ವೇದಿಕೆಯಲ್ಲಿ 3 ಡಿಸಿಎಂಗಳಿದ್ದರೂ ಒಬ್ಬರ ಹೆಸರು ಮಾತ್ರ ಉಲ್ಲೇಖಿಸಿದ ಸಿಎಂ
ಬೆಂಗಳೂರು, ಆಗಸ್ಟ್ 27: ನಳಿನ್ ಕುಮಾರ್ ಕಟೀಲ್ ಪದಗ್ರಹಣ ವೇದಿಕೆಯಲ್ಲಿ ಮೂರು ಉಪಮುಖ್ಯಮಂತ್ರಿಗಳಿದ್ದರೂ ಕೂಡ ಸಿಎಂ ಯಡಿಯೂರಪ್ಪ ಕೇವಲ ಒಬ್ಬರ ಹೆಸರನ್ನು ಮಾತ್ರ ಉದ್ಘರಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡುವಾಗ ವೇದಿಕೆಯಲ್ಲಿ ಉಪಮುಖ್ಯಮಂತ್ರಿಗಳಾದ ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ ಮೂವರು ಇದ್ದರೂ ಕೂಡ ಕೇವಲ ಗೋವಿಂದಕಾರಜೋಳ ಹೆಸರು ಮಾತ್ರ ಪ್ರಸ್ತಾಪಿಸಿದ್ದು ಹಲವು ಗೊಂದಲಗಳಿಗೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಪದಗ್ರಹಣ: ಗೈರಾದ ಪ್ರಮುಖ ನಾಯಕರು
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ,ಅದನ್ನು ನಿರ್ವಹಿಸುತ್ತೇನೆ.ಯಾರಿಗೂ ಅಸಮಾಧಾನ ಇಲ್ಲ,ಮಂತ್ರಿಯಾಗಬೇಕು, ಉಪಮುಖ್ಯಮಂತ್ರಿಯಾಗಬೇಕು ಎಂದು ಎಲ್ಲರಿಗೂ ಆಸೆ ಇರುವುದು ಸಹಜ.ಎಲ್ಲರೂ ನನ್ನ ಸ್ನೇಹಿತರೇ ತಾನೇ,ಅವರೆಲ್ಲರ ಸಹಕಾರ ಪಡೆದುಕೊಂಡೇ ಪಕ್ಷ ಮತ್ತು ಸರ್ಕಾರದ ಕೆಲಸ ಮಾಡುತ್ತೇನೆ.ಎಲ್ಲ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ.
ಮುನಿಸು ಮುಂದುವರೆಸಿದ ಆರ್ ಅಶೋಕ್
ಜಯನಗರದಿಂದ ಸಿಎಂ ಜೊತೆಯಲ್ಲಿ ಬಂದು ಕಾಡು ಮಲ್ಲೇಶ್ವರ ದೇವಸ್ಥಾನದಲ್ಲೇ ನಳೀನ್ ಕುಮಾರ್ ಕಟೀಲ್ ರನ್ನು ಆರ್ ಅಶೋಕ್ ಅಭಿನಂದನೆ ಸಲ್ಲಿಸಿದ್ದಾರೆ. 100 ಮೀಟರ್ ದೂರದಲ್ಲಿ ಇದ್ದರೂ ಪದಗ್ರಹಣ ವೇದಿಕೆಯಿಂದ ಅಶೋಕ್ ದೂರಉಳಿದಿದ್ದರು.
ಕಾಂಗ್ರೆಸ್ ನವರು ತಬ್ಬಲಿಗಳಂತೆ ಅಲೆದಾಡುತ್ತಿದ್ದಾರೆ
ಬಿಜೆಪಿ ಅಧಿಕಾರದಲ್ಲಿರುವ ಸಮಯದಲ್ಲಿ ಕಟೀಲ್ ಅಧ್ಯಕ್ಷರಾಗಿದ್ದಾರೆ, ಕಾಂಗ್ರೆಸ್ ನವರು ತಬ್ಬಲಿಗಳಂತೆ ಅಲೆದಾಡುತ್ತಿದ್ದಾರೆ.ಕೇಂದ್ರದಲ್ಲಿ ಪ್ರತಿಪಕ್ಷ ನಾಯಕನಿರಲಿ, ಇಡೀ ರಾಷ್ಟ್ರದಲ್ಲಿ ನಾಯಕತ್ವವೇ ಇಲ್ಲದಂತಾಗಿ ಕಾಂಗ್ರೆಸ್ಸಿಗರು ತಬ್ಬಲಿಗಳಂತಾಡುತ್ತಿದ್ದಾರೆ.ಕಾಂಗ್ರೆಸ್ ಮುಕ್ತ ಭಾರತ ಕನಸು ಬಹುತೇಕ ಈಡೇರಿದೆ ಎಂದು ಯಡಿಯೂರಪ್ಪ ಹೇಳಿದರು.
