ಸಂಪುಟ ವಿಸ್ತರಣೆ; ಯಾರಾಗಲಿದ್ದಾರೆ ಬೆಂಗಳೂರು ನಗರಾಭಿವೃದ್ದಿ ಸಚಿವ?
ಬೆಂಗಳೂರು, ಫೆಬ್ರವರಿ 8: ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ನೂತನ ಸಚಿವರು ತಮಗೆ ಬೇಕಾಗಿರುವ ಖಾತೆಗಳನ್ನು ಪಡೆದುಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಬೆಂಗಳೂರಿನಿಂದ ಸಚಿವರಾದವರು ಬಹು ಬೇಡಿಕೆಯ "ಬೆಂಗಳೂರು ನಗರಾಭಿವೃದ್ದಿ' ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಇದರಲ್ಲಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ ಸೋಮಣ್ಣ, ಯಶವಂತರಪುರ ಶಾಸಕ ಎಸ್ ಟಿ ಸೋಮಶೇಖರ್, ಕೆ ಆರ್ ಪುರ ಶಾಸಕ ಬಿ ಎ ಬಸವರಾಜ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಬೆಂಗಳೂರು ನಗರಾಭಿವೃದ್ದಿ ಖಾತೆ ಸಿಎಂ ಬಳಿ ಇದೆ.
ಟಿಕ್ಟಾಕ್ಗೆ ಬೆಂಗಳೂರು ನಗರ ಪೊಲೀಸರ ಸೇರ್ಪಡೆ
ಈ ಕುರಿತು ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್, "ಇಂತದೇ ಖಾತೆ ಬೇಕು ಎಂದು ಯಾರೂ ಸಿಎಂ ಬಳಿ ಹಠ ಹಿಡದಿಲ್ಲ. ಅವರವರ ಅರ್ಹತೆಗೆ ತಕ್ಕಂತೆ ಸಿಎಂ ಖಾತೆ ಹಂಚಿಕೆ ಮಾಡುತ್ತಾರೆ. ಬೆಂಗಳೂರಿಂದ ಮಂತ್ರಿಗಳಾಗಿರುವವರು ಸಹಜವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಲು ಅಪೇಕ್ಷೆ ವ್ಯಕ್ತಪಡಿಸಿರಬಹುದು. ಈ ಕುರಿತು ಸಿಎಂ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ' ಎಂದು ಹೇಳಿದ್ದಾರೆ.
ನೂತನ ಸಚಿವರಿಗೆ ಖಾತೆ ಹಂಚಿಕೆ ಆಗುವುದರ ಜೊತೆ ಒಟ್ಟಾರೆ ಸಚಿವ ಸಂಪುಟ ಪುನಾರಚನೆ ಆಗಲಿದ್ದು, ಸಚಿವ ಆರ್ ಅಶೋಕ ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಹಿಡಿತ ತೆಗೆದುಕೊಳ್ಳಬಹುದು ಎಂಬ ಯೋಚನೆ ಕೂಡ ಇದರಲ್ಲಿ ಸೇರಿದೆ ಎನ್ನಲಾಗಿದೆ.