ಕಿದ್ವಾಯಿಯಲ್ಲಿ ಇನ್ಪೋಸಿಸ್ ನಿರ್ಮಿತ ಒಪಿಡಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 23: ಇನ್ಫೋಸಿಸ್ ನ ಸಿಎಸ್ಆರ್ ವಿಭಾಗ ಮತ್ತು ಲೋಕೋಪಕಾರಿ ಸಂಸ್ಥೆ ಇನ್ಫೋಸಿಸ್ ಫೌಂಡೇಷನ್, ಇಂದು ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿಯಲ್ಲಿನ 75,000 ಚದರ ಅಡಿ ವಿಸ್ತೀರ್ಣದ ಬಹು-ಶಿಸ್ತಿನ ಹೊರರೋಗಿ (ಒಪಿಡಿ) ಬ್ಲಾಕ್ನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ. ಈ ಹೊಸ ಒಪಿಡಿ ಬ್ಲಾಕ್ಗೆ ಇನ್ಫೋಸಿಸ್ ಫೌಂಡೇಷನ್ 25.5 ಕೋಟಿ ರೂ. ವೆಚ್ಚ ಮಾಡಿದ್ದು, ಇದು 12ಕ್ಕೂ ಹೆಚ್ಚು ಇಲಾಖೆಗಳ ವ್ಯಾಪ್ತಿ ಹೊಂದಿದ್ದು, ಪ್ರತಿನಿತ್ಯ 1,800 ರೋಗಿಗಳಿಗೆ ಸ್ಥಳಾವಕಾಶ ಒದಗಿಸುವ ಗುರಿ ಹೊಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಒಡಿಪಿಯನ್ನು ಉದ್ಘಾಟಿಸಿದರು. ಇನ್ಫೋಸಿಸ್ ಫೌಂಡೇಷನ್ನ ಅಧ್ಯಕ್ಷೆ ಸುಧಾಮೂರ್ತಿ ವರ್ಚ್ಯುವಲ್ ಮಾಧ್ಯಮದ ಮೂಲಕ ಪಾಲ್ಗೊಂಡರು.
ಉದ್ಘಾಟನೆ ವೇಳೆ ಮಾತನಾಡಿದ ಸುಧಾಮೂರ್ತಿ, ''ಸೂಕ್ತ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಹಲವು ಬಾರಿ ದುರದೃಷ್ಟಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂಕಷ್ಟದಲ್ಲಿರುವ ಜನರಿಗೆ, ವಿಶೇಷವಾಗಿ ನಾವೆಲ್ಲರೂ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸಿಲುಕಿರುವ ಸಂದರ್ಭದಲ್ಲಿ, ಜನರಿಗೆ ಸ್ವಚ್ಛ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ಫೌಂಡೇಷನ್ನ ಒಂದು ಸಣ್ಣ ಪ್ರಯತ್ನವಾಗಿದೆ. ಈ ಉಪಕ್ರಮದ ಸಹಭಾಗಿತ್ವ ಹಾಗೂ ಬೆಂಬಲಕ್ಕೆ ನಾವು, ರಾಜ್ಯ ಸರ್ಕಾರ, ಗೌರವಾನ್ವಿತ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಮತ್ತು ಕಿದ್ವಾಯಿ ಗ್ರಂಥಿ ಸ್ಮಾರಕ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ,'' ಎಂದರು.
2001 ರಿಂದಲೂ ಕಿದ್ವಾಯಿ ಜೊತೆ ಇನ್ಫೋಸಿಸ್
ಇನ್ಫೋಸಿಸ್ ಫೌಂಡೇಶನ್ 2001 ರಿಂದಲೂ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯೊಂದಿಗೆ ಹಲವಾರು ಯೋಜನೆಗಳಲ್ಲಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ಒಪಿಡಿ, ಧರ್ಮಶಾಲಾ ನವೀಕರಣ, ಐದು ಸಂಪೂರ್ಣ ಸುಸಜ್ಜಿತ ಆಪರೇಷನ್ ಥಿಯೇಟರ್ಗಳು ಮತ್ತು ಒಂದು ಐಸಿಯು ಮೊದಲೇ ಪೂರ್ಣಗೊಂಡಿದೆ, ಆಸ್ಪತ್ರೆ ಮತ್ತು ಕ್ವಾರಂಟೈನ್ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಫೌಂಡೇಶನ್ನ ಪ್ರಯತ್ನಗಳನ್ನು ಸೇರಿಸಿ ಸಾರ್ವಜನಿಕರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಒಂದೂವರೆ ವರ್ಷಗಳಲ್ಲಿ, ಇನ್ಫೋಸಿಸ್ ಫೌಂಡೇಶನ್ ಮೂಲಕ ಭಾರತದಾದ್ಯಂತ ಕೋವಿಡ್ ಪರಿಹಾರ ಪ್ರಯತ್ನಗಳಿಗಾಗಿ ಒಟ್ಟು ರೂ. 200 ಕೋಟಿ ರೂ. ವ್ಯಯಿಸಲಾಗಿದೆ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ 150 ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.
