ಸಿದ್ದಗಂಗಾ ಕ್ಷೇತ್ರದಲ್ಲಿ ಮೋದಿ ಭಾಷಣಕ್ಕೆ ಟೀಕೆ: ಸಿದ್ದರಾಮಯ್ಯಗೆ ಬಿಎಸ್ವೈ ತಿರುಗೇಟು
ಬೆಂಗಳೂರು, ಜನವರಿ 2: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ನರೇಂದ್ರ ಮೋದಿ ಅವರನ್ನು ಆ ಪವಿತ್ರ ನೆಲ ಕ್ಷಮಿಸುವುದಿಲ್ಲ ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
'ಪವಿತ್ರ ಸಿದ್ದಗಂಗಾ ಮಠವನ್ನು ರಾಜಕೀಯಕ್ಕೆ ಎಳೆದ ಸಿದ್ದರಾಮಯ್ಯ ಅವರು ತಮ್ಮ ಕ್ಷುಲ್ಲಕ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಜನರಿಗೆ ರಾಷ್ಟ್ರದ ಆಗುಹೋಗುಗಳ ಬಗ್ಗೆ ತಿಳಿಸುವುದು ಒಬ್ಬ ಪ್ರಧಾನಿಯ ಕರ್ತವ್ಯ' ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಿ ಮೋದಿಯವರೇ, ನಿಮ್ಮನ್ನು ಸಿದ್ದಗಂಗಾ ಪವಿತ್ರಭೂಮಿ ಕ್ಷಮಿಸದು
'ದೇಶದ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದಾಗ ಅಭಿವೃದ್ಧಿ ವಿಚಾರಗಳ ಕುರಿತು ಗಮನ ಸೆಳೆಯುವ ಬದಲು ವಿರೋಧ ಪಕ್ಷಗಳು ಹುರುಳಿಲ್ಲದ ಆರೋಪಗಳ ಮೂಲಕ ವೃಥಾ ಟೀಕೆಗಳನ್ನು ಮಾಡುತ್ತಿರುವುದು ಅವರ ವೈಚಾರಿಕ ದಿವಾಳಿತನಕ್ಕೆ ಸಾಕ್ಷಿ' ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
'ಕೊಳಕು ರಾಜಕೀಯದಲ್ಲಿಯೇ ಸದಾ ಮುಳುಗಿರುವವರಿಗೆ ಶುದ್ಧ ಸರೋವರದಲ್ಲಿಯೂ ಕೊಳಕೇ ಕಾಣುವುದು ಅತ್ಯಂತ ಸಹಜ' ಎಂದು ಸಚಿವ ಎಸ್. ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಟಾಪ್ ಟ್ರೆಂಡ್ ಆಯಿತು #GobackModi ..!
'ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ ಕ್ಷಮಿಸದು' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.