ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ: ಸಿದ್ದರಾಮಯ್ಯ ಆರೋಪಕ್ಕೆ ಕೊನೆಗೂ ಉತ್ತರಿಸಿದ ಸಿಎಂ
ಬೆಂಗಳೂರು, ಜುಲೈ 6: ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ, ಕೊವಿಡ್ಗೆ ಸಂಬಂಧಿಸಿದಂತೆ ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಸರ್ಕಾರ ಭ್ರಷ್ಟಚಾರ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ಯಡಿಯೂರಪ್ಪ ಕೊನೆಗೂ ಮಾತನಾಡಿದ್ದಾರೆ.
Recommended Video
ವೆಂಟಿಲೇಟರ್, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್, ಸೋಪ್, ಆಕ್ಸಿಜನ್ ಸಿಲಿಂಡರ್, ಪರೀಕ್ಷೆ ಗ್ಲೌಸ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಾಮಾಗ್ರಿಗಳನ್ನು ಖರೀದಿಯಲ್ಲಿ ಅಕ್ರಮ ನಡೆದಿದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚು ಹಣ ಕೊಟ್ಟು ಕೊಂಡುಕೊಳ್ಳಲಾಗಿದೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿದ್ದರು.
ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ''ವಿಪಕ್ಷ ನಾಯಕರಾಗಿ ಬನ್ನಿ ವಿಧಾನಸೌಧಕ್ಕೆ, ಲೆಕ್ಕ ಕೊಡ್ತಿವಿ'' ಎಂದಿದ್ದಾರೆ. ಮುಂದೆ ಓದಿ....
ಅಕ್ರಮ ಕಂಡು ಬಂದರೆ ಕ್ರಮ ಖಂಡಿತ
ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಸಿಎಂ ಯಡಿಯೂರಪ್ಪ ''ವಿರೋಧ ಪಕ್ಷದ ನಾಯಕರಾಗಿ ಬಂದು ಎಲ್ಲ ಅಂಕಿ ಅಂಶಗಳನ್ನು ಪರಿಶೀಲನೆ ಮಾಡಲಿ, ಅಧಿಕಾರಿಗಳು ಎಲ್ಲ ದಾಖಲೆಗಳು ಕೊಡ್ತಾರೆ. ಯಾವುದಾದರೂ ಲೋಪದೋಷಗಳು ಕಂಡರೆ ಸರಿ ಪಡಿಸಿಕೊಳ್ಳುತ್ತೇವೆ. ಅಕಸ್ಮಾತ್ ಲೋಪದೋಷ ಕಂಡರೆ ಅದು ಯಾರೇ ಆಗಿರಲಿ ಅಂತವರ ವಿರುದ್ಧ ತೀವ್ರವಾದ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದಿದ್ದಾರೆ.
ಸುಮ್ಮನೆ ಆರೋಪ ಮಾಡುವುದು ಬೇಡ
''ದಾಖಲೆಗಳಿಲ್ಲದ ಸಿದ್ದರಾಮಯ್ಯ ಅವರು ಟೀಕೆ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ವಿಪಕ್ಷ ನಾಯಕರಾಗಿ ಬಂದು ವಿಧಾನಸೌಧದಲ್ಲಿ ಕುಳಿತುಕೊಳ್ಳಿ, ಪರಿಶೀಲಿಸಿ ಸೂಕ್ತ ಸಲಹೆ ನೀಡಲಿ'' ಎಂದು ಸಿಎಂ ಕಾಂಗ್ರೆಸ್ ನಾಯಕನ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ದಾಖಲೆ ಬಿಡುಗಡೆ ಮಾಡಿದ್ರೆ ಜೈಲು?
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ಶ್ರೀರಾಮುಲು ''ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ'' ಎಂದು ಸಿದ್ದುಗೆ ಸವಾಲ್ ಹಾಕಿದ್ದರು. ಶ್ರೀರಾಮುಲು ಹೇಳಿಕೆಗೆ ಟ್ವಿಟ್ಟರ್ನಲ್ಲಿ ತಿರುಗೇಟು ನೀಡಿರುವ ವಿಪಕ್ಷ ನಾಯಕ ''ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ. ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ'' ಎಂದು ಟಾಂಗ್ ನೀಡಿದ್ದಾರೆ.
ಇಬ್ಬರು ಸಚಿವರಿಗೂ ಒಂದೇ ಉತ್ತರ
ಸಿದ್ದರಾಮಯ್ಯ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಮತ್ತು ಶ್ರೀರಾಮುಲು ಇಬ್ಬರು ಪ್ರತಿಕ್ರಿಯಿಸಿದ್ದರು. ಬಳಿಕ, ಇಬ್ಬರು ಸಚಿವರಿಗೂ ಸಿದ್ದರಾಮಯ್ಯ ಒಂದೇ ಉತ್ತರ ಎಂದಿದ್ದರು. ''ಕೊರೊನಾ ಚಿಕಿತ್ಸೆಯಲ್ಲಿನ ಅವ್ಯವಹಾರದ ಆರೋಪಕ್ಕೆ ಒಬ್ಬ ಸಚಿವರು ಜತೆಯಲ್ಲಿ ಪ್ರವಾಸಕ್ಕೆ ಕರೆದಿದ್ದಾರೆ, ಇನ್ನೊಬ್ಬರು ಆಸ್ಪತ್ರೆಯ ಹೊಣೆ ಹೊರಲು ಹೇಳಿದ್ದಾರೆ. ಇವರಿಬ್ಬರಿಗೂ ಒಂದೇ ಉತ್ತರ: ದಯವಿಟ್ಟು ರಾಜೀನಾಮೆ ನೀಡಿ, ನಾವು ಪ್ರವಾಸನೂ ಮಾಡ್ತೇವೆ, ಒಂದು ಆಸ್ಪತ್ರೆಯದ್ದಲ್ಲ, ಇಡೀ ರಾಜ್ಯದ ಹೊಣೆಯನ್ನೂ ಹೊರುತ್ತೇವೆ'' ಎಂದು ಸಿದ್ದರಾಮಯ್ಯ ಹೇಳಿದ್ದರು.
2,200 ಕೋಟಿ ಭ್ರಷ್ಟಾಚಾರ ಆಗಿದೆ
''ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಈವರೆಗೆ 3320 ಕೋಟಿ ರೂ. ಖರ್ಚು ಮಾಡಿದೆ. ಆದರೆ, 815 ಕೋಟಿಗೆ ಲೆಕ್ಕವೇ ಇಲ್ಲ. ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಹಣ ನೀಡಿ ಖರೀದಿ ಮಾಡಲಾಗಿದೆ. ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ 2,200 ಕೋಟಿ ಭ್ರಷ್ಟಾಚಾರ ಆಗಿದೆ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.