ದೇಶದ ಅತಿದೊಡ್ಡ ಪೀಠೋಪಕರಣ ಮಳಿಗೆ ಐಕಿಯಾ ಉದ್ಘಾಟನೆ
ಬೆಂಗಳೂರು, ಜೂನ್ 22: ಐಕಿಯಾ ಪೀಠೋಪಕರಣ ಮಳಿಗೆಯಿಂದಾಗಿ ಸ್ಥಳೀಯರಿಗೆ ಅತಿ ಹೆಚ್ಚು ಉದ್ಯೋಗಾವಕಾಶ ದೊರೆಯಲಿದೆ. ಶೇ 75 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆಯನ್ನು ಸಂಸ್ಥೆಯ ಮುಖ್ಯಸ್ಥರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಡನ್ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ 'ಐಕಿಯಾ' ದ ಅತಿದೊಡ್ಡ ಮಳಿಗೆಯನ್ನು ಬೆಂಗಳೂರಿನ ನಾಗಸಂದ್ರದಲ್ಲಿ ಬುಧವಾರ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
"ದಾವೋಸ್ನಲ್ಲಿ ಅಂತಾರಾಷ್ಟ್ರೀಯ ಐಕಿಯಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿತ್ತು. ಸುಮಾರು 3000 ಕೋಟಿ ಹೂಡಿಕೆ ಮಾಡಲು ತೀರ್ಮಾನ ಮಾಡಿದ್ದಾರೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕುಶಲಕರ್ಮಿಗಳಿಗೆ ಅವಕಾಶ; "ಮಳಿಗೆ ಪ್ರಾರಂಭವಾದುದರಿಂದ ಸ್ಥಳೀಯ ಕುಶಲಕರ್ಮಿಗಳಾದ ಬಡಗಿಗಳು, ಶಿಲ್ಪಕಾರರು, ಉತ್ಪಾದಕರಿಗೆ ಅವಕಾಶ ದೊರೆಯುತ್ತದೆ. ಶೇ 27 ರಷ್ಟು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಅದನ್ನು ಹೆಚ್ಚಿಗೆ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನಷ್ಟು ಮಳಿಗೆಗಳನ್ನು ತೆಗೆಯಬೇಕು. ಒಂದು ಮಳಿಗೆಯಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಬೆಂಗಳೂರಿಗೆ ಆ ಸಾಮರ್ಥ್ಯವಿದೆ. ಬೆಂಗಳೂರು ದಕ್ಷಿಣದಲ್ಲಿ ಮಳಿಗೆ ತೆರೆಯಲು ತಿಳಿಸಲಾಗಿದೆ" ಎಂದರು.
ಬೆಂಗಳೂರಿನಲ್ಲಿಯೇ ಮೊದಲ ಮಳಿಗೆ ಪ್ರಾರಂಭಿಸಬೇಕೆಂಬ ಉದ್ದೇಶ ಐಕಿಯಾ ಸಂಸ್ಥೆಗೆ ಇತ್ತು. ಆದರೆ ಸಹಕಾರ ದೊರೆಯಲಿಲ್ಲ. ನಂತರ ಬಹಳ ಕಷ್ಟಪಟ್ಟು ಸ್ಥಳ ಪಡೆದಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಧ್ಯಮವರ್ಗದವರ ಕನಸು ನನಸಾಗಿಸಲು ಸಹಕಾರಿ; "ಐಕಿಯಾದಲ್ಲಿ ಉತ್ತಮ ಗುಣಮಟ್ಟದ, ಬಾಳಿಕೆ ಬರುವ ಹಾಗೂ ಕೈಗೆಟುಕುವ ಬೆಲೆಯ ಪೀಠೋಪಕರಣಗಳಿವೆ. ಸಾಮಾನ್ಯ ಜನರಿಗೆ, ಮಧ್ಯಮ ವರ್ಗದವರ ಕನಸು ನನಸಾಗಿಸಲು ಇದು ಸಹಕಾರಿಯಾಗಿದೆ. ಉದ್ಯಮ ಬೆಳೆಯಬೇಕು ಹಾಗೂ ಉದ್ಯೋಗಾವಕಾಶಗಳು ಹೆಚ್ಚಬೇಕು ಎಂಬ ಕಾರಣಕ್ಕಾಗಿ ನಾವು ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡಲೇಬೇಕು" ಎಂದರು.
ಐಕಿಯ ಪೀಠೋಪಕರಣ ಮಳಿಗೆ ಉದ್ಘಾಟನೆ ವೇಳೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸ್ವೀಡನ್ ರಾಯಭಾರಿ ಕ್ಲಾಸ್ ಮೊಲಿನ್, ಐಕಿಯಾ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಸನ್ ಪುಲ್ವೇಲರ್, ಐಕಿಯಾ ಕರ್ನಾಟಕದ ಮಾರುಕಟ್ಟೆ ವ್ಯವಸ್ಥಾಪಕರಾದ ಆಂಜೆ ಹಿಮ್, ಮೊದಲಾದವರು ಉಪಸ್ಥಿತರಿದ್ದರು.
Recommended Video