ಸಂಪುಟ ಸಭೆಯಲ್ಲಿ ಸಚಿವರಿಗೆ ಎಚ್ಚರಿಕೆ ಕೊಟ್ಟ ಸಿಎಂ ಯಡಿಯೂರಪ್ಪ!
ಬೆಂಗಳೂರು, ಏ. 30: ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ರಾಜ್ಯ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆದಿದ್ದು, ಆರಂಭದಲ್ಲಿಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದ ಸಹೋದ್ಯೋಗಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಚಿವರಾದ ಆರ್. ಅಶೋಕ್, ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ , ಜಗದೀಶ್ ಶೆಟ್ಟರ್, ಮಾಧುಸ್ವಾಮಿ ಸೆರಿದಂತೆ ಹಲವು ಸಚಿವರು ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದರು.
Recommended Video
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸುವಂತೆ ಸಚಿವರಿಗೆ ಸಿಎಂ ಯಡಿಯೂರಪ್ಪ ಅವರು ಸಂಪುಟ ಸಭೆ ಆರಂಭದಲ್ಲಿಯೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ, ಸಚಿವರಾದ ಸಿ.ಟಿ. ರವಿ, ಡಾ. ಸುಧಾಕರ್ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಆಹಾರ ವಿತರಣೆ, ಹಾಲು, ತರಕಾರಿ ಹಂಚಿಕೆ ಸಂದರ್ಭದಲ್ಲಿ ಸಾಮಾಜಿಕ ಅಂತರದ ಕುರಿತು ಎಚ್ಚರ ವಹಿಸಿರಿ.
ನಿಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿಯೂ ಕೂಡಾ ಹೆಚ್ಚಿನ ಎಚ್ಚರದಿಂದ ಇರಿ. ನೀವು ಜನರಿಗೆ ಮಾದರಿ ಆಗಬೇಕು. ಒಂದೊಮ್ಮೆ ಸಚಿವರಿಗೆ ಯಾರಿಗಾದರೂ ಸೋಂಕು ಕಾಣಿಸಿ ಕೊಂಡದ್ದೇ ಆದರೆ ಕಷ್ಟ ಆಗಲಿದೆ. ಜನರಿಗೆ ಮತ್ತು ವಿಪಕ್ಷಗಳಿಗೆ ಉತ್ತರ ನೀಡುವುದು ತೊಂದರೆ ಆಗುತ್ತದೆ. ಇಲ್ಲಿಯ ತನಕ ಮಾಡಿದ್ದ ಪ್ರಯತ್ನ ಎಲ್ಲ ವ್ಯರ್ಥ ಆಗಲಿದೆ ಎಂದು ಸಂಪುಟ ಸಭೆ ಆರಂಭದಲ್ಲೇ ಸಚಿವರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.