ಸರಳವಾಗಿ ಕರಗ ಆಚರಿಸಿ: ಸಿಎಂ ಯಡಿಯೂರಪ್ಪ ಸೂಚನೆ
ಬೆಂಗಳೂರು, ಏಪ್ರಿಲ್ 4: ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮನೆಯಲ್ಲೇ ಇರುವಂತೆ ಎಲ್ಲರಿಗೂ ಸೂಚಿಸಲಾಗಿದೆ.
ಈ ಮಧ್ಯೆ ಲಾಕ್ ಡೌನ್ ನಿಯಮವನ್ನೂ ಮುರಿಯದಂತೆ, ಸಂಪ್ರದಾಯಕ್ಕೂ ಧಕ್ಕೆ ಬಾರದಂತೆ ಬೆಂಗಳೂರು ಕರಗವನ್ನು ಸಾಂಕೇತಿಕವಾಗಿ ಆಚರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರು ಕರಗಕ್ಕೆ ಕೊರೊನಾ ಭೀತಿ ಇಲ್ಲ: ಮೇಯರ್
ಈ ಕುರಿತು ವಿಧಾನಸೌಧದಲ್ಲಿ ಇಂದು ಸಭೆ ನಡೆಯಿತು. ಸಚಿವ ವಿ.ಸೋಮಣ್ಣ, ಆರ್.ಅಶೋಕ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿಸೂರ್ಯ, ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮೇಯರ್ ಗೌತಮ್ ಕುಮಾರ್, ಮಾಜಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಶಾಸಕರು, ಎಂಎಲ್ಸಿಗಳು, ಪಾಲಿಕೆ ಸದ್ಯಸರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ''ಬೆಂಗಳೂರು ಕರಗ ಸಂಪ್ರದಾಯವನ್ನು ಮುರಿಯುವುದು ಬೇಡ. ನಾಲ್ಕೈದು ಜನ ಇದ್ದು ಸರಳವಾಗಿ ಕರಗವನ್ನು ಆಚರಿಸಿ'' ಎಂದು ಹೇಳಿದರು.