ಕನ್ನಡ ಸಾಹಿತ್ಯ ಪರಿಷತ್ತಿನ ಮೊಬೈಲ್ ಆಪ್ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 4: ಕನ್ನಡ ಸಾಹಿತ್ಯ ಪರಿಷತ್ತು ಹೊಸ ರೂಪ ಪಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರ್ಕಾರ ಜೊತೆಯಾಗಿ ಕನ್ನಡ ಕಟ್ಟುವ ಕಾರ್ಯ ನಡೆಸಲಿದೆ. ಸಾಹಿತ್ಯದ ಒಡನಾಟ ಇಲ್ಲದವರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಪರಿಷತ್ತು ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಗುರುವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆ ಮಾಡಿ ಮಾತನಾಡಿದರು. ನಾಡೋಜ ಡಾ. ಮಹೇಶ ಜೋಶಿ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಕಷ್ಟು ಬದಲಾವಣೆ ಕಾಣುತ್ತಿದೆ. ಅದಕ್ಕೆ ಅವರ ಕ್ರೀಯಾಶೀಲತೆ ಹಾಗೂ ಕನ್ನಡ ಕಟ್ಟಿ ಬೆಳೆಸುವ ಆಸಕ್ತಿಯೇ ಕಾರಣ ಎಂದರು. ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅಪಾರ ನಿರೀಕ್ಷೆಯಿದೆ. ಆ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಮಹೇಶ್ ಜೋಶಿ ಮಾರ್ಗದಶನದಲ್ಲಿ ಅವರ ನೇತೃತ್ವದ ತಂಡ ಕೆಲಸ ಮಾಡಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ನ್ಯೂಸ್ ಚಾನಲ್ನಲ್ಲಿ ಶೀಘ್ರವೇ ಮೂರನೇ ಸ್ಥಾನದ ಪೈಪೋಟಿ!
ಕನ್ನಡ ಭಾಷೆಗೆ ದೇಶದಲ್ಲಿ ಅಗ್ರಸ್ಥಾನವಿದೆ, ಅದಕ್ಕೆ ತಕ್ಕಂತೆ ಆಯಾ ಕಾಲಘಟ್ಟದಲ್ಲಿ ಸವಾಲುಗಳು ಬಂದೇ ಬರುತ್ತವೆ. ಕನ್ನಡ ಉಳಿಸಿ ಎಲ್ಲಾ ರಂಗದಲ್ಲಿ ಬೆಳೆಸುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರ್ಕಾರವೂ ಜೊತೆಯಾಗಿ ಮುನ್ನಡೆಯಲಿದೆ ಎಂದರು.
ಉತ್ತಮ ಸಾಹಿತ್ಯ ಕೃತಿ ರಚನೆಯಾಗಬೇಕು
ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಪ್ರಕಟವಾಗಬೇಕಿದೆ. ಎಲ್ಲಾ ಕಾಲದಲ್ಲಿ ನೆನಪಿಸಿಕೊಳ್ಳುವಂತಹ ಸಮಾಮುಖಿ ಸಾಹಿತ್ಯ ರಚನೆಯಾಗಬೇಕಿದೆ. 80ರ ದಶಕದ ನಂತರ ಸ್ಪೂರ್ತಿದಾಯಕ ಕಾದಂಬರಿಗಳು ಅಷ್ಟಾಗಿ ಪ್ರಕಟವಾಗಿಲ್ಲ. ಕನ್ನಡ ಸಾಹಿತ್ಯದ ಪ್ರಕಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವ ಮಟ್ಟದಲ್ಲಿ ಬೆಳೆಯಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಯಾವುದೇ ಪ್ರತಿಷ್ಠೆ ಇಲ್ಲದೆ ಸಾಹಿತ್ಯ ಪರಿಷತ್ತಿನೊಂದಿಗೆ ಕನ್ನಡ ಕಟ್ಟುವಲ್ಲಿ ರಾಜ್ಯ ಸರ್ಕಾರ ಜೊತೆಯಾಗಿ ಇರಲಿದೆ. ಹಾವೇರಿಯಲ್ಲಿ ಹಮ್ಮಿಕೊಂಡ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಅದೇ ಕಾರಣಕ್ಕೆ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ಮಾನ ನೀಡಿ ಸರ್ಕಾರ ಗೌರವಿಸಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಅಮಿತ್ ಶಾ ಕಾರ್ಯಕ್ರಮದಲ್ಲಿ ರಾರಾಜಿಸಿದ 'ಹಿಂದಿ': ಕನ್ನಡ ಕಡೆಗಣನೆಗೆ ಆಕ್ರೋಶ
ಸದಸ್ಯತ್ವ ಶುಲ್ಕ ಇಳಿಸಿದ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, "ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಮುನ್ನಡೆಸಲಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಾಗೂ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹೊತ್ತು, ಪರಿಷತ್ತಿನ ನಿಯಮ-ನಿಬಂಧನೆಗಳಿಗೆ ಅಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಲಾಗಿದೆ." ಎಂದರು..
ವಿಶ್ವದ್ಯಾಂತ ಕನ್ನಡಿಗರನ್ನು ಒಗ್ಗೂಡಿಸಲು ಹೊರ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಸ್ತುತ ಮುಂದಿನ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವ ಹೊಂದುವ ಉದ್ದೇಶದಿಂದ ಎಲ್ಲರೂ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ 500 ರುಪಾಯಿ ಇದ್ದ ಸದಸ್ಯತ್ವ ಶುಲ್ಕವನ್ನು 250 ರುಪಾಯಿಗೆ ಕಡಿಮೆ ಮಾಡಲಾಗಿದೆ ಎಂದರು. https://play.google.com/store/apps/details?id=com.knobly.kasapa ವಿಳಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಪ್ಲಿಕೇಷನ್ ಸಾರ್ವಜನಿಕರಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.