ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ; ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಅಕ್ಟೋಬರ್ 20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಬುಧವಾರ) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡರು.
ಇದೇ ವೇಳೆ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕ ಎಸ್.ವಿ. ರಾಮಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.
ವಿಧಾನಸೌಧದ ಆವರಣದಲ್ಲಿ ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಂತರ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮಾಜದ ಸಾಧಕ ವ್ಯಕ್ತಿಗಳಿಗೆ 2020- 21ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಬೇಡಿಕೆ ವಿಚಾರ ಇದೆ. ಆದರೆ, ಮೀಸಲಾತಿ ಮಿತಿ ಶೇ.50 ರಷ್ಟು ಮೀರಬಾರದು ಎಂಬ ಮಿತಿ ಇದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಅರ್ಥ ಮಾಡಿಕೊಂಡು ಆರ್ಥಿಕ ಹಿಂದುಳಿದವರಿಗೆ ಶೇ.10 ಶೇ ಮೀಸಲಾತಿ ನೀಡುವ ತೀರ್ಮಾನ ಮಾಡಿದ್ದಾರೆ. ಮೀಸಲಾತಿ ಹೆಚ್ಚಳ ವಿಚಾರವಾಗಿ ಪುನರ್ ಚರ್ಚೆ ಹಾಗೂ ತೀರ್ಮಾನ ಆಗಬೇಕಿದೆ. ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುವ ಬಗ್ಗೆ ಕಾನೂನು ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಎಲ್ಲ ಸಮುದಾಯದ ಆಶೋತ್ತರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಪ್ರಸನ್ನಾನಂದಪುರಿ ಶ್ರೀಗಳ ಸಹಕಾರ ಬೇಕಿದೆ ಎಂದರು.
ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ. ನಮ್ಮನ್ನು ನಾವೇ ಮೌಲ್ಯಮಾಪನ ಮಾಡಿ, ಆತ್ಮವಿಶ್ವಾಸದೊಂದಿಗೆ ಮುನ್ನಡೆಯುವ ದಿನ ಇದಾಗಿದೆ. ಸಾಹಿತ್ಯದ ಜಗತ್ತನ್ನು ಬದಲಾವಣೆ ಮಾಡಿದ ಶ್ರೇಷ್ಠ ವ್ಯಕ್ತಿತ್ವ ವಾಲ್ಮೀಕಿ. ಅವರದ್ದು ಕಾಲಾತೀತರಾಗಿರುವ ವ್ಯಕ್ತಿತ್ವ.
ಮನಕುಲ ಇರುವವರೆಗೂ ವಾಲ್ಮೀಕಿ ಚಿಂತನೆ ಜೀವಂತವಾಗಿರುತ್ತದೆ. ಭಾರತಕ್ಕೆ ಸಂಸ್ಕೃತಿ ಕೊಟ್ಟ ಏಕಮೇವ ಕವಿ ವಾಲ್ಮೀಕಿ ಎಂದು ಹೇಳಿದರು.
ಎಸ್.ಟಿ. ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯದ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಘೋಷಣೆಯನ್ನು ನಾನು ಸಿಎಂ ಆದ ಬಳಿಕ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಅತೀ ಹೆಚ್ಚು ಜಮೀನು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಪಾಯಿಖಾನೆ ತೊಳೆಯಬೇಕಾ?
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, "ಜಾತಿಯಿರುವವರೆಗೆ ಮೀಸಲಾತಿ ನೀಡಬೇಕು, ಎಸ್ಸಿ/ ಎಸ್ಟಿಯವರಷ್ಟೇ ಪಾಯಿಖಾನೆ ತೊಳೆಯಬೇಕಾ? ಮೇಲ್ವರ್ಗ ಸಮುದಾಯ ಇದರಿಂದ ಹೊರತಾ?," ಎಂದು ಪ್ರಶ್ನಿಸಿದರು.
"ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು, ಮೇಲ್ವರ್ಗದವರು ಇದನ್ನು ಕೆಲಸವೆಂದರಿಯಬೇಕು. ಹಾಗಾದಾಗ ಮಾತ್ರ ಶೋಷಣೆ ನಿಲ್ಲುತ್ತದೆ. 30 ವರ್ಷದಿಂದ ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ," ಎಂದು ಹೇಳಿದರು.
