ಶಿವಮೊಗ್ಗದಲ್ಲಿ ಇನ್ನು 6 ತಿಂಗಳಲ್ಲಿ ವಿಮಾನ ಹಾರಾಟಕ್ಕೆ ಸಿಎಂ ಸೂಚನೆ
ಬೆಂಗಳೂರು, ಡಿಸೆಂಬರ್ 14: ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇಂದು ಮುಖ್ಯಮಂತ್ರಿಗಳು ಹಾಗೂ ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ವಿಮಾನ ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ವೇಗ ಹೆಚ್ಚಿಸಲು 4ಜಿ ಅನುಮತಿ ನೀಡಲು ಸಭೆಯಲ್ಲಿ ಸೂಚಿಸಲಾಯಿತು. ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಕಾಮಗಾರಿ ಮುಗಿಸುವಂತೆ ಸೂಚಿಸಲಾಯಿತು.
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ರೆಕ್ಕೆ ಕಟ್ಟಿದ ಸರ್ಕಾರ!
ರನ್ ವೇ ಒಂದು ಕಿಲೋಮೀಟರ್ ಹೆಚ್ಚಿಗೆ: ಈ ಹಿಂದೆ ರನ್ ವೇ ಅನ್ನು 1.2 ಕಿಲೋಮೀಟರ್ ನಿಗದಿಪಡಿಸಲಾಗಿತ್ತು. ಆದರೆ ಈಗ ಅದನ್ನು 2.1 ಕಿಲೋಮೀಟರ್ ಗೆ ಹೆಚ್ಚಿಸಲು ಅನುಮತಿ ನೀಡಲಾಯಿತು. ಈಗಾಗಲೇ ಕಾಮಗಾರಿಗೆ 40 ಕೋಟಿ ಹಣ ನೀಡಲಾಗಿದ್ದು, ತಕ್ಷಣವೇ ಕೆಲಸ ಆರಂಭಿಸಬೇಕು, ಹೆಚ್ಚಿನ ಹಣಕಾಸು ಬೇಕಿದ್ದಲ್ಲಿ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು.
ಪೇಪರ್ ವರ್ಕ್ ನಲ್ಲಿ ಕಾಮಗಾರಿ ಸಂಬಂಧಿಸಿದಂತೆ ವಿಳಂಬ ಕಂಡು ಬಂದಿದ್ದು, ಇನ್ನು ಒಂದು ವಾರದೊಳಗೆ ಎಲ್ಲ ರೀತಿಯ ಪೇಪರ್ ವರ್ಕ್ ಮುಗಿಸಿ ಕೆಲಸ ಆರಂಭಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. "ಇನ್ನು 6 ತಿಂಗಳ ಒಳಗೆ ಶಿವಮೊಗ್ಗದಲ್ಲಿ ವಿಮಾನಗಳು ಹಾರಾಡಬೇಕು. ಇಲ್ಲದಿದ್ದರೆ ಅದಕ್ಕೆ ನೀವೇ ಜವಾಬ್ದಾರರಾಗುತ್ತೀರ" ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ರೈಲ್ವೇ ಟರ್ಮಿನಲ್ ಗೆ ಸಂಬಂಧಿಸಿದಂತೆ ಕೋಟೆ ಗಂಗೂರಿನಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳು ಸೂಚಿಸಲಾಯಿತು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ; ಎರಡನೇ ರನ್ ವೇ ಆರಂಭ
ಸಿಂಗದೂರು ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಒಪ್ಪಿದ್ದು, ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ಲಿಯರೆನ್ಸ್ ತೆಗೆದುಕೊಳ್ಳಲು ಸೂಚಿಸಲಾಯಿತು. ಇವತ್ತು ಚರ್ಚೆ ನಡೆಸಿದ ಎಲ್ಲಾ ವಿಷಯಗಳನ್ನು ತ್ವರಿತವಾಗಿ ಜಾರಿಗೆ ತರಬೇಕು ಅಂತ ಅಂತಿಮವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.