾತನಾಮರು ನಟಿಸಿದ್ದಾರೆ. ಹಾಡು ನೋಡಿದ ಸಿಎಂ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ.
Big Breaking: ಒಂದೇ ದಿನ ಕರ್ನಾಟಕದಲ್ಲಿ 515 ಕೊರೊನಾ ಕೇಸ್ ಪತ್ತೆ
ಸಿಎಂ ಹಾಡು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಚಿವ ಡಾ ಸುಧಾಕರ್ ಹಾಡಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ''ಇದು ವೈದ್ಯಕೀಯ ಶಿಕ್ಷಣ ಇಲಾಖೆಯ ವಿನೂತನ ಪ್ರಯತ್ನವಾಗಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 'ಬದಲಾಗು ನೀನು, ಬದಲಾಯಿಸು ನೀನು' ಎಂಬ ಸುಂದರ ದೃಶ್ಯರೂಪಕವೊಂದನ್ನು ರೂಪಿಸಿದ್ದೇವೆ. ಚಲನಚಿತ್ರ ಕಲಾವಿದರು, ಸಂಗೀತ ನಿರ್ದೇಶಕರು, ಕ್ರೀಡಾ ತಾರೆಯರು ದನಿಯಾಗಿರುವ ಈ ದೃಶ್ಯರೂಪಕದ ಪರಿಕಲ್ಪನೆ ನಾನು ಸ್ವಯಂ-ಕ್ವಾರಂಟೈನ್'ಗೆ ಒಳಗಾಗಿದ್ದಾಗ ನನ್ನಲ್ಲಿ ಮೂಡಿತ್ತು''
''ಇಡೀ ವಿಶ್ವವೇ ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ಸಮಯದಲ್ಲಿ ರಾಜ್ಯದ ಜನರ ಸೇವೆ ಮಾಡುವ ಸದವಕಾಶ ನನಗೆ ಒದಗಿ ಬಂದಿತು. ಸರ್ಕಾರ ತೆಗೆದುಕೊಳ್ಳುತ್ತಿರುವ ಅಪಾರ ಮುಂಜಾಗ್ರತಾ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಕೆಲಸ ಪ್ರಮುಖವಾಗಿ ಆಗಬೇಕಿದೆ ಎಂಬ ಯೋಚನೆ ನನಗೆ ಬಂದಿತು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ'' ಎಂದು ಹೇಳಿದರು.
'ಈ ಕಾರ್ಯಕ್ಕಾಗಿ ಚಲನಚಿತ್ರ ಹಾಗೂ ಕ್ರೀಡಾ ರಂಗದ ಖ್ಯಾತನಾಮರನ್ನು ಸಂಪರ್ಕಿಸಿದಾಗ ಅವರೆಲ್ಲಾ ಕೂಡಲೆ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ, ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ ಕುರಿತಾಗಿ ಹಲವು ಉಪಯುಕ್ತ ಸಲಹೆಗಳನ್ನು ಕೂಡ ನೀಡಿದ್ದಾರೆ. ಇದಕ್ಕಾಗಿ ಸರ್ಕಾರದ ಪರವಾಗಿ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ'' ಎಂದು ಸಚಿವರು ಹೇಳಿದರು.
'ಕೊರೊನಾ ವೈರಾಣುವನ್ನು ಹಿಮ್ಮೆಟ್ಟಿಸುವ ಸಂಕಲ್ಪ ಮಾಡಲು ನಾಡಿನ ಜನತೆಗೆ ಈ ಸಾಧಕರ ಸಂದೇಶ ಉಪಯುಕ್ತವಾಗಲಿ ಎಂದು ಆಶಿಸುತ್ತೇನೆ. ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ನಾಗರಿಕರ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಕುರಿತಂತೆ ಕಲಾವಿದರು ಮನೋಜ್ಞ ಸಂದೇಶಗಳನ್ನು ನೀಡಿದ್ದಾರೆ. ಅದರಲ್ಲಿಯೂ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ನಾಗರಿಕರು, ವೈದ್ಯರು, ಆರೋಗ್ಯ ಕಾರ್ಯಕರ್ತರ ಬಗ್ಗೆ ಸರ್ಕಾರ ಹಾಗೂ ಸಮುದಾಯ ಕೃತಜ್ಞವಾಗಿದೆ ಎಂಬುದನ್ನು ಈ ದೃಶ್ಯರೂಪಕ ಅನಾವರಣಗೊಳಿಸಲಿದೆ' ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.
ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಯಶ್, ಸುಮಲತಾ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಯಡಿಯೂರಪ್ಪ ಸೇರಿದಂತೆ ಹಲವು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.