ಹಲವೆಡೆ ಧರ್ಮಶಾಲೆಗಳನ್ನು ಕಟ್ಟಲು ನೆರವು ನೀಡಿದೆ
ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಚಂಡೀಗಢ, ಹುಬ್ಬಳ್ಳಿ ಮತ್ತು ಕಲ್ಬುರ್ಗಿಗಳಲ್ಲಿ ಧರ್ಮಶಾಲೆಗಳನ್ನು ಕಟ್ಟಲು ನೆರವು ನೀಡಿದೆ. ಹೆಚ್ಚುವರಿಯಾಗಿ ಈ ಫೌಂಡೇಷನ್ ಬೆಂಗಳೂರಿನ ಕಿದ್ವಾಯ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಕ್ರಿಯಾ ಕೊಠಡಿ ಸಂಕೀರ್ಣ ನಿರ್ಮಾಣಕ್ಕೆ, ಓಡಿಶಾದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮತ್ತು ಮಹಾರಾಷ್ಟ್ರದಲ್ಲಿ ಆಸ್ಪತ್ರೆ ಘಟಕ ನಿರ್ಮಾಣಕ್ಕೆ, ಕರ್ನಾಟಕದಲ್ಲಿ ವೈದ್ಯಕೀಯ ವಾರ್ಡ್ಗಳು ಮತ್ತು ಪೆಥಾಲಜಿ ಪ್ರಯೋಗಾಲಯ ನಿರ್ಮಾಣಕ್ಕೆ, ಕರ್ನಾಟಕ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಪಡೆದುಕೊಳ್ಳಲು ಮತ್ತು ಇತರೆ ಉಪಕ್ರಮಗಳಿಗೆ ನಿಧಿ ನೆರವು ನೀಡಿದೆ.
ಕ್ಯಾನ್ಸರ್ ಎಂದರೆ ಸಾವೇ ಗತಿ ಎಂಬ ತಪ್ಪು ಆಲೋಚನೆ
''ಕ್ಯಾನ್ಸರ್ ಎಂದರೆ ಸಾವೇ ಗತಿ ಎಂಬ ತಪ್ಪು ಆಲೋಚನೆ ಇದೆ. ಈಗಿನ ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಬಳಸಿಕೊಂಡು ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ಗುಣಪಡಿಸಬಹುದು. ಆದರೆ ಹೀಗೆ ಚಿಕಿತ್ಸೆ ನೀಡಲು ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಬೇಕು. ಮಹಿಳೆಯರು ಈಗ ಹೆಚ್ಚಾಗಿ ಸ್ತನ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರು 35 ವರ್ಷ ವಯಸ್ಸಿನ ಬಳಿಕ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಕ್ಯಾನ್ಸರ್ ತಪಾಸಣೆ ಮಾಡಿಸಬೇಕು. ಉಚಿತ ವೈದ್ಯಕೀಯ ತಪಾಸಣಾ ಸೌಲಭ್ಯ ಇರುವುದರಿಂದ ಇದಕ್ಕಾಗಿ ಹಣ ಖರ್ಚು ಮಾಡಬೇಕಿಲ್ಲ. ಮುಂಚಿತವಾಗಿಯೇ ತಪಾಸಣೆ ಮಾಡಿದರೆ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿ ಬೇಗ ಚಿಕಿತ್ಸೆ ನೀಡಬಹುದು. ಕುಟುಂಬಗಳಲ್ಲಿ ಯುವಜನರು ಹಿರಿಯರನ್ನು ಕರೆದುಕೊಂಡು ಹೋಗಿ ಕ್ಯಾನ್ಸರ್ ತಪಾಸಣೆ ಮಾಡಿಸಬೇಕು'' ಎಂದು ಸಚಿವ ಸುಧಾಕರ್ ಕಿವಿಮಾತು ಹೇಳಿದರು.
Recommended Video
ಕಿದ್ವಾಯಿಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ.
''ಕಿದ್ವಾಯಿಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಈ ಆಸ್ಪತ್ರೆಗೆ ಬಡಜನರು ಹೆಚ್ಚಾಗಿ ಬರುತ್ತಿದ್ದು, ಅವರಿಗೆ ಯಾವುದೇ ಶೋಷಣೆಯಾಗದಂತೆ ಎಚ್ಚರ ವಹಿಸಬೇಕು. ಕೆಲ ಸಂದರ್ಭಗಳಲ್ಲಿ ಎಕ್ಸ್ ರೇ, ಸ್ಕ್ಯಾನಿಂಗ್ನಲ್ಲಿ ಹಣ ಪಡೆಯುವ ಸನ್ನಿವೇಶ ಇರುತ್ತದೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಆಸ್ಪತ್ರೆ ಹಾಗೂ ಸರ್ಕಾರದ ಮೇಲೆ ಜನರಿಗೆ ತಪ್ಪು ಭಾವನೆ ಮೂಡುವುದನ್ನು ತಪ್ಪಿಸಬೇಕು,'' ಎಂದು ಸಿಎಂ ಬೊಮ್ಮಾಯಿ ಹೇಳಿದರು.