ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಬಂಗಲೆ ನಿರ್ಮಾಣ!
ಬೆಂಗಳೂರು, ನ.03: ತಾಜ್ ವೆಸ್ಟ್ ಎಂಡ್ ಹೋಟೆಲ್ ಪಕ್ಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿ ಹೊಸ ಬಂಗಲೆ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ಆದರೆ, ಈ ಯೋಜನೆ ಇನ್ನು ಚರ್ಚೆಯ ಹಂತದಲ್ಲಿದೆ ಎಂದಿದ್ದಾರೆ.
ಸಚಿವರ ನಾಲ್ಕು ವಸತಿಗೃಹಗಳ ಜಾಗದಲ್ಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಮತ್ತು ಗೃಹ ಕಚೇರಿ ನಿರ್ಮಾಣ ಮಾಡುವ ಉದ್ದೇಶ ಇದೆ ಎಂದು ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
'ಸಿಐಡಿ ಕಚೇರಿ ಇರುವ ಕಾರ್ಲಟನ್ ಹೌಸ್ ಪಾರಂಪರಿಕ ಕಟ್ಟಡದ ಬಳಿ ಸಿಎಂಗಾಗಿ ಮನೆ ನಿರ್ಮಾಣದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ, ಪಾರಂಪರಿಕ ಕಟ್ಟಡದ ಬಳಿ ಮನೆ ನಿರ್ಮಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬರಲಾಗಿದೆ' ಎಂದು ಸಚಿವರು ತಿಳಿಸಿದರು.
ಎಲ್ಲಾ ಜನಪ್ರತಿನಿಧಿಗಳಿಗೂ ಮನೆ: 33 ಸಚಿವರು, ವಿಧಾನಸಭಾಧ್ಯಕ್ಷರು, ಸಭಾಪತಿ ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರಿಗೆ ವಸತಿ ಗೃಹಗಳನ್ನು ನಿರ್ಮಿಸುವ ಉದ್ದೇಶ ಇದೆ. ಎಷ್ಟು ಸಚಿವರಿಗೆ ಮನೆಗಳ ಕೊರತೆ ಇದೆ ಎಂಬುದನ್ನು ಪರಿಶೀಲಿಸಿ, ನಂತರ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೂ ಜಾಗ ಹುಡುಕುತ್ತಿದ್ದೇವೆ' ಎಂದು ಮಹದೇವಪ್ಪ ಹೇಳಿದರು.
ನಗರದ ಆನಂದರಾವ್ ವೃತ್ತದ ಸಮೀಪ ಇರುವ 7 ಎಕರೆ ಜಾಗದಲ್ಲಿ ದೆಹಲಿಯ ವಿಜ್ಞಾನ ಭವನದ ಮಾದರಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳಿಗೆ ಕಟ್ಟಡ ನಿರ್ಮಿಸಲಾಗುವುದು. ಸಭಾಂಗಣ ನಿರ್ಮಿಸುವ ಉದ್ದೇಶವೂ ಇದೆ. ಇದಕ್ಕೆ 150 ಕೋಟಿ ರು ವೆಚ್ಚವಾಗುವ ಸಾಧ್ಯತೆ ಇದೆ ಎಂದರು. (ಒನ್ ಇಂಡಿಯಾ ಸುದ್ದಿ)