ರಾಣೇಬೆನ್ನೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿದ ಸಿಎಂ ಬಿಎಸ್ವೈ
ಬೆಂಗಳೂರು, ನವೆಂಬರ್ 15: ರಾಣೇಬೆನ್ನೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಬೆಳಗ್ಗೆ ಅಭ್ಯರ್ಥಿಯ ಹೆಸರನ್ನು ಸುದ್ದಿಗಾರರ ಮುಂದಿಟ್ಟರು.
ಬಿಜೆಪಿಯಿಂದ ಅರುಣ್ ಕುಮಾರ್ ಜಿ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದ ಟಿಕೆಟ್ ಗಾಗಿ ಅನೇಕ ಮಂದಿ ಆಕಾಂಕ್ಷಿಗಳಿದ್ದರು. ಪ್ರಮುಖ ಆಕಾಂಕ್ಷಿಯಾಗಿದ್ದ ಪ್ರಜಾಕೀಯ ಪಕ್ಷದಿಂದ ಗೆದ್ದು ನಂತರ ರಾಜೀನಾಮೆ ನೀಡಿ, ಪಕ್ಷ ವಿಲೀನಗೊಳಿಸಿ ಕಾಂಗ್ರೆಸ್ ನಿಂದ ಅನರ್ಹ ಶಾಸಕ ಎನಿಸಿಕೊಂಡ ಆರ್ ಶಂಕರ್ ಕೂಡಾ ಒಬ್ಬರು.
ಆನಂದ್ ಸಿಂಗ್ ಕಣಕ್ಕೆ, ಸ್ಪರ್ಧೆಯಿಂದ ಗವಿಯಪ್ಪ ಹೊರಕ್ಕೆ
"ಆರ್ ಶಂಕರ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅವರು ಹಾಗೂ ಅವರ ಬೆಂಬಲಿಗರು, ರಾಣೇಬೆನ್ನೂರಿನಲ್ಲಿ ಯಾರೇ ಅಭ್ಯರ್ಥಿಯಾಗಲಿ ಅವರ ಪರ ಪ್ರಚಾರಕ್ಕೆ ನಿಲ್ಲಲಿದ್ದಾರೆ. ಶಂಕರ್ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದೇನೆ. ನನ್ನ ಜೀವನದಲ್ಲಿ ನಾನು ಯಾರಿಗಾದರೂ ಭರವಸೆಯನ್ನು ನೀಡಿದರೆ, ನಾನು ಕುರ್ಚಿಗಂಟಿಕೊಂಡವನಲ್ಲ, ಭರವಸೆಯನ್ನು ಈಡೇರಿಸುವಂತವನು" ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಆರ್ ಶಂಕರ್ ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪ ಅವರು ನಿನ್ನೆ ಅನರ್ಹ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡ ವೇದಿಕೆಯಲ್ಲೇ ಘೋಷಿಸಿದ್ದರು. ಆದರೆ ಎರಡು ಬಾರಿ ಮಂತ್ರಿಗಿರಿ ಅನುಭವಿಸಿರುವ ಆರ್ ಶಂಕರ್ ಅವರು ಚುನಾವಣೆ ಸ್ಪರ್ಧಿಸಿಯೇ ತೀರುವುದಾಗಿ ತಮ್ಮ ಬೆಂಬಲಿಗರು ಮುಂದೆ ಹೇಳಿಕೊಂಡಿದ್ದಾರೆ.