ಸಿಎಂ 3ನೇ ಪ್ಯಾಕೇಜ್: ಮೆಕ್ಕೆಜೋಳ ಬೆಳೆಗಾರರಿಗೆ, ಆಶಾ ಕಾರ್ಯಕರ್ತೆರಿಗೆ ಬಂಪರ್
ಬೆಂಗಳೂರು, ಮೇ 15: ಕೊರೊನಾ ವೈರಸ್ ಲಾಕ್ಡೌನ್ನಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಸಿಎಂ ಯಡಿಯೂರಪ್ಪ ಮತ್ತೊಂದು ಪ್ಯಾಕೇಜ್ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ.
ಈಗಾಗಲೇ ಮೆಕ್ಕೆಜೋಳ ಬೆಳೆಗಾರರಿಗೆ ಕೆಎಂಎಫ್ ಮೂಲಕ ಮೆಕ್ಕೆ ಜೋಳ ಖರೀದಿಸಲು ಈಗಾಗಲೇ 4ಜಿ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರ 1760 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದೆ. ಆದರೆ ರೈತರಿಗೆ ಇಷ್ಟು ಬೆಲೆ ದೊರೆಯದ ಕಾರಣ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದಿರುವ ಸುಮಾರು 10 ಲಕ್ಷ ರೈತರಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುವುದು. ಇದಕ್ಕಾಗಿ 500 ಕೋಟಿಯನ್ನ ಸರ್ಕಾರ ಭರಿಸಲಿದೆ ಎಂದು ಸಿಎಂ ಹೇಳಿದ್ದಾರೆ.
ಹಾಸನ; ರೈತರಿಂದ ಆಲೂಗಡ್ಡೆ ಬಿತ್ತನೆ ಬೀಜ ಖರೀದಿ ಆರಂಭ
ಪ್ರತಿಯೊಬ್ಬ ರೈತರಿಗೂ ಅನೂಕೂಲವಾಗಬೇಕು. ನನ್ನಿಂದ ರೈತರಿಗೆ ಯಾವುದೇ ರೀತಿಯ ಸಮಸ್ಯೆಯಾಗಲ್ಲ. ನಾನು ರೈತರ ಪರ ಬಜೆಟ್ ಮಂಡಿಸಿದ್ದೆ, ಮುಂದಿನ ದಿನಗಳಲ್ಲಿ ರೈತರಿಗೆ ಮತ್ತಷ್ಟು ಪ್ಯಾಕೇಜ್ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಕೊವಿಡ್ ಹೋರಾಟದಲ್ಲಿ ಸಕ್ರಿಯರಾಗಿರುವ ಆಶಾ ಕಾರ್ಯಕರ್ತೆರಿಗೆ ಸರ್ಕಾರ ತಲಾ 3 ಸಾವಿರ ನೀಡಲಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. 42,500 ಆಶಾ ಕಾರ್ಯಕರ್ತೆರ ವಿಶೇಷ ಸೇವೆಯನ್ನು ಗುರುತಿಸಿ ತಲಾ 3 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಇದಕ್ಕೆ 12 ಕೋಟಿ ರೂ ವೆಚ್ಚವಾಗಲಿದೆ. ಈ ಮೊತ್ತವನ್ನು ಸಹಕಾರ ಸಂಘ ಸಂಸ್ಥೆಗಳಿಂದ ಕ್ರೂಡೀಕರಿಸಿ ಸಹಕಾರ ಇಲಾಖೆಯ ವತಿಯಿಂದ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನೈಸರ್ಗಿಕ ವಿಕೋಪದಿಂದ ಮೇಕೆ, ಕುರಿಗಳ ಸಾವು ಸಂಭವಿಸಿದಲ್ಲಿ ಅವುಗಳಿಗೆ 5 ಸಾವಿರ ರೂ. ಪರಿಹಾರ ನೀಡುವ ಯೋಜನೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.