ಸಂತೋಷ್ ಆತ್ಮಹತ್ಯೆ ಪ್ರಯತ್ನ ಪ್ರಕರಣ: ಯಡಿಯೂರಪ್ಪ ಪ್ರತಿಕ್ರಿಯೆ
ಬೆಂಗಳೂರು, ನವೆಂಬರ್ 28: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಅವರು ಶುಕ್ರವಾರ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಎಂ.ಎಸ್, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ನೋಡಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಧಾವಿಸಿದ್ದರು.
ಸಂತೋಷ್ ಬೆಳಿಗ್ಗೆಯಿಂದ ನಗುನಗುತ್ತಾ ಚೆನ್ನಾಗಿಯೇ ಇದ್ದ. ಯಾವುದೇ ಆತಂಕ ಇಲ್ಲ ಎಂದು ಯಡಿಯೂರಪ್ಪ ಅವರು ಸಂತೋಷ್ ಯೋಗ ಕ್ಷೇಮ ವಿಚಾರಿಸಿದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ
'ಶುಕ್ರವಾರ ಬೆಳಿಗ್ಗೆ ನನ್ನ ಜತೆ ಮುಕ್ಕಾಲು ಗಂಟೆ ವಾಕ್ ಮಾಡಿದ್ದ. ಖುಷಿ ಖುಷಿಯಾಗಿ ಚೆನ್ನಾಗಿ ಇದ್ದ. ಅವನ ಪತ್ನಿ ಜತೆ ನಾನು ಮಾತನಾಡಿದ್ದೇನೆ. ಯಾವುದೇ ಆತಂಕ ಇಲ್ಲ. ಬೆಳಿಗ್ಗೆ ಎದ್ದು ಓಡಾಡುತ್ತಾನೆ. ಆಗಿರುವುದು ಏನು ಎಂದು ಆತ ಬೆಳಿಗ್ಗೆ ಹೇಳುತ್ತಾನೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.
Recommended Video
ರಾಜ್ಯ ರಾಜಕೀಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂತೋಷ್ ಬಹ ಬೇಸರದಿಂದ ಇದ್ದರು ಎಂದು ಅವರ ಪತ್ನಿ ಜಾಹ್ನವಿ ಹೇಳಿದ್ದಾರೆ. 'ಕೌಟುಂಬಿಕವಾಗಿ ನಾವು ಬಹಳ ಚೆನ್ನಾಗಿದ್ದೇವೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವುದನ್ನು ಮನಸಿಗೆ ತೆಗೆದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆಯಿಂದ ಬೇಸರದಲ್ಲಿದ್ದರು. ಸಂಜೆ ಹೊರಗಡೆ ಹೋಗಿ ಏಳು ಗಂಟೆಗೆ ಮನೆಗೆ ಬಂದಿದ್ದರು. ಊಟಕ್ಕೆ ಏನು ಮಾಡುವುದು ಎಂದು ಕೇಳಿದಾಗ ಪ್ರಜ್ಞೆ ತಪ್ಪಿರುವುದು ಕಂಡುಬಂತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದೆವು. ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರ ಹೇಳಿದ್ದಾರೆ' ಎಂದು ಜಾಹ್ನವಿ ತಿಳಿಸಿದ್ದಾರೆ.