"ಹಿಂದಿನ ಸರ್ಕಾರ ಎಸ್ಸಿಪಿ, ಟಿಎಸ್ಪಿ ಜಾರಿಗೆ ತಂದಿತು. ಈಗ ನಮಗೆ ಮೀಸಲಾತಿ ಹೆಚ್ಚಳವಾಗಬೇಕು. ನಮ್ಮ ಮಕ್ಕಳಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಬೇಕು. ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಳವಾಗಬೇಕು. ಈ ಬಗ್ಗೆ ಸರ್ಕಾರ ಆಯೋಗ ರಚಿಸಿದೆ. ಆದರೆ ಸಬ್ ಕಮಿಟಿಗೆ ಬಂದಾಗ ನಮಗೆ ನೋವಾಯ್ತು. ಈಗ ಉನ್ನತ ಮಟ್ಟದ ಸಮಿತಿಗೆ ಹೋಗಿದೆ," ಎಂದರು.
"ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ನಮಗೆ ನಂಬಿಕೆಯಿದೆ. ಆರ್ಥಿಕವಾಗಿ ಸಬಲರಾದವರು ಮೀಸಲಾತಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ನ್ಯಾಯಯುತವಾಗಿ ಕೇಳುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ನೀವು ಈಡೇರಿಸಬೇಕು," ಎಂದು ಪ್ರಸನ್ನಾನಂದಪುರಿ ಶ್ರೀಗಳು ಸಿಎಂಗೆ ನೆನಪು ಮಾಡಿಕೊಟ್ಟರು.
2020-21ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರು
ಡಾ. ಕೆ.ಆರ್. ಪಾಟೀಲ್, ಸಾಮಾಜಿಕ ಸೇವೆ
ಡಾ. ಬಿ.ಎಲ್. ವೇಣು, ಸಾಹಿತ್ಯ ಕ್ಷೇತ್ರ
ಗೌರಿ ಕೊರಗ, ಸಾಮಾಜಿಕ ಸೇವೆ
ಮಾರಪ್ಪ ನಾಯಕ, ಸಂಘಟನೆ
ತಿಪ್ಪೇಸ್ವಾಮಿ, ಸಾಮಾಜಿಕ ಸೇವೆ
2021-22ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರು
ಕೆ.ಸಿ.ನಾಗಾರಾಜ್, ಸಾಮಾಜಿಕ ಕ್ಷೇತ್ರ
ಲಕ್ಷ್ಮೀ ಗಣಪತಿ ಸಿದ್ಧಿ, ಇತರೆ
ಎಸ್.ಆರ್. ನಿರಂಜನ್, ಶಿಕ್ಷಣ ಕ್ಷೇತ್ರ
ಭಟ್ರಳ್ಳಿ ಗೂಳಪ್ಪ- ಇತರೆ
ಅಶ್ವಥ್ ರಾಮಯ್ಯ, ಸಮಾಜಸೇವೆ
ಜಂಬಯ್ಯ ನಾಯಕ್, ಸಮಾಜಸೇವೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, "ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಜಾರಿಗೆ ತರಲಾಯಿತು," ಎಂದರು.
"ಇನ್ನು ನಮ್ಮ ಅವಧಿಯಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಗೆ ಸಚಿವಾಲಯ ರಚಿಸಲಾಯಿತು. ದಶಕಗಳಿಂದ ವಾಲ್ಮೀಕಿ ಮೀಸಲಾತಿ ಹೋರಾಟ ನಡೆಯುತ್ತಿದೆ. ಮೀಸಲಾತಿ ಬಗ್ಗೆಯೂ ಸಿಎಂ ಬೊಮ್ಮಾಯಿಯವರು ನಮ್ಮ ಹಿಂದಿದ್ದಾರೆ. ನಮ್ಮ ಸಮಾಜಕ್ಕೆ ಸಿಎಂ ಮೀಸಲಾತಿ ಹೆಚ್ಚಳ ಮಾಡುತ್ತಾರೆಂಬ ವಿಶ್ವಾಸವಿದೆ," ಎಂದು ತಿಳಿಸಿದರು.
Recommended Video
"ಪರಿಶಿಷ್ಟರಿಗೆ 7 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ, ಮುಂದೆ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ನಮ್ಮ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಬುಡಕಟ್ಟು ಜನರ ಅಭಿವೃದ್ಧಿಗೆ ಸರ್ಕಾರ ಪೂರಕವಾಗಿದೆ," ಎಂದು ಸಚಿವ ಶ್ರೀರಾಮುಲು ಹೇಳಿದರು.