ಆಡಿಯೋ ಮೂಡಿಸಿದ ಭಯ: ಸಿಎಂ ಭೇಟಿ ವೇಳೆ ಮೊಬೈಲ್ ನಿಷೇಧ
ಬೆಂಗಳೂರು, ನವೆಂಬರ್ 6: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಪರೇಷನ್ ಕಮಲದ ಕುರಿತು ಆಡಿದ್ದು ಎನ್ನಲಾದ ವಿಡಿಯೋ ಸೋರಿಕೆಯಾಗಿ ವಿವಾದ ಸೃಷ್ಟಿಸಿದ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೆ ತೊಂದರೆಗೆ ಸಿಲುಕಿಕೊಳ್ಳದಂತೆ ಕ್ರಮಕ್ಕೆ ಮುಂದಾಗಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವವರು ಮನೆಯೊಳಗೆ ಮೊಬೈಲ್ ತರದಂತೆ ಯಡಿಯೂರಪ್ಪ ಸೂಚನೆ ನೀಡಿದ್ದರು. ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ ಎಂದು ನಿವಾಸದ ಮುಂದೆ ಸೂಚನೆ ನೀಡಲಾಗಿದೆ. 'ಮುಖ್ಯಮಂತ್ರಿ ಭೇಟಿಗೆ ಬಂದವರಿಗೆ ಮೊಬೈಲ್ ನಿಷೇಧಿಸಲಾಗಿದೆ' ಎಂದು ಬೋರ್ಡ್ ಹಾಕಲಾಗಿದೆ. ಈಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದೊಳಗೂ ಮೊಬೈಲ್ ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗಿದೆ.
ವಿಡಿಯೋದಿಂದ ಬೆಚ್ಚಿಬಿದ್ದ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ
ತಮ್ಮನ್ನು ಭೇಟಿಯಾಗಲು ಬರುವವರು ಮೊಬೈಲ್ ತರದಂತೆ ತಡೆಯಲು ಪೊಲೀಸರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಲವು ಆಯ್ದ ಗಣ್ಯರಿಗೆ ಮಾತ್ರ ಮೊಬೈಲ್ ತರಲು ಅವಕಾಶ ನೀಡಲಾಗಿದೆ. ಉಳಿದಂತೆ ಬಿಜೆಪಿ ಕಾರ್ಯಕರ್ತರು, ಸದಸ್ಯರು, ಮುಖಂಡರು ಹಾಗೂ ಸಾರ್ವಜನಿಕರು ಕೃಷ್ಣಾ ಮತ್ತು ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಮೊಬೈಲ್ ಕೊಂಡೊಯ್ಯುವಂತಿಲ್ಲ.
ಬಿಎಸ್ ಯಡಿಯೂರಪ್ಪ ಅವರು ಪಕ್ಷದ ಮುಖಂಡರೊಂದಿಗೆ ಆಡುವ ಮಾತುಗಳು ಬಹಿರಂಗವಾಗುತ್ತಿವೆ. ಅಲ್ಲದೆ, ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ನೀಡಿದ್ದ ಹೇಳಿಕೆಯನ್ನು ಧ್ವನಿ ಮುದ್ರಿಸಿಕೊಂಡು ಸೋರಿಕೆ ಮಾಡಲಾಗಿತ್ತು. ಅದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದು ಯಡಿಯೂರಪ್ಪ ಅವರಲ್ಲಿ ತಳಮಳ ಮೂಡಿಸಿದ್ದು, ಆ ಕಾರಣದಿಂದ ಎಲ್ಲ ಕಡೆಯೂ ಮೊಬೈಲ್ ಬಳಕೆಗೆ ನಿಷೇಧ ವಿಧಿಸುತ್ತಿದ್ದಾರೆ ಎಂದು ಹೇಳಲಾಗಿದೆ.