ಮಹಿಳೆಯನ್ನು ನಿಂದಿಸಿದರೆ ಕ್ಷಮಿಸಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ ವಿರುದ್ಧ ಸಿಎಂ ಗರಂ
ಬೆಂಗಳೂರು, ಮೇ 21: ಮನವಿ ನೀಡಲು ಬಂದಿದ್ದ ಮಹಿಳೆಗೆ ಅಸಭ್ಯ ಶಬ್ದಗಳಿಂದ ನಿಂದಿಸಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ.
Recommended Video
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ''ಸಚಿವರು ಮಾತನಾಡಿರುವುದು ಸರಿಯಿಲ್ಲ. ಅವರಿಗೆ ನಾನು ಎಚ್ಚರಿಕೆ ನೀಡಲಿದ್ದೇನೆ. ಮಹಿಳೆ ಬಗ್ಗೆ ಅಶ್ಲೀಲವಾಗಿ ಮಾತನಾಡುವುದನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಒಬ್ಬ ಸಚಿವರಾಗಿ ಈ ರೀತಿ ವರ್ತನೆ ಶೋಭೆ ತರುವಂತದಲ್ಲ. ಈ ಮಹಿಳೆಯನ್ನು ಕರೆದು ನಾನು ಮಾತನಾಡುತ್ತೇನೆ. ಇನ್ಮುಂದೆ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ'' ಎಂದು ಸಿಎಂ ಹೇಳಿದ್ದಾರೆ.
ಕೋಲಾರದಲ್ಲಿ ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ
ಇನ್ನು ಮಾಧುಸ್ವಾಮಿ ರಾಜೀನಾಮೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಮೌನದಿಂದ ಉತ್ತರ ನೀಡದೇ ಸಿಎಂ ಯಡಿಯೂರಪ್ಪ ಮುಂದೆ ಸಾಗಿದರು. ವಿ ಸೋಮಣ್ಣ ಮಾತನಾಡಿ 'ತೀಕ್ಷ್ಣವಾಗಿ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ಕೊಟ್ಟ ಮೇಲೆ ನಾವು ಮಾತನಾಡೋದು ಸರಿಯಲ್ಲ' ಎಂದರು. ಮುಂದೆ ಓದಿ...
ಕೋಲಾರದಲ್ಲಿ ನಡೆದಿದ್ದ ಘಟನೆ
ನಿನ್ನೆ ಕೋಲಾರ ತಾಲೊಕಿನ ಎಸ್ ಅಗ್ರಹಾರ ಕೆರೆ ವೀಕ್ಷಣೆಗೆ ಬಂದಿದ್ದ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಬಳಿ ರಾಜ್ಯ ರೈತ ಸಂಘದ ಹಾಗು ಹಸಿರು ಸೇನೆಯ ಮಹಿಳಾ ಸದಸ್ಯರು ಕೆರೆ ಒತ್ತುವರಿ ಸಂಬಂಧ ಮನವಿ ಸಲ್ಲಿಸಲು ಬಂದಿದ್ದರು. ಈ ವೇಳೆ ನಳಿನಿ ಎಂಬ ಮಹಿಳೆಗೆ ಸಚಿವರು ಅಸಭ್ಯವಾಗಿ ನಿಂದಿಸಿದರು.
ಮಹಿಳೆಗೆ 'ರಾಸ್ಕಲ್' ಎಂದಿದ್ದ ಮಾಧುಸ್ವಾಮಿ
'ಮನವಿ ಮಾಡಿಕೋ, ಕಮಾಂಡ್ ಮಾಡಬೇಡ. ನಾನು ಬಹಳ ಕೆಟ್ಟ ಮನುಷ್ಯ ಇದ್ದೀನಿ, ಬಾಯ್ ಮುಚ್ಚು ರಾಸ್ಕರ್'' ಎಂದು ಗದರಿದ್ದರು. ಈ ವೇಳೆ ಮಹಿಳೆ ಮತ್ತು ಸಚಿವರ ನಡುವೆ ಮಾತಿನ ವಾಗ್ವಾದ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯನ್ನು ದೂರ ಕಳುಹಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಖಂಡನೆ
ರೈತ ಮಹಿಳೆ ಬಳಿ ಜೆಸಿ ಮಾಧುಸ್ವಾಮಿ ಅವರು ಮಾತನಾಡಿದ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಫೇಸ್ಬುಕ್, ಟ್ವಿಟ್ಟರ್ನಲ್ಲಿ ಈ ವಿಡಿಯೋ ವೈರಲ್ ಆಯಿತು. ಸಚಿವರು ಈ ಕೂಡಲೇ ಮಹಿಳೆಯ ಕ್ಷಮೆಯಾಚಿಸಬೇಕು ಅಥವಾ ರಾಜೀನಾಮೆ ಕೊಡಬೇಕು ಎಂಬ ಒತ್ತಾಯಿಸಿದರು.
ಸಂಪುಟದಿಂದ ಕೈ ಬಿಡಲು ಸಿದ್ದರಾಮಯ್ಯ ಒತ್ತಾಯ
ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಈ ಘಟನೆಯನ್ನು ಖಂಡಿಸಿದರು. 'ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಯಡಿಯೂರಪ್ಪ ಅವರು ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆ ಯಾಚಿಸುವಂತೆ ಮಾಡಿ, ಅವರನ್ನು ಸಂಪುಟದಿಂದ ಕೈ ಬಿಟ್ಟು ಸರ್ಕಾರದ ಮಾನ ಉಳಿಸಬೇಕು'' ಎಂದು ಟ್ವೀಟ್ ಮಾಡಿದ್ದರು.