ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಜು.12ರಿಂದ ಭೇಟಿ
ಬೆಂಗಳೂರು, ಜುಲೈ 11: ರಾಜ್ಯದ ಬಹುತೇಕ ಜಿಲ್ಲೆಗಳು ಕಳೆದ ಕೆಲ ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಅಪಾರ ಹಾನಿಗೊಳಗಾಗಿವೆ. ಹೀಗಾಗಿ ನಾಳೆದಿಂದ ಎರಡು ದಿನಗಳ ಕಾಲ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರ ಸೇರಿದಂತೆ ಮಳೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡುವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಭಾಗಗಳಲ್ಲಿ ಮನೆಗಳು, ಮರಗಳು ಧರೆಗುರುಳಿದ ವರದಿಗಳಾಗಿವೆ. ಜನ ಜಾನುವಾರಗಳ ಪ್ರಾಣ ಹಾನಿ ಸಂಭವಿಸಿದೆ. ಮಳೆ ಪ್ರವಾಹಕ್ಕೆ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು ಭೂಕುಸಿತ ಉಂಟಾಗಿದೆ. ಹೀಗಾಗಿ ನಾಳೆಯಿಂದ ಎರಡು ದಿನಗಳ ಕಾಲ ಸಿಎಂ ಪ್ರವಾಹ ಪೀಡಿತ ಪ್ರದೇಶಗಳ ಸ್ಥಳ ಪರಿಶೀಲನೆ ಮಾಡಲಿದ್ದಾರೆ.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ಮಲೆನಾಡು, ಕೊಡಗು, ಕರಾವಳಿ ಹಾಗೂ ಉತ್ತರ ಕನ್ನಡ ಭಾಗದಲ್ಲಿಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಹಾಗೂ ನೆರವಾಗಿಯೂ ಮಾತನಾಡಿದ್ದು, ಮಳೆ ತಗ್ಗಿರುವುದರಿಂದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಸ್ಥಿತಿಗತಿಯನ್ನು ಅವಲಂಬಿಸಿ ಪರಿಹಾರಕ್ಕೆ ಸೂಚನೆ ನೀಡಲಾಗುವುದು," ಎಂದರು.
ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ನಿರಂತರ ಮಳೆಗೆ ಜಿಲ್ಲೆಯ ವಿವಿಧೆಡೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮಳೆ ಹೆಚ್ಚಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಪ್ರಮಾಣವೂ ಏರಿಕೆಯಾಗಿದೆ. ಮಳೆ ಬಿಟ್ಟು ಬಿಡದೆ ದಿನದಿಂದ ದಿನಕ್ಕೆ ಮತ್ತಷ್ಟು ಚುರುಕುಗೊಂಡು ಜುಲೈ 9ರಂದು ಕೆಲವೆಡೆ ಮನೆಗಳು ಧರೆಗುರುಳಿದ್ದರೆ, ಚಿಕ್ಕಪುಟ್ಟ ಗುಡ್ಡಗಳು ಕುಸಿದಿವೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆವರೆಗೆ ಆರೆಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಶನಿವಾರ ಬೆಳಿಗ್ಗೆವರೆಗೆ 115.6 ಮಿಲಿ ಮೀಟರ್ ನಿಂದ 204.4 ಮಿಲಿಮೀಟರ್ವರೆಗೆ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Chief minister Basavaraj Bommai to visit rain affected areas including Kodagu, Dakshina Kannada, Udupi and Karwar districts for two days starting from Tuesday.@NewIndianXpress @Cloudnirad
— Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@AshwiniMS_TNIE) July 11, 2022
ಇನ್ನೂ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಮುತ್ತುಮಣಿ ಎಂಬುವರ ಮನೆಯ ಒಂದು ಭಾಗ ತೀವ್ರ ಮಳೆಗೆ ಕುಸಿದು ಹಾನಿಯಾಗಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ಒಟ್ಟು 9 ಮನೆಗಳು ಕುಸಿದು ಬಿದ್ದಿವೆ. ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆ ಸುರಿಯುತ್ತಿದ್ದರೆ, ವಾತಾವರಣ ಅಷ್ಟೇ ತೀವ್ರವಾದ ಚಳಿಯಿಂದ ಕೂಡಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಹಳ್ಳಿಯಲ್ಲಿ ಅಧಿಕ ಮಳೆ ಮತ್ತು ಶೀತಗಾಳಿಗೆ ಜಾನುವಾರಗಳು ಮೃತಪಟ್ಟಿರುವುದು ವರದಿಯಾಗಿದೆ. ಹೀಗಾಗಿ ಮೊನ್ನೆಯಷ್ಟೇ ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕರ್ತೋಜಿಯಲ್ಲಿ ಹೆದ್ದಾರಿ ಉಬ್ಬುತ್ತಿರುವ ಸ್ಥಳಕ್ಕೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರ ಕನ್ನಡದಲ್ಲೂ ವರುಣನ ಅರ್ಭಟ
ಇನ್ನೂ ಉತ್ತರ ಕನ್ನಡದಲ್ಲೂ ವರುಣನ ಅರ್ಭಟ ಜೋರಾಗಿದ್ದು ಪ್ರವಾಸಿಗರಿಗೆ ಕಡಲ ತೀರದಲ್ಲಿ ಎಚ್ಚರಿಕೆ ನೀಡಲಾಗಿದೆ. ಪ್ರವಾಸಿಗರಿಗೆ ಕಡಲಿಗೆ ಇಳಿಯದಂತೆ ನಿಷೇದ ಹೇರಲಾಗಿದೆ.
ಬೀದರದಲ್ಲಿ ಮೂರು ದಿನಗಳಿಂದ ಅಧಿಕ ಮಳೆಯಾಗುತ್ತಿದ್ದು ಮನೆ ಕುಸಿದಿರುವ ವರದಿಯಾಗಿದೆ. ಇನ್ನೂ ಭಾರಿ ಮಳೆಗೆ ಕೊಡಗು ಕಾವೇರಿ ಅಪಾಯದ ಮಟ್ಟ್ ಮೀರಿ ಹರಿಯುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾಯದ ಮುನ್ಸೂಚನೆ ನೀಡಲಾಗುತ್ತಿದ್ದು ಆಟೋದ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಇನ್ನೂ ಇಂದು ಅಧಿಕ ಮಳೆಯ ಮುನ್ಸೂಚನೆಯಿಂದಾಗಿ ಕಲಬುರಗಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲೂ ಮಳೆ ಪ್ರವಾಹಕ್ಕೆ ನೀರುಪಾಲಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Recommended Video