ಶ್ರವಣ ಸಮಸ್ಯೆ ಇರುವ ಮಕ್ಕಳ ನೆರವಿಗೆ ನಿಂತ ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಮೇ 29 : ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ನಾರಾಯಣಪುರ ಗ್ರಾಮದಲ್ಲಿ ಕೂಲಿಕಾರರಾಗಿರುವ ಪ್ರಕಾಶ್ ಎಂಬುವವರ ಮೂವರು ಮಕ್ಕಳಿಗೆ ಕಿವುಡುತನ ನಿವಾರಣೆ ಚಿಕಿತ್ಸೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವಾಗಿದ್ದಾರೆ.
ಪ್ರಕಾಶ್ ಅವರು ತಮ್ಮ ಮೂವರು ಕಿವುಡ- ಮೂಕ ಮಕ್ಕಳ ಚಿಕಿತ್ಸೆಗಾಗಿ ನೆರವಿಗೆ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿದ್ದರು. ಈ ಮಕ್ಕಳ ಸಮಸ್ಯೆ ಹಾಗೂ ಅಗತ್ಯವಿರುವ ಚಿಕಿತ್ಸೆಯ ಕುರಿತು ವಿವರವಾದ ವರದಿ ಒದಗಿಸುವಂತೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮುಖ್ಯಸ್ಥರನ್ನು ಕೋರಲಾಗಿತ್ತು.
ದಾರಿ ಮಧ್ಯೆ ಕಾರು ನಿಲ್ಲಿಸಿ ಮಹಿಳೆಯ ಕಷ್ಟ ಕೇಳಿದ ಕುಮಾರಸ್ವಾಮಿ
ಮಕ್ಕಳ ತಜ್ಞ ಡಾ. ಸಂಜಯ್ ಅವರು ಮೂರು ಮಕ್ಕಳನ್ನು ಮಕ್ಕಳ ವೈದ್ಯರು ಹಾಗೂ ಇಎನ್ ಟಿ ವೈದ್ಯರು ತಪಾಸಣೆ ನಡೆಸಿದ್ದು, ಕಿರಿಯ ಮಕ್ಕಳಿಬ್ಬರಿಗೆ ಕಾಕ್ಲಿಯರ್ ಇಂಪ್ಲಾಂಟ್ ಮೂಲಕ ಗುಣಪಡಿಸಲು ಅವಕಾಶವಿದೆ. ಇದಕ್ಕೂ ಮುನ್ನ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಮೂರು ತಿಂಗಳ ಕಾಲ ಹಿಯರಿಂಗ್ ಏಡ್ ಟ್ರಯಲ್ ನೀಡುವಂತೆ ಸಲಹೆ ಮಾಡಿದ್ದರು.
ವೈದ್ಯರ ಸಲಹೆಯಂತೆ ಮುಖ್ಯಮಂತ್ರಿಗಳು ಪ್ರಕಾಶ್ ಅವರ ಆರು ವರ್ಷ, ನಾಲ್ಕೂವರೆ ವರ್ಷ ಹಾಗೂ ಒಂದೂವರೆ ವರ್ಷದ ಮೂವರು ಮಕ್ಕಳಿಗೆ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಉಚಿತವಾಗಿ ಹಿಯರಿಂಗ್ ಏಡ್ ಟ್ರಯಲ್ ನೀಡಲು ಸೂಚಿಸಿದ್ದಾರೆ.