ಎಐಐಎಸ್ಎಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿ
ಬೆಂಗಳೂರು, ನವೆಂಬರ್ 11: ಎಐಐಎಸ್ಎಸ್ಎಂನ ವಾರ್ಷಿಕ ಜಾಗತಿಕ ಸಮಾವೇಶವು ನ.14 ಮತ್ತು 15ರಂದು ಬೆಂಗಳೂರಿನ ಕೋನ್ರಾಡ್ ಹೋಟೆಲ್ನಲ್ಲಿ ನಡೆಯಲಿದೆ. 'ಡಿಜಿಟಲ್ ಯುಗದಲ್ಲಿ ನಷ್ಟ ತಡೆಗೆ ನೂತನ ವಿಶ್ಲೇಷಣೆಗಳು' ಈ ಸಮಾವೇಶದ ವಿಷಯವಾಗಿದೆ.
ಸೋಮವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ರಾಜ್ಯಸಭೆ ಸಂಸದ ಮತ್ತು ಎಐಐಎಸ್ಎಸ್ಎಂನ ಕಾರ್ಯಕಾರಿ ಅಧ್ಯಕ್ಷ ಆರ್ಕೆ ಸಿನ್ಹಾ, ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.
ಸಿನ್ಹಾ ಅವರು 1974ರಲ್ಲಿ ಆರಂಭಿಸಿದ ಭದ್ರತಾ ಮತ್ತು ಬೇಹುಗಾರಿಕಾ ಸೇವೆಗಳ (ಭಾರತ) ನಿಯಮಿತದ ಸಿಎಂಡಿ ಕೂಡ ಹೌದು. ಈ ಸಂಸ್ಥೆಯು 36,000ಕ್ಕೂ ಅಧಿಕ ಕಾಯಂ ಉದ್ಯೋಗಿಗಳನ್ನು, 3000 ಕಾರ್ಪೊರೇಟ್ ಗ್ರಾಹಕರನ್ನು ಹೊಂದಿದ್ದು ಹಾಗೂ 350 ಮಿಲಿಯನ್ ಅಮೆರಿಕನ್ ಡಾಲರ್ಗೂ ಅಧಿಕ ವಹಿವಾಟು ನಡೆಸುತ್ತಿದ್ದು, ಏಷ್ಯಾ ಪೆಸಿಫಿಕ್ನ ಮುಂಚೂಣಿ ಮಾನವಶಕ್ತಿಯ ಭದ್ರತಾ ವ್ಯವಹಾರ ಸಂಸ್ಥೆಗಳಲ್ಲಿ ಒಂದಾಗಿದೆ.
ಪತ್ರಕರ್ತರಾಗಿ ಅವರು 1971ರಲ್ಲಿ ಭಾರತ-ಪಾಕ್ ಯುದ್ಧ ಬಾತ್ಮೀದಾರನಾಗಿ ಮಾಡಿದ ಕೆಲಸಕ್ಕೆ ಪುರಸ್ಕಾರಗಳನ್ನು ಪಡೆದಿದ್ದಾರೆ. ಕ್ರಾಂತಿಕಾರಿ ನಾಯಕ ಜಯಪ್ರಕಾಶ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಚಳವಳಿಯ ಕುರಿತಾದ ಮೊದಲ ಅಧಿಕೃತ ಸಂಶೋಧನಾ ಕೃತಿ 'ಜನಾಂದೋಲನ್'ಅನ್ನು ರಚಿಸಿದ್ದಾರೆ. ಭಾರತ-ಪಾಕ್ ಯುದ್ಧಾನಂತರ ನಿವೃತ್ತ ಮಾಜಿ ಸೈನಿಕರಿಗೆ ನೆರವಾಗಲು ಅವರು ಭದ್ರತಾ ಸೇವಾ ಕಂಪೆನಿಯನ್ನು ಆರಂಭಿಸಿದರು.
ಭಾರತದ ಭದ್ರತಾ ಕೈಗಾರಿಕೆಯ ಪಿತಾಮಹ ಎನಿಸಿಕೊಂಡಿರುವ ಎಸ್ಐಎಸ್ ಸಿಎಂಡಿ ಆರ್ಕೆ ಸಿನ್ಹಾ ಅವರ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಐಐಎಸ್ಎಸ್ಎಂನ ಮಹಾ ನಿರ್ದೇಶಕ ರಾಜನ್ ಮೇಧೇಕರ್ ಕೂಡ ನಿಯೋಗದಲ್ಲಿ ಇದ್ದರು.