ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದು ಹಾಸ್ಯದ ಹೊನಲು
ಬೆಂಗಳೂರು, ಮಾ 19: ಸ್ಪೂರ್ತಿದಾಯಕ ಭಾಷಣ, ಪ್ರತಿಭಾ ಪ್ರದರ್ಶನ ಮಾಡುವ ಕಾರ್ಯಕ್ರಮಗಳ ನಡುನಡುವೆ ಉತ್ತೇಜಿತಗೊಂಡ ಸಭಿಕರು ಚಪ್ಪಾಳೆಯ ಮೂಲಕ ತಮ್ಮ ಸಂತಸವನ್ನು ಸೂಚಿಸುವುದು ಸಾಮಾನ್ಯ. ಆದರೆ, ಕಾರ್ಯಕ್ರಮ ಡಲ್ ಹೊಡೆಯುತ್ತಿದ್ದರೆ 'ಚಪ್ಪಾಳೆ ಪ್ಲೀಸ್' ಎಂದು ಸ್ವತಃ ಭಾಷಣಕಾರರೇ ಕೇಳಿ ಪ್ರಶಂಸೆಗಳನ್ನು ಗಿಟ್ಟಿಸಿಕೊಳ್ಳುವ ಪ್ರಮೇಯಗಳೂ ಉಂಟು.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಏನಾಯಿತೆಂದರೆ, ಚನ್ನಪಟ್ಟಣದ ಹಾಲಿ ಶಾಸಕ ಸಿ ಪಿ ಯೋಗೀಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ್ಯಕ್ರಮವಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗೀಶ್ವರ್ ಅವರನ್ನು ಸ್ವಾಗತಿಸಲು ವೇದಿಕೆಯಲ್ಲಿ ಆಸೀನರಾಗಿದ್ದರು.
ಯೋಗಿಶ್ವರ್ ಜೊತೆ ಇಂಧನ ಸಚಿವ ಡಿ ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡಾ ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಯೋಗೀಶ್ವರ್ ಅವರನ್ನು ಮತ್ತೆ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇನೆ ಎಂದು ಭಾಷಣ ಆರಂಭಿಸಿದರು. ಆ ಸಂದರ್ಭದಲ್ಲಿ ಭರ್ಜರಿ ಚಪ್ಪಾಳೆ ನಿರೀಕ್ಷಿಸಿದ್ದ ಮುಖ್ಯಮಂತ್ರಿಗಳಿಗೆ ನಿರಾಶೆಯಾಯಿತು. (ಮತ್ತೆ ಕಾಂಗ್ರೆಸ್ ಸೇರಿದ ಯೋಗೀಶ್ವರ್)
ಭಾಷಣ ಮುಂದುವರೆಸಿದ ಸಿದ್ದರಾಮಯ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಗೆಲ್ಲಬೇಕಾದರೆ ಯೋಗೀಶ್ವರ್ ಸಹಕಾರ ಅತ್ಯವಶ್ಯಕ. ಯೋಗೀಶ್ವರ್ ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ 'ಮತ್ತೆ' ಪಕ್ಷಕ್ಕೆ ಸೇರಿದ್ದು ಕಾಂಗ್ರೆಸ್ಸಿಗೆ ಇನ್ನೂ ಹೆಚ್ಚಿನ ಶಕ್ತಿ ಬಂತಂತಾಗಿದೆ ಎಂದರು. ಆಗಲೂ no ಚಪ್ಪಾಳೆ. ಈ ಕ್ಷೇತ್ರದಿಂದ ಡಿ ಕೆ ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ತುಳಸಿ ಮುನಿರಾಜು ಅಭ್ಯರ್ಥಿ. ಜೆಡಿಎಸ್ ವತಿಯಿಂದ ಪ್ರಭಾಕರ ರೆಡ್ಡಿ ಕಣಕ್ಕೆ ಧುಮುಕುವ ನಿರೀಕ್ಷೆಯಿದೆ.
ಮತ್ತೆ ಮಾತು ಮುಂದುವರಿಸಿದ ಸಿಎಂ, ಹತ್ತು ತಿಂಗಳ ಅವಧಿಯಲ್ಲಿ ನಾವು ಮಾಡಿದ ಜನಪರ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಕನಿಷ್ಠ ಇಪ್ಪತ್ತು ಸ್ಥಾನವನ್ನು ಗೆಲ್ಲಲಿದ್ದೇವೆ ಎಂದು ಘಂಟಾಘೋಷವಾಗಿ ಘೋಷಿಸಿದರು. ಆಗಲೂ ಚಪ್ಪಾಳೆ ಬರದಿದ್ದಾಗ ಸಿಎಂ ಈಸ್ full upset.
ಅಲ್ರಪ್ಪಾ, ಏನು ಮಾತಾಡಿದರೂ ಚಪ್ಪಾಳೆ ಹೊಡೆಯೋಲ್ಲಾಂತೀರಲ್ಲಾ why? ಚಪ್ಪಾಳೆ ಹೋಡೀರಪ್ಪಾ ಎಂದಾಗ ನೆರೆದಿದ್ದ ಕಾರ್ಯಕರ್ತರು ಗುಸುಗುಸು ಮಾತಾಡಿಕೊಳ್ಳುತ್ತಾ ಚಪ್ಪಾಳೆಯ ಕರತಾಡನ ಮಾಡಿದರು.
ಗಂಟಲು ಸವೆದು ಮಾತಾಡಿದರೂ, ಚಪ್ಪಾಳೆ ಯಾಕ್ ಬಂದಿರಲಿಲ್ಲಾ ಎಂದು ಸಿದ್ದರಾಮಯ್ಯ ಪರೀಕ್ಷೆ ಮಾಡಿದಾಗ ಅವರಿಗೆ ಕಂಡುಬಂದ ಸತ್ಯವೆಂದರೆ ಕಾರ್ಯಕ್ರಮಕ್ಕೆ ಬಂದವರಿಗೆ ಸಚಿವ ಡಿ ಕೆ ಶಿವಕುಮಾರ್ ನೀಡಿದ್ದ strict instruction. ಆ instruction ಏನಂದರೆ ಕಾರ್ಯಕ್ರಮದಲ್ಲಿ ಗಲಾಟೆ ಮಾಡದೇ ಸುಮ್ಮನಿರಬೇಕು ಎನ್ನುವುದು.
ಕೊನೆಗೂ, ಚಪ್ಪಾಳೆ ರಹಸ್ಯವನ್ನು ಭೇದಿಸಿದ ಸಿದ್ದರಾಮಯ್ಯ, ಅಲ್ರಯ್ಯಾ ಕಾರ್ಯಕ್ರಮದಲ್ಲಿ ಗಲಾಟೆ ಮಾಡದೇ ಸುಮ್ಮನಿರಿ ಎಂದು ಶಿವಕುಮಾರ್ ನಿಮಗೆ ಹೇಳಿರಬಹುದು. ಅದಕ್ಕೆ ಚಪ್ಪಾಳೆ ಹೊಡೆಯದೇ ಸುಮ್ಮನಿದ್ದರೆ ಹೇಗೆ? ಎಲ್ಲಾ ಸೂಚನೆಗಳನ್ನು ನೂರಕ್ಕೆ ನೂರರಷ್ಟು ಪಾಲಿಸಬಾರದು ಕಣ್ರಪ್ಪಾ... ಎಂದು ಡಿಕೆಶಿ ಚಪ್ಪಾಳೆ ರಹಸ್ಯ ಭೇದಿಸಿ ಪ್ರಸಂಗಕ್ಕೆ ಮಂಗಳ ಹಾಡಿದರು ಸಿಎಂ.