ಪ್ರತ್ಯೇಕ ರಾಜ್ಯ ಬಂದ್ಗೆ ಕರೆ ನೀಡಿದವರು ಚರ್ಚೆಗೆ ಬರಲಿ: ಸಿಎಂ
ಬೆಂಗಳೂರು, ಜು.26: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ಗೆ ಕರೆ ನೀಡಿರುವ ಸಂಘಟನೆಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದರು.
ಕಾರ್ಗಿಲ್ ವಿಜಯ ದಿವಸ್ ಸಂದರ್ಭದಲ್ಲಿ ಮಾತನಾಡಿದ ಅವರು, ಆ.2ರಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಗೆ ಕರೆ ನೀಡಿದ್ದಾರೆ, ಉತ್ತರ ಕರ್ನಾಟಕ ಅಭಿವೃದ್ಧಿಯ ಬಗೆಗೆ ಬಹಿರಂಗ ಚರ್ಚೆಗೆ ಬರಲಿ ನಾನು ಉತ್ತರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಪಾದಯಾತ್ರೆಯನ್ನು ಸ್ವಾಗತಿಸಿದ ಎಚ್.ಡಿ.ಕುಮಾರಸ್ವಾಮಿ
ಉತ್ತರ ಕರ್ನಾಟಕ ಪ್ರತ್ಯೇಕಗೊಳಿಸಲು ಆಗ್ರಹಿಸಿ ಬಂದ್ಗೆ ಕರೆ ನೀಡಿರುವ ಸಂಘದವರು ಮೊದಲು ಉತ್ತರಿಸಲಿ, ಎರಡು ತಿಂಗಳಿನಿಂದ ಮಾತ್ರ ಈ ಸಮಸ್ಯೆ ಆರಂಭವಾಗಿದೆಯೇ, ಅಖಂಡ ಕರ್ನಾಟಕದ ದೃಷ್ಟಿಯಿಂದ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ತಾರತಮ್ಯ ನಿರ್ಲಕ್ಷ್ಯ ತೊಡೆದು ಹಾಕಲು ಸುವರ್ಣಸೌಧ ನಿರ್ಮಿಸಲಾಗಿದೆಯೇ ಹೊರತು ರಾಜ್ಯವನ್ನು ವಿಭಜನೆ ಮಾಡುವ ಉದ್ದೇಶದಿಂದಲ್ಲ. ಅಖಂಡ ಕರ್ನಾಟಕ ನಿರ್ಮಾಣ ನಮ್ಮೆಲ್ಲರ ಗುರಿ ಎಂದರು.
ಬಿಜೆಪಿಯವರ ಪಾದಯಾತ್ರೆಯನ್ನು ನಾವು ಸ್ವಾಗತಿಸುತ್ತೇವೆ. ಹೋರಾಟ ಅಥವಾ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಕನಿಷ್ಟ ಈಗಲಾದರೂ ರೈತರ ಪರವಾಗಿ ಪಾದಯಾತ್ರೆ ಮಾಡುತ್ತಿದ್ದಾರಲ್ಲ ಎಂದರು.
ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಅದಕ್ಕೆ ಬಿಜೆಪಿಯವರು ಬೆಂಬಲವಾಗಿ ನಿಲ್ಲುತ್ತಾರೋ, ವಿರೋಧವಾಗುತ್ತಾರೋ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ. ಪದೇ ಪದೇ ಈ ಬಗ್ಗೆ ಚರ್ಚೆ ಬೇಡ ಎಂದು ಹೇಳಿದರು.