ಪದಗ್ರಹಣ ಕಾರ್ಯಕ್ರಮ ಪ್ರವಾಹ ವಿಷಯಕ್ಕೆ ಮೀಸಲಿಟ್ಟ ಸಿಎಂ
ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಅಮಿತ್ ಷಾ ಹಾಗೂ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ.ಕೇಂದ್ರದ ಅಧಿಕಾರಿಗಳ ತಂಡವೂ ಸಹ ಪರಿಸ್ಥಿತಿ ಪರಿಶೀಲನೆ ಮಾಡುತ್ತಿದೆ.ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಬಹು ದೊಡ್ಡ ಅನುದಾನ ಬರುವ ನಿರೀಕ್ಷೆ ಇದೆ.ಸಾರ್ವಜನಿಕರು, ಕೈಗಾರಿಕೋದ್ಯಮಿಗಳು, ಸರ್ಕಾರಿ ನೌಕರರು ದೊಡ್ಡ ಮಟ್ಟದಲ್ಲಿ ಹಣಕಾಸು ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಸಂತ್ರಸ್ತರ ಪುನರ್ವಸತಿ ದೊಡ್ಡ ಸವಾಲು
ಸಂತ್ರಸ್ತರ ಪುನರ್ವಸತಿ ನಮಗೆ ದೊಡ್ಡ ಸವಾಲಾಗಿದೆ.ಇಂದು ಚಿಕ್ಕಮಗಳೂರಿಗೆ ತೆರಳಿ ಅತಿವೃಷ್ಟಿ ಹಾನಿ ಪರಿಶೀಲನೆ ಮಾಡುತ್ತೇನೆ.ನಾಳೆ ನಾಡಿದ್ದು ಮತ್ತಷ್ಟು ಪ್ರದೇಶಗಳಿಗೆ ತೆರಳುತ್ತೇನೆ.ಸಂತ್ರಸ್ತರಿಗೆ ನೆರವು ನೀಡಬೇಕಾದುದು ನಮ್ಮ ಕರ್ತವ್ಯ.ಸಿಎಂ ಆಗಿ ಒಂದು ತಿಂಗಳು ಆಗಿದೆ.ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ ಎಂದರು.
ಎಚ್ಚರಿಕೆಯಿಂದ ಜವಾಬ್ದಾರಿ ನೀಭಾಯಿಸುತ್ತೇನೆ ಎಂದ ಕಟೀಲ್
ಭಯವೂ ಇದೆ, ಆತ್ಮ ವಿಶ್ವಾಸವೂ ಇದೆ, ಎಚ್ಚರಿಕೆಯಿಂದ ಈ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ಯಡಿಯೂರಪ್ಪ ರಂತಹ ನಾಯಕರ ಆಶೀರ್ವಾದ ನನ್ನ ಮೇಲಿದೆ,ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ರಂಥವರ ಪರಿಶ್ರಮದಿಂದ ಪಕ್ಷ ಬೆಳೆದುಬಂದಿದೆ. ಯಡಿಯೂರಪ್ಪ ಜಿಲ್ಲೆ ಜಿಲ್ಲೆಗೂ ಓಡಾಡಿ ಪ್ರವಾಹ ಸಂತ್ರಸ್ತರ ಕಷ್ಟ ಆಲಿಸ್ತಿದ್ದಾರೆ.ಯಡಿಯೂರಪ್ಪ ಜೊತೆ ಪಕ್ಷ, ಕಾರ್ಯಕರ್ತರು ಇದ್ದಾರೆ ಎಂದರು. ಶಿವಾಜಿ ಮಹಾರಾಜರಿಗೆ ಪ್ರೇರಣೆ ಕೊಟ್ಟ, ವಿವೇಕಾನಂದರು ನಡೆದಾಡಿದ ಪುಣ್ಯಭೂಮಿ,ಕಾಡು ಮಲ್ಲೇಶ್ವರನ ಸನ್ನಿಧಿಯಲ್ಲಿ ಪದಗ್ರಹಣ ಮಾಡಿದ ನಾನೇ ಧನ್ಯ,ನಾನು ವಿದ್ವಾಂಸನಲ್ಲ, ಜ್ಞಾನಿಯಲ್ಲ, ಆದರೆ ಸಂಘದ ಶಾಖೆಯಲ್ಲಿ ಆಡುತ್ತಾ ಬೆಳೆದವನು ಎಂದರು.