ಆಡಿಯೋ ಕ್ಲಿಪ್ ವಿವಾದ: ಸಭಾಧ್ಯಕ್ಷರ ನೇತೃತ್ವದಲ್ಲಿ ನಾಳೆ ಸಭೆ
ಬೆಂಗಳೂರು, ಫೆಬ್ರವರಿ 12: ಆಪರೇಷನ್ ಕಮಲ ಆಡಿಯೋ ಕ್ಲಿಪ್ ಇಂದಿನ ದಿನದ ಕಲಾಪವನ್ನೂ ಆವರಿಸಿಕೊಂಡಿತು. ಇಂದಿನ ಕಲಾಪ ಅಂತ್ಯವಾದರೂ ಸಹ ಆಡಿಯೋ ಕ್ಲಿಪ್ ಪ್ರಕರಣವನ್ನು ಯಾವ ರೀತಿಯ ತನಿಖೆಗೆ ಒಳಪಡಿಸಬೇಕು ಎಂಬುದನ್ನು ನಿಶ್ಚಯಿಸಲು ಸದನ ಸದಸ್ಯರಿಗೆ ಸಾಧ್ಯವಾಗಲಿಲ್ಲ.
ಬೆಳಿಗ್ಗೆಯಿಂದಲೂ ಆಡಿಯೋ ಕ್ಲಿಪ್ಗೆ ಸಂಬಂಧಿಸಿದ ಚರ್ಚೆ, ಆರೋಪ, ಪ್ರತ್ಯಾರೋಪ ಹೊರತುಪಡಿಸಿದರೆ ಇನ್ನಾವುದೇ ವಿಚಾರ ಇಂದು ಚರ್ಚೆ ಆಗಲಿಲ್ಲ. ಬಜೆಟ್ ಮೇಲಿನ ಚರ್ಚೆ ಇಂದು ನಡೆಯಬೇಕಿತ್ತು ಆದರೆ ಅದು ಸಹ ನಡೆಯಲಿಲ್ಲ.
ಸದನವು ಪ್ರಾರಂಭವಾದ ಆರಂಭದಲ್ಲಿ ಬಿಜೆಪಿಯು ಒಮ್ಮೆ ಆಡಿಯೋ ಕ್ಲಿಪ್ ಪ್ರಕರಣವನ್ನು ಕೈಬಿಡಿ ಎಂದು ಒತ್ತಾಯಿಸಿತು ಆದರೆ ಆಡಳಿತ ಪಕ್ಷದ ಸದಸ್ಯರು ಅದಕ್ಕೆ ಒಪ್ಪಲಿಲ್ಲ, ಗದ್ದಲದಿಂದ ಮುಂದೂಡಿದ್ದ ಕಲಾಪ ಆರಂಭವಾದಾಗ ಈ ಪ್ರಕರಣದಲ್ಲಿ ಕುಮಾರಸ್ವಾಮಿಯೇ ಅಪರಾಧಿ ಎಂದು ಬಿಜೆಪಿ ವಾದಿಸಿತು.
ಜಗದೀಶ್ ಶೆಟ್ಟರ್, ಮಾಧುಸ್ವಾಮಿ ಆರೋಪ
ಸುದೀರ್ಘವಾಗಿ ಮಾತನಾಡಿದ ಜಗದೀಶ್ ಶೆಟ್ಟರ್ ಮತ್ತು ಮಾಧುಸ್ವಾಮಿ ಅವರುಗಳು ಕುಮಾರಸ್ವಾಮಿ ಅವರು ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ವಾದಿಸಿದರು. ಸ್ವತಃ ಅವರೇ ಅಪರಾಧಿ ಆಗಿದ್ದಾಗ ಅವರೇ ನೇತೃತ್ವ ವಹಿಸಿರುವ ಸರ್ಕಾರದ ಅಧಿಕಾರಿಗಳಿಂದ ತನಿಖೆ ಮಾಡಿಸುವುದು ಸರಿಯಲ್ಲ ಈ ಬಗ್ಗೆ ತನಿಖೆಗೆ ಸದನಸಮಿತಿ ಮಾಡಿ ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ವಿರುದ್ಧ ಬಿಎಸ್ವೈ ಆರೋಪ
ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಮಾತನಾಡಿ, ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿ ಸುಳ್ಳು ಆಡಿಯೋ ಬಿಡುಗಡೆ ಮಾಡಿದ್ದಾರೆ, ಆಡಿಯೋವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿದ್ದಿದ್ದಾರೆ, ಉದ್ದೇಶಪೂರ್ವಕವಾಗಿ ತಮ್ಮ ಪಕ್ಷದ ಸದಸ್ಯರನ್ನು ಕಳುಹಿಸಿ ಬೇಹುಗಾರಿಗೆ ಮಾಡಿದ್ದಾರೆ ಎಂಬಿತ್ಯಾದಿ ಆರೋಪಗಳನ್ನು ಮಾಡಿದರು.
'ನಾಗನಗೌಡರ ಮಗ ನನ್ನ ಸಲಹೆ ಕೇಳಿದ್ದರು, ನಾನು ನೀಡಿದೆ'
ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ನಮ್ಮ ಹಾಗೂ ಜೆಡಿಎಸ್ ಶಾಸಕ ನಾಗನಗೌಡ ಅವರ ಕುಟುಂಬದ್ದೂ ಹಳೆಯ ನಂಟು, ನೀವು (ಯಡಿಯೂರಪ್ಪ) ಅವರಿಗೆ ಕರೆ ಮಾಡಿದಾಗ ಆತ ನನಗೆ ಕರೆ ಮಾಡಿ ಸಲಹೆ ಕೇಳಿದ, 'ಹೋಗಪ್ಪ, ಅದೇನು ಮಾತನಾಡುತ್ತಾರೋ ಕೇಳಿಸಿಕೊ' ಎಂದಿದ್ದೆ, ಆದರೆ ಆತ ಅದನ್ನು ರೆಕಾರ್ಡ್ ಮಾಡಿಕೊಂಡು ಬಂದ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಭಾಧ್ಯಕ್ಷರು ಮಾತುಕತೆಗೆ ಕರೆದಿಲ್ಲ: ಬಿಎಸ್ವೈ
ಆದರೆ ಇದಕ್ಕೂ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿ, ಕುಮಾರಸ್ವಾಮಿ ಅವರೇ ಈ ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದಾರೆ ಹಾಗಾಗಿ ಸದನ ಸಮಿತಿ ರಚಿಸಿರಿ ಎಂದರು. ಸಭಾಧ್ಯಕ್ಷರ ಕ್ರಮದ ಬಗ್ಗೆಯೂ ಮಾತನಾಡಿದ ಯಡಿಯೂರಪ್ಪ ಈ ವಿಷಯವು ಎರಡು ದಿನದಿಂದ ಚರ್ಚೆ ನಡೆಯುತ್ತಿದೆ ಆದರೆ ನೀವು ನಮ್ಮನ್ನು ಮಾತನಾಡಲು ಕರೆದಿಲ್ಲ ಎಂದರು. ಮುಂಚೆಯೆಲ್ಲಾ ಸಭಾಧ್ಯಕ್ಷರು ಕರೆದು ಮಾತನಾಡುತ್ತಿದ್ದರು ನೀವು ಹಾಗೆ ಮಾಡಿಲ್ಲ ಎಂದರು.
ನಾಳೆ ಸಭಾಧ್ಯಕ್ಷರ ಸಮ್ಮುಖದಲ್ಲಿ ಸಭೆ
ಅಂತಿಮವಾಗಿ ಮಾತನಾಡಿದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ನಾಳೆ (ಬುಧವಾರ) ಬೆಳಿಗ್ಗೆ ನನ್ನ ಕಚೇರಿಯಲ್ಲಿ ಆಡಳಿತ ಪಕ್ಷದ ಮುಖಂಡರು ಮತ್ತು ವಿರೋಧ ಪಕ್ಷದ ಮುಖಂಡರು ಆಗಮಿಸಿ ಈ ವಿಷಯದ ಬಗ್ಗೆ ಸಭೆ ನಡೆಸಬೇಕು ಎಂದು ಹೇಳಿದರು. ನಾಳೆ 11:30 ಗೆ ಸದನ ಆರಂಭವಾಗುತ್ತದೆ ಎಂದು ಹೇಳಿ ಇಂದಿನ ಕಲಾಪವನ್ನು ಮುಕ್ತಾಯಗೊಳಿಸಿದರು.