ಸಂಪುಟ ವಿಸ್ತರಣೆ ವಿಳಂಬವಾಗಿರುವುದು ನಿಜ: ಡಾ. ಅಶ್ವಥ್ನಾರಾಯಣ
ಬೆಂಗಳೂರು, ಜ. 19: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದೇಶದಿಂದ ಮರಳಿದ ತಕ್ಷಣ ಸಂಪುಟ ವಿಸ್ತರಣೆ ಆಗಲಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಮಲ್ಲೇಶ್ವರದಲ್ಲಿ ಶ್ರೀ ಭಗವತ್ ಮಧ್ವಾಚಾರ್ಯರ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡ ಸಚಿವರು, ಮಾಧ್ಯಮದವರ ಜತೆ ಮಾತನಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಸಂಬಂಧ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಜತೆ ಮಾತನಾಡಿದ್ದಾರೆ.
ಯಡಿಯೂರಪ್ಪ ಅವರು ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ವಾಪಸಾದ ಕೂಡಲೇ ದಿಲ್ಲಿಗೆ ತೆರಳಿ ವರಿಷ್ಠರ ಜತೆ ಚರ್ಚೆ ನಡೆಸುವರು. ಸಂಪುಟ ವಿಸ್ತರಣೆ ವಿಚಾರವಾಗಿ ಹೆಚ್ಚಿನ ಸ್ಪಷ್ಟತೆಗೆ ಮತ್ತೆ ಚರ್ಚೆ ಮಾಡಬೇಕಾದ ಕಾರಣ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಮುಖ್ಯಮಂತ್ರಿಗಳು ವಿದೇಶದಿಂದ ವಾಪಾಸ್ ಬಂದ ತಕ್ಷಣ ಸಂಪುಟ ವಿಸ್ತರಣೆ ಆಗುವುದು ಎಂದಿದ್ದಾರೆ.
ಸಂಪುಟ ವಿಸ್ತರಣೆಯ ಸಂಭಾವ್ಯ ಪಟ್ಟಿ: ಯಾರಿಗೆ ಯಾವ ಖಾತೆ?
ಉಪಮುಖ್ಯಮಂತ್ರಿ ಹುದ್ದೆ ಕುರಿತು ಹೈಕಮಾಂಟ್ ಹಾಗೂ ಮುಖ್ಯಮಂತ್ರಿ ನಿರ್ಣಯ ಕೈಗೊಳ್ಳುವರು. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳುವರು ಎಂದು ಡಾ. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಗಡಿ ವಿಚಾರವನ್ನು ಕೆದಕುವ ಮೂಲಕ ಶಿವಸೇನಾ ಮುಖಂಡ ಸಂಜಯ್ ರಾವತ್ ಅವಲಕ್ಷಣ ಮಾಡಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವನ್ನು ಈಗಾಗಲೇ ಮಹಾಜನ್ ವರದಿ ಇತ್ಯರ್ಥ ಮಾಡಿದೆ. ಪದೇ ಪದೇ ಇದೇ ವಿಚಾರವನ್ನು ಪ್ರಚೋದಿಸುವುದನ್ನು ಶಿವಸೇನೆ ಕೈಬಿಡಬೇಕು. ಕ್ಷುಲ್ಲಕ ಕಾರಣಗಳನ್ನು ಕೈಗೆತ್ತಿಕೊಂಡು ಭಾವನಾತ್ಮಕ ವಿಚಾರಗಳನ್ನು ಪ್ರಚೋದಿಸುವುದನ್ನು ಸಂಜಯ್ ರಾವತ್ ಕೂಡ ಕೈಬಿಡಬೇಕು. ಅದನ್ನು ಬಿಟ್ಟು ಮಹಾರಾಷ್ಟ್ರದ ಅಭಿವೃದ್ಧಿ ಕಡೆಗೆ ಅವರು ಗಮನ ಕೊಡಲಿ ಎಂದು ಡಾ. ಅಶ್ವಥ್ ನಾರಾಯಣ ಸಲಹೆ ಕೊಟ್ಟಿದ್ದಾರೆ.