ರಾಜ್ಯದ ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆಯಿರಿ: ಸಂಸದರಿಗೆ ಸಿಎಂ ಮನವಿ
ಬೆಂಗಳೂರು, ಡಿಸೆಂಬರ್ 04: ರಾಜ್ಯದ ಹಿತಕ್ಕಾಗಿ ಕೇಂದ್ರದ ಮೇಲೆ ರಾಜ್ಯದಿಂದ ಆಯ್ಕೆ ಆಗಿರುವ ಸಂಸದರು ಒತ್ತಡ ಹೇರಬೇಕು ಎಂದು ಕುಮಾರಸ್ವಾಮಿ ಅವರು ರಾಜ್ಯದ ಸಂಸದರಲ್ಲಿ ಮನವಿ ಮಾಡಿದರು.
ಸಿಎಂ ನೇತೃತ್ವದಲ್ಲಿ ಇಂದು ಕರೆಯಲಾಗಿದ್ದ ರಾಜ್ಯದಿಂದ ಆಯ್ಕೆಯಾದ ಸಂಸದರ ಸಭೆಯಲ್ಲಿ ಅವರು ಮಾತನಾಡಿದರು.
"ರಾಜ್ಯದ ನೆಲ, ಜಲ, ಅಭಿವೃದ್ಧಿ, ಕೈಗಾರಿಕೆ, ಕೃಷಿ, ವೈಮಾನಿಕ, ರಕ್ಷಣಾ ಇಲಾಖೆ ಸೇರಿದಂತೆ ಒಟ್ಟು 15 ಇಲಾಖೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಪರಿಶೀಲನಾ ಹಂತದಲ್ಲಿದೆ. ಕಳೆದ 6 ತಿಂಗಳಲ್ಲಿ ನಾನೂ ಸೇರಿದಂತೆ ಸಂಬಂಧಪಟ್ಟ ಸಚಿವರು ಅನೇಕ ಸಭೆ ನಡೆಸಿ ಪ್ರಸ್ತಾವನೆಗಳ ಬಗ್ಗೆ ಕ್ರಮವಹಿಸಲು ಸಹಕರಿಸಬೇಕು" ಎಂದು ಕೋರಿದರು.
ಜೆಡಿಎಸ್ ಶಾಸಕಾಂಗ ಸಭೆ: ಆಪರೇಷನ್ ಕಮಲ ಪ್ರಮುಖ ಚರ್ಚೆ ವಿಷಯ
ಕೇಂದ್ರ ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ರಕ್ಷಣಾ ಸಚಿವರು ರಾಜ್ಯದ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ , ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ. ಅವರನ್ನು ಈ ಸಭೆಯ ಮೂಲಕ ಅಭಿನಂದಿಸುತ್ತೇನೆ, ಸ್ಥಳೀಯ ರಕ್ಷಣಾ ಇಲಾಖೆ ಅಧಿಕಾರಿಗಳು ಕ್ರಮವಹಿಸದೇ ಇರುವುದರಿಂದ ಕೆಲಸಗಳು ವಿಳಂವಾಗಿದೆ. ಈ ಎಲ್ಲಾ ಯೋಜನೆಗಳ ಬಗ್ಗೆ ಕೇಂದ್ರದ ಗಮನ ಸೆಳೆದು ಸಂಸದರು ಸಹಕರಿಸಬೇಕು ಎಂದರು.
ಕೇಂದ್ರದಿಂದ ಅಲ್ಪ ಪರಿಹಾರ ಮೊತ್ತ
ಕೇಂದ್ರ ನೈಸರ್ಗಿಕ ವಿಕೋಪ ಪರಿಹಾರ ನಿಯಮಾವಳಿಗಳು ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗಿರುವುದಿಲ್ಲ. ಅತ್ಯಲ್ಪ ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಈ ನಿಯಮಾವಳಿಗಳನ್ನು ಬದಲಿಸಿ ಹೆಚ್ಚು ಪರಿಹಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ತರಬೇಕು. ಹಾಗೂ ನರೇಗಾ ಯೋಜನೆಯಲ್ಲಿ ರಾಜ್ಯ ಸರ್ಕಾರ ವೆಚ್ಚ ಮಾಡಿರುವ 964 ಕೋಟಿ ರೂ. ಗಳನ್ನು ಮರುಪಾವತಿಸಲು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಈ ಬಾರಿ ಹಂಪಿ ಉತ್ಸವ ಸರಳವಾಗಿ ಆಚರಣೆ: ಎಚ್ಡಿ ಕುಮಾರಸ್ವಾಮಿ
ಮನವಿಗೆ ಸ್ಪಂದಿಸಿದ ಸಂಸದರು
ಮುಖ್ಯ ಮಂತ್ರಿಗಳ ಮನವಿಗೆ ಪ್ರತಿಕ್ರಿಯಿಸಿದ ಹಲವು ಸಂಸದರು, ಬಾಕಿ ಉಳಿದಿರುವ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಚಿವರುಗಳು, ಅಗತ್ಯ ಮಾಹಿತಿಯೊಂದಿಗೆ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಆಗಮಿಸುವುದು ಸೂಕ್ತ. ಕೇಂದ್ರದ ಸಚಿವರನ್ನು ಸಂಸದರ ನಿಯೋಗದೊಂದಿಗೆ ಭೇಟಿ ಮಾಡಿದಲ್ಲಿ ಪ್ರಸ್ತಾವನೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆ. ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಕೇಳಲು ಅಗತ್ಯ ಮಾಹಿತಿಯನ್ನು ನೀಡಬೇಕೆಂದು ಮನವಿ ಮಾಡಿದರು.
ಕುಮಾರಸ್ವಾಮಿ ನೇತೃತ್ವದ ಸಂಸದರ ಸಭೆಗೆ ಹಲವು ಪ್ರಮುಖರು ಗೈರು
ಪ್ರಶ್ನೆ ಕೇಳಲು ಸಂಸದರಿಗೆ ಮಾಹಿತಿ ನೀಡಿಕೆ
ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಕೇಳಬಹುದಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಎಲ್ಲಾ ಸಂಸದರಿಗೆ ಕಳುಹಿಸಿಕೊಡಲು ಮುಖ್ಯ ಮಂತ್ರಿಗಳು ದೆಹಲಿಯ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ತೊಗರಿ, ಹೆಸರುಕಾಳು, ಕಬ್ಬು, ಭತ್ತ, ಈರುಳ್ಳಿ, ಟೋಮ್ಯಾಟೋ, ತೆಂಗು ಮುಂತಾದ, ಬೆಳೆ ಗಳಿಗೆ ರೈತರಿಗೆ ಸಕಾಲದಲ್ಲಿ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಸಂಬಂಧ ಕೇಂದ್ರದ ಸಚಿವರನ್ನು ಭೇಟಿ ಮಾಡಲಾಗಿದೆ. ಸಕಾಲಕ್ಕೆ ಬೆಂಬಲ ಬೆಲೆ ಪ್ರಕಟಿಸುವಂತೆ ಕೇಂದ್ರದ ಗಮನ ಸೆಳೆಯುವಂತೆ ಕೃಷಿ ಸಚಿವರು ಸಂಸದರುಗೆ ಮನವಿ ಮಾಡಿದರು.
ಯಾರ್ಯಾರು ಹಾಜರಿದ್ದರು?
ಸಭೆಯಲ್ಲಿ ಸಂಸದರಾದ ಸಂಗಣ್ಣ, ಪ್ರಕಾಶ್ ಹುಕ್ಕೇರಿ, ಪಿ.ಸಿ.ಮೋಹನ್, ಗದ್ದಿ ಗೌಡ ರ್, ಆಸ್ಕರ್ ಫರ್ನಾಂಡಿಸ್, ಕೆ.ಸಿ.ರಾಮಮೂರ್ತಿ, ಜಿ. ಇ. ಚಂದ್ರಶೇಖರ್, ಡಾ: ಎಲ್. ಹನುಮಂತಯ್ಯ, ಭಗವಂತ ಕೌಲ್, ಕುಪೇಂದ್ರ ರೆಡ್ಡಿ, ಡಿ.ಕೆ.ಸುರೇಶ್, ಡಿ.ಎನ್. ಚಂದ್ರಪ್ಪ, ಎಸ್.ಪಿ, ಮುದ್ದ ಹನುಮೇ ಗೌಡ, ಪ್ರಹ್ಲಾದ್ ಜೋಶಿ, ಎಲ್.ಆರ್.ಶಿವರಾಮೇಗೌಡ, ಡಿ.ಎಸ್.ಉಗ್ರಪ್ಪ, ಬಿ.ವಿ.ನಾಯಕ್, ಜಿ.ಎಂ. ಸಿದ್ದೇಶ್ವರ್ ಭಾಗವಹಿಸಿದ್ದರು. ಸಚಿವರುಗಳಾದ ಆರ್.ವಿ.ದೇಶಪಾಂಡೆ, ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ಶಿವಶಂಕರರೆಡ್ಡಿ, ರಮೇಶ್ ಜಾರಕಿಹೊಳಿ, ನಾಡಗೌಡ, ವೆಂಕಟರಮಣಪ್ಪ, ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು ಭಾಗವಹಿಸಿದ್ದರು.