ನಮ್ಮ ನೆಲದಿಂದ ಭಯೋತ್ಪಾದನೆ ತೊಲಗಿಸಬೇಕು ಎಂದ ಸಿಎಂಗೆ ಟ್ವಿಟ್ಟಿಗರು ಏನಂದ್ರು?
ಬೆಂಗಳೂರು, ಜೂನ್ 13: ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಹೇಯ ಕೃತ್ಯ ನಡೆದು ಹೋಗಿದೆ, ಭಯೋತ್ಪಾದನೆಯನ್ನು ನಮ್ಮ ನೆಲದಿಂದ ಕಿತ್ತೊಗೆಯಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅನಂತನಾಗ್ ಜಿಲ್ಲೆಯ ಕೆ.ಪಿ. ರೋಡ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಿಆರ್ಪಿಎಫ್ನ ಐವರು ಯೋಧರು ಹುತಾತ್ಮರಾಗಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಅವರು, ಭಯೋತ್ಪಾದನೆಯನ್ನು ಬೇರು ಸಮೇತವಾಗಿ ದೇಶದಿಂದ ದೂರ ಮಾಡಬೇಕು ಎಂದಿದ್ದಾರೆ.
ಅನಂತ್ ನಾಗ್ ನಲ್ಲಿ ಉಗ್ರರ ದಾಳಿಗೆ 5 ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮ
ಮೋಟರ್ಸೈಕಲ್ನಲ್ಲಿ ಆಗಮಿಸಿದ ಇಬ್ಬರು ಉಗ್ರರು ಗಸ್ತು ತಿರುಗುವ ಕರ್ತವ್ಯದಲ್ಲಿ ನಿರತರಾಗಿದ್ದ ಯೋಧರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಜತೆಗೆ ಗ್ರೆನೇಡ್ಗಳನ್ನೂ ಎಸೆದು ಪರಾರಿಯಾಗಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ.
ಅನಂತನಾಗ್ ಠಾಣೆಯ ಠಾಣಾಧಿಕಾರಿ ಅರ್ಶದ್ ಅಹ್ಮದ್ ಗಾಯಗೊಂಡವರಲ್ಲಿ ಸೇರಿದ್ದಾರೆ.ಈ ಸಂದರ್ಭ ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರ ಪೈಕಿ ಒಬ್ಬನನ್ನು ಕೊಂದು ಹಾಕಲಾಗಿದೆ. ಇನ್ನೊಬ್ಬ ಉಗ್ರ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಟ್ವಿಟ್ಟಿಗರು ಕುಮಾರಸ್ವಾಮಿ ಅವರ ಟ್ವೀಟ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮೊದಲು ಬಿಬಿಎಂಪಿಗೆ ಬೆಂಗಳೂರಿನಲ್ಲಿ ಕಸವನ್ನು ಕಿತ್ತೊಗೆಯಲು ಹೇಳಿ ಎಂದು ಕೆಲವರು ಹೇಳಿದ್ದರೆ, ಈಗಲೇ ನೀವು ಎಚ್ಚರಿಕೆವಹಿಸದಿದ್ದರೆ ಮುಂದೊಂದು ದಿನ ಬೆಂಗಳೂರು ಅಕ್ರಮ ವಲಸಿಗರ ನಗರವಾಗಿ ಪರಿವರ್ತನೆಗೊಳ್ಳುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೇಗೂರಿನಲ್ಲಿ 4 ಸಾವಿರಕ್ಕೂ ಹೆಚ್ಚು ಬಾಂಗ್ಲರು ನೆಲೆಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.