ಶಾಸಕ ರೇಣುಕಾಚಾರ್ಯ ಅವರಿಗೂ ಶುರುವಾಯ್ತು ಕೋವಿಡ್19 ಆತಂಕ
ಬೆಂಗಳೂರು, ಜು. 08: ರಾಜ್ಯದ ಅನೇಕ ರಾಜಕಾರಣಿಗಳನ್ನು ಈಗಾಗಲೇ ಕೊರೊನಾ ವೈರಸ್ ಕಾಡುತ್ತಿದೆ. ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಕೊರೊನಾ ವೈರಸ್ ಆತಂಕ ಶುರುವಾಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ವಿಧಾನಸೌಧದ ಆಪ್ತ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಾಲು ನೋವಿನ ಚಿಕಿತ್ಸೆಗಾಗಿ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಪೋರ್ಟೀಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ ಎಂದು ರೇಣುಕಾಚಾರ್ಯ ಅವರೇ ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಕಚೇರಿ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಇಂದಿನಿಂದ ಶುಕ್ರವಾರ ಸಂಜೆಯವರೆಗೆ ಸರ್ಕಾರಿ ಗೃಹ ಕಚೇರಿಯಲ್ಲಿ ನಾನು ಕಾರ್ಯನಿರ್ವಹಿಸುತ್ತೇನೆ. ಸಾರ್ವಜನಿಕರು ಹಾಗೂ ನನ್ನ ಹಿತೈಷಿಗಳು ನೇರವಾಗಿ ಬಂದು ಭೇಟಿಯಾಗದೆ, ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ರಾಜ್ಯಾದ್ಯಂತ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕೆಲವು ಶಾಸಕರು, ಸಂಸದರು ಹಾಗೂ ಎಂಎಲ್ಸಿಗಳಿಗೂ ಕೋವಿಡ್ ಸೋಂಕು ದೃಢಪಟ್ಟಿರುವುದು ಆತಂಕ ಸೃಷ್ಟಿಸಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಮಾವಳಿಗಳನ್ನು ಪಾಲಿಸಬೇಕೆಂದು ಶಾಸಕ ರೇಣುಕಾಚಾರ್ಯ ಮನವಿ ಮಾಡಿಕೊಂಡಿದ್ದಾರೆ.