ಪತ್ರಕರ್ತ ನಾಗರಾಜ್ ದೀಕ್ಷಿತ್ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ
ಬೆಂಗಳೂರು, ಸೆ. 18: ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್(56) ಅವರು ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಗರಾಜ್ ದೀಕ್ಷಿತ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರ ಕೊರೊನಾ ಪರೀಕ್ಷೆ ನೆಗೆಟಿವ್ ಬಂದಿದ್ದು. ಇಂದು ಮೃತರ ಅಂತ್ಯಕ್ರಿಯೆ ನೆರವೇರಲಿದೆ.
ನಾಗರಾಜ್ ದೀಕ್ಷಿತ್ ಎಚ್. ಬಿ: ಟೈಮ್ಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ, ಜನಶ್ರೀ, ಟಿವಿ 9 ಕನ್ನಡ ಹೀಗೆ ಪತ್ರಿಕೋದ್ಯಮದಲ್ಲಿ 25 ವರ್ಷಕ್ಕೂ ಹೆಚ್ಚಿನ ಅನುಭವ ಇದ್ದವರು. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಪೀಡಿತರಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿತ್ತು. ಆದರೆ, ಗುರುವಾರ ತಡರಾತ್ರಿ ಬಹು ಅಂಗಾಂಗ ವೈಫಲ್ಯ, ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಪತ್ರಕರ್ತರಾಗಿ ಅಲ್ಲದೆ ರಂಗಭೂಮಿಯಲ್ಲೂ ನಟನೆ ಮೂಲಕ ಹಲವು ಹವ್ಯಾಸಿ ರಂಗ ತಂಡಗಳ ಜೊತೆ ಗುರುತಿಸಿಕೊಂಡಿದ್ದರು.
ಮುಖ್ಯಮಂತ್ರಿಗಳ ಸಂತಾಪ ಸಂದೇಶ:
ಜನವಾಹಿನಿ ದಿನಪತ್ರಿಕೆ, ಜನಶ್ರೀ ಹಾಗೂ ಟಿ. ವಿ 9 ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರದ್ದು ಬಹುಮುಖ ಪ್ರತಿಭೆ. ತಮ್ಮ ಶ್ರಮದಿಂದಲೇ ಪ್ರತಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದ ಇವರ ನಿಧನದಿಂದ ಮಾಧ್ಯಮರಂಗ ಪ್ರತಿಭಾವಂತರೊಬ್ಬರನ್ನು ಕಳೆದುಕೊಂಡಂತಾಗಿದೆ.
Recommended Video
